ಏಷ್ಯನ್ ಕ್ರೀಡಾಕೂಟ: ಭಾರತದ ಸ್ಪರ್ಧಿಗಳಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ಜಪಾನ್‌ನ ಐಚಿ-ನಗೋಯಾದಲ್ಲಿ 2026 ರ ಏಷ್ಯನ್ ಕ್ರೀಡಾಕೂಟ ಉದ್ಘಾಟನೆಗೊಂಡಿದೆ. ಸುಮಾರು 500 ಭಾರತೀಯ ಕ್ರೀಡಾಪಟುಗಳ ತಂಡಕ್ಕೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. ಶೂಟರ್ ಮನು ಭಾಕರ್ ಮತ್ತು ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ಭಾರತದ ಧ್ವಜಾದಾರಿಗಳಾಗಿದ್ದಾರೆ. ಭಾರತದ ಅಭಿಯಾನ ಶುರುವಾಗಿದ್ದು, ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್‌ಗೆ ತಲುಪಿದೆ.

ಏಷ್ಯನ್ ಕ್ರೀಡಾಕೂಟ: ಭಾರತದ ಸ್ಪರ್ಧಿಗಳಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Image Credit source: PTI

Updated on: Sep 19, 2026 | 9:46 PM

ಜಪಾನ್‌ನ ಐಚಿ-ನಗೋಯಾದಲ್ಲಿ 2026 ರ ಏಷ್ಯನ್ ಕ್ರೀಡಾಕೂಟ ಇಂದು ನಡೆದ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಿದೆ. ಸೆಪ್ಟೆಂಬರ್ 19 ರ ಶನಿವಾರದಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಜಪಾನ್‌ನ ಚಕ್ರವರ್ತಿ ನರುಹಿಟೊ 20 ನೇ ಏಷ್ಯನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಇದರೊಂದಿಗೆ, ಸುಮಾರು 11,000 ಕ್ರೀಡಾಪಟುಗಳ ನಡುವಿನ ಸ್ಪರ್ಧೆಗಳ ಪ್ರಯಾಣ ಪ್ರಾರಂಭವಾಗಿದೆ. ಈ ಕ್ರೀಡಾಕೂಟದಲ್ಲಿ ಸರಿಸುಮಾರು 500 ಭಾರತೀಯ ಕ್ರೀಡಾಪಟುಗಳು ಸಹ ಭಾಗವಹಿಸುತ್ತಿದ್ದು ಅವರಿಗೆಲ್ಲ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರುವ ಮೂಲಕ ಪ್ರೋತ್ಸಾಹಿಸಿದ್ದಾರೆ.

ಸ್ಪರ್ಧಿಗಳಿಗೆ ಪ್ರಧಾನಿ ಶುಭಾಶಯ

ಶನಿವಾರ ಸಂಜೆ ನಗೋಯಾದ ಮಿಹುಜೊ ಪಾರ್ಕ್ ಕ್ರೀಡಾಂಗಣದಲ್ಲಿ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಿತು. ಕ್ರೀಡಾಕೂಟ ಆರಂಭವಾದ ಸ್ವಲ್ಪ ಸಮಯದ ನಂತರ, ಪ್ರಧಾನಿ ಮೋದಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಪ್ರಧಾನಿ ಮೋದಿ ತಮ್ಮ ‘ಎಕ್ಸ್’ ಹ್ಯಾಂಡಲ್‌ನಲ್ಲಿ ‘ಏಷ್ಯನ್ ಕ್ರೀಡಾಕೂಟ ಐಚಿ-ನಗೋಯಾದಲ್ಲಿ ಪ್ರಾರಂಭವಾಗುತ್ತಿದೆ. ನಾನು ಭಾರತೀಯ ತಂಡಕ್ಕೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಪ್ರತಿಯೊಬ್ಬ ಆಟಗಾರನೂ ನಂಬಲಾಗದಷ್ಟು ಕಠಿಣ ಪರಿಶ್ರಮ ಹಾಕಿದ್ದು, ಅಪಾರ ಸಮರ್ಪಣೆ ಮತ್ತು ಉತ್ಸಾಹವನ್ನು ತೋರಿಸಿದ್ದಾರೆ. ಭಾರತವು ಅವರ ಬಗ್ಗೆ ಹೆಮ್ಮೆಪಡುತ್ತದೆ. ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿ, ಚೆನ್ನಾಗಿ ಆಡಲಿ ಮತ್ತು ಮಿಂಚಲಿ ಎಂದು ಬರೆದು ಶುಭಾಶಯ ಕೋರಿದ್ದಾರೆ.

ಮನು-ಪವನ್ ಧ್ವಜಾದಾರಿಗಳು

ನಗೋಯಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ 45 ದೇಶಗಳ ಸಾವಿರಾರು ಕ್ರೀಡಾಪಟುಗಳು ತಮ್ಮ ರಾಷ್ಟ್ರೀಯ ಸಮವಸ್ತ್ರ ಧರಿಸಿ ಧ್ವಜಗಳನ್ನು ಬೀಸುತ್ತಾ ಭಾಗವಹಿಸಿದ್ದರು. ಅವರನ್ನು ಸ್ವಾಗತಿಸಲು ಸಾವಿರಾರು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ಶೂಟರ್ ಮನು ಭಾಕರ್ ಮತ್ತು ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ಸಮಾರಂಭದಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದರು.

ಏಷ್ಯನ್ ಗೇಮ್ಸ್​ಗೆ ಅದ್ಧೂರಿ ಚಾಲನೆ; ಭಾರತದ ಧ್ವಜದಾರಿಗಳಾದ ಮನು, ಪವನ್

ಭಾರತದ ಅಭಿಯಾನ ಆರಂಭವಾಗಿದೆ

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಈಗಾಗಲೇ ತನ್ನ ಅಭಿಯಾನವನ್ನು ಪ್ರಾರಂಭಿಸಿದೆ. ಕ್ರೀಡಾಕೂಟದ ಅಧಿಕೃತ ಉದ್ಘಾಟನೆಗೂ ಮೊದಲೇ, ಭಾರತವು ಸೆಪ್ಟೆಂಬರ್ 18 ರಂದು ನಡೆದ ಕ್ವಾರ್ಟರ್-ಫೈನಲ್‌ನಲ್ಲಿ ಆತಿಥೇಯ ಜಪಾನ್ ತಂಡವನ್ನು ಸೋಲಿಸಿ, ಸೆಮಿಫೈನಲ್‌ಗೆ ಮುನ್ನಡೆದಿದೆ. ಸೆಮಿಫೈನಲ್​ನಲ್ಲಿ ಭಾರತ ಬಾಂಗ್ಲಾದೇಶವನ್ನು ಎದುರಿಸಲಿದೆ. ಏತನ್ಮಧ್ಯೆ, ಸೆಪ್ಟೆಂಬರ್ 19 ರಂದು ನಡೆದ ಮಹಿಳಾ ಟೆಕ್ಬಾಲ್ ಸಿಂಗಲ್ಸ್ ಸ್ಪರ್ಧೆಯಲ್ಲಿ, ಭಾರತದ ಕ್ವಿಮ್ಸಿ ಡಿ’ಸೋಜಾ ಸೆಮಿಫೈನಲ್‌ನಲ್ಲಿ ಸೋತಿದ್ದು, ಈಗ ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 pm, Sat, 19 September 26

Loading...
Unable to load recommendations.
Follow Us