ಪ್ರಾಮಾಣಿಕರಾಗಿಬೇಕು… ಡ್ರೆಸ್ಸಿಂಗ್ ರೂಮ್ ವಿವಾದದ ಬಗ್ಗೆ ಮೌನ ಮುರಿದ ಗಂಭೀರ್

India vs Australia: ಮೆಲ್ಬೋರ್ನ್​​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸಿತ್ತು. ಈ ಸೋಲಿನ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್​ನಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹಿರಿಯ ಆಟಗಾರರ ವಿರುದ್ಧ ಕಿಡಿಕಾರಿದ್ದಾರೆ ಎಂದು ವರದಿಯಾಗಿತ್ತು. ಭಾರೀ ಚರ್ಚೆಗೆ ಕಾರಣವಾಗಿರುವ ಈ ಸುದ್ದಿಯ ಕುರಿತು ಇದೀಗ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.

ಪ್ರಾಮಾಣಿಕರಾಗಿಬೇಕು... ಡ್ರೆಸ್ಸಿಂಗ್ ರೂಮ್ ವಿವಾದದ ಬಗ್ಗೆ ಮೌನ ಮುರಿದ ಗಂಭೀರ್
Gautam Gambhir

Updated on: Jan 02, 2025 | 1:24 PM

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಬಗ್ಗೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದ ಮುನ್ನ ದಿನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಗಂಭೀರ್, ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಾಮಾಣಿಕರು ಇರುವವರೆಗೂ ಭಾರತೀಯ ಕ್ರಿಕೆಟ್ ಸುರಕ್ಷಿತರ ಕೈಯಲ್ಲಿರುತ್ತದೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ಕೋಚ್ ಮತ್ತು ಆಟಗಾರರ ನಡುವಿನ ಡ್ರೆಸ್ಸಿಂಗ್ ರೂಮ್ ಚರ್ಚೆಗಳು ಅಷ್ಟಕ್ಕೆ ಸೀಮಿತವಾಗಿರಬೇಕು. ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಾಮಾಣಿಕರು ಇರುವವರೆಗೂ ಭಾರತೀಯ ಕ್ರಿಕೆಟ್ ಸುರಕ್ಷಿತರ ಕೈಯಲ್ಲಿದೆ. ಒಂದೇ ಒಂದು ವಿಷಯವು ನಿಮ್ಮನ್ನು ತಂಡದಲ್ಲಿ ಇರಿಸಬಹುದು. ಅದು ನಿಮ್ಮ ಪ್ರದರ್ಶನವಾಗಿದೆ.

ಮೊದಲು ತಂಡ. ಪ್ರತಿಯೊಬ್ಬರೂ ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಆಟಗಾರ ಮತ್ತು ತರಬೇತುದಾರರ ನಡುವಿನ ಚರ್ಚೆಗಳು ಅವರ ನಡುವೆ ಇರಬೇಕು. ಡ್ರೆಸ್ಸಿಂಗ್ ರೂಮ್​ನಲ್ಲೇ ಎಲ್ಲಾ ಸಂಭಾಷಣೆಗಳು ಉಳಿಯಬೇಕು ಎಂದು ಗಂಭೀರ್ ಹೇಳಿದ್ದಾರೆ.

ಕೆಲ ವರದಿಗಳು ನಿಜವಲ್ಲ. ಯಾವುದೇ ವರದಿಗಳಿಗೆ ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಕೆಲವು ಪ್ರಾಮಾಣಿಕ ಮಾತುಗಳಿವೆ, ಅದನ್ನೇ ನಾನು ಹೇಳಬಲ್ಲೆ. ಪ್ರಾಮಾಣಿಕತೆ ಬಹಳ ಮುಖ್ಯ. ನೀವು ದೊಡ್ಡದನ್ನು ಸಾಧಿಸಲು ಬಯಸಿದರೆ ಪ್ರಾಮಾಣಿಕತೆ ಬಹಳ ಮುಖ್ಯ ಎಂದು ಗೌತಮ್ ಗಂಭೀರ್ ಪುನರುಚ್ಚರಿಸಿದ್ದಾರೆ.

ನಮ್ಮ ಡ್ರೆಸ್ಸಿಂಗ್ ರೂಮ್​ನಲ್ಲಿ ಒಂದೇ ಒಂದು ಮಾತುಕತೆ ನಡೆದಿದ್ದು, ಅದು ಟೆಸ್ಟ್ ಗೆಲ್ಲುವುದು ಹೇಗೆ ಎಂಬುದಾಗಿದೆ. ಇದರ ಹೊರತಾಗಿ ಬೇರಾವ ಮಾತುಕತೆಯೂ ನಡೆದಿಲ್ಲ. ಈ ಟೆಸ್ಟ್ ಪಂದ್ಯ ಎಷ್ಟು ಮಹತ್ವದ್ದಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದರ ಹೊರತಾಗಿ ಬೇರೆ ಯಾವುದೇ ಮಾತುಕತೆ ಇಲ್ಲ ನಡೆದಿಲ್ಲ. ಹೀಗಾಗಿ ಅದರ ಬಗ್ಗೆ ಚರ್ಚೆ ಅನಗತ್ಯ ಎಂದು ಗಂಭೀರ್ ಹೇಳಿದ್ದಾರೆ.

ನಮ್ಮ ಮುಂದಿನ ಗುರಿ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯ. ಸಿಡ್ನಿ ಟೆಸ್ಟ್ ಗೆಲ್ಲುವತ್ತ ಗಮನ ಹರಿಸಲಾಗುವುದು ಮತ್ತು ಸರಣಿಯ ಅಂತಿಮ ಪಂದ್ಯದಲ್ಲಿ ತಂಡವು ಪ್ರಬಲ ಪ್ರದರ್ಶನ ನೀಡುವ ಬಗ್ಗೆ “ಅತ್ಯಂತ ವಿಶ್ವಾಸವಿದೆ” ಎಂದು ಗಂಭೀರ್ ಹೇಳಿದ್ದಾರೆ.

ಅಲ್ಲದೆ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ನಾವು ಸರಣಿಯನ್ನು 2-2 ಅಂತರದಿಂದ ಸಮಗೊಳಿಸಲಿದ್ದೇವೆ ಎಂದು ಇದೇ ವೇಳೆ ಗೌತಮ್ ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡದ ಸರಣಿ ಗೆಲ್ಲುವ ಕನಸಿಗೆ ಬ್ರೇಕ್ ಹಾಕಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: IPL ನಲ್ಲಿಲ್ಲ ಚಾನ್ಸ್… PSL ನತ್ತ ಮುಖ ಮಾಡಿದ ಡೇವಿಡ್ ವಾರ್ನರ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್ ಪಂದ್ಯವು ಶುಕ್ರವಾರದಿಂದ (ಜ.3) ಶುರುವಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸರಣಿಯನ್ನು ಸಮಬಲದಲ್ಲಿ ಅಂತ್ಯಗೊಳಿಸಬಹುದು. ಹೀಗಾಗಿ ಈ ಪಂದ್ಯವು ಭಾರತದ ಪಾಲಿಗೆ ನಿರ್ಣಾಯಕ. ಈ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ಪಡೆ ಸೋಲು ತಪ್ಪಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

 

 

Published On - 1:24 pm, Thu, 2 January 25

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us