
PSL 2026: ಪಾಕಿಸ್ತಾನ್ ಸೂಪರ್ ಲೀಗ್ನಿಂದ ಒಂದು ವರ್ಷದ ನಿಷೇಧಕ್ಕೆ ಒಳಗಾಗಿರುವ ಶ್ರೀಲಂಕಾ ಆಟಗಾರ ದುಸನ್ ಶಾನಕ (Dasun Shanaka) ಇದೀಗ ಪಾಕ್ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪಿಎಸ್ಎಲ್ ಟೂರ್ನಿಯ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಶಾನಕ ಅವರ ಮೇಲೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ಒಂದು ವರ್ಷದ ನಿಷೇಧ ಹೇರಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಲಂಕಾ ಆಟಗಾರ ಇದೀಗ ತಮ್ಮ ನಿರ್ಧಾರಕ್ಕಾಗಿ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ.
ಪಿಎಸ್ಎಲ್ 2026ರಲ್ಲಿ ಲಾಹೋರ್ ಖಲಂದರ್ಸ್ ತಂಡವನ್ನು ಪ್ರತಿನಿಧಿಸಬೇಕಿದ್ದ ದಸುನ್ ಶಾನಕ, ಮಾರ್ಚ್ 21ರಂದು ವೈಯಕ್ತಿಕ ಕಾರಣ ನೀಡಿ ಲೀಗ್ನಿಂದ ಹೊರನಡೆದಿದ್ದರು. ಆದರೆ, ಇದರ ಬೆನ್ನಲ್ಲೇ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಸ್ಯಾಮ್ ಕರನ್ ಅವರ ಬದಲಿ ಆಟಗಾರನಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದರು.
ಇದು ತ್ರಿಪಕ್ಷೀಯ ಒಪ್ಪಂದದ ನೇರ ಉಲ್ಲಂಘನೆ ಎಂದು ಪರಿಗಣಿಸಿರುವ ಪಿಸಿಬಿ, ಅವರನ್ನು 2027ರ ಪಾಕಿಸ್ತಾನ್ ಸೂಪರ್ ಲೀಗ್ ಆವೃತ್ತಿಯಿಂದಲೂ ಹೊರಗಿಟ್ಟಿದೆ.
ತಮ್ಮ ಮೇಲಿನ ನಿಷೇಧದ ನಂತರ ಪ್ರತಿಕ್ರಿಯಿಸಿರುವ ದಸುನ್ನ ಶಾನಕ, “ನನ್ನ ನಿರ್ಧಾರದಿಂದ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಲಾಹೋರ್ ಖಲಂದರ್ಸ್ ಮ್ಯಾನೇಜ್ಮೆಂಟ್ಗೆ ಆಗಿರುವ ನೋವಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ಆ ಸಮಯದಲ್ಲಿ ಬೇರೆ ಯಾವುದೇ ಟೂರ್ನಿ ಆಡುವ ಉದ್ದೇಶ ನನಗಿರಲಿಲ್ಲ. ಪಾಕಿಸ್ತಾನದ ಬಗ್ಗೆ ನನಗೆ ಅಪಾರ ಗೌರವವಿದ್ದು, ಭವಿಷ್ಯದಲ್ಲಿ ಮತ್ತೆ ಈ ಲೀಗ್ನಲ್ಲಿ ಆಡುವ ಆಶಯ ಹೊಂದಿದ್ದೇನೆ” ಎಂದು ತಿಳಿಸಿದ್ದಾರೆ.
ಇದೀಗ ದಸುನ್ ಶಾನಕ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅತ್ತ ಲಾಹೋರ್ ಖಲಂದರ್ಸ್ ತಂಡವು ಶಾನಕ ಅವರ ಬದಲಿಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ವಿಧಿಸಿರುವ ನಿಷೇಧದಿಂದಾಗಿ ದುಸನ್ ಶಾನಕ ಮುಂದಿನ ವರ್ಷದ ಪಿಎಸ್ಎಲ್ ಹರಾಜಿನಲ್ಲೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಶಾನಕಗೆ ಚಾನ್ಸ್ ಸಿ್ಗುವ ಸಾಧ್ಯತೆಯಿಲ್ಲ.
ಇದನ್ನೂ ಓದಿ: ದಾಖಲೆ… ವಿಶ್ವ ದಾಖಲೆ… ಅಭಿಷೇಕ್ ಶರ್ಮಾ ಹೆಸರಿಗೆ ಭರ್ಜರಿ ದಾಖಲೆ
ಏಕೆಂದರೆ ಶ್ರೀಲಂಕಾದ ಸ್ಟಾರ್ ಆಟಗಾರ ಎನಿಸಿಕೊಂಡಿರುವ ಶಾನಕ ಕಳೆದ 6 ಮ್ಯಾಚ್ಗಳಲ್ಲೂ ಬೆಂಚ್ ಕಾದಿದ್ದಾರೆ. ಅತ್ತ ರಾಜಸ್ಥಾನ್ ರಾಯಲ್ಸ್ ತಂಡವು ವಿದೇಶಿ ಆಟಗಾರರನ್ನಾಗಿ ಶಿಮ್ರಾನ್ ಹೆಟ್ಮೆಯರ್, ಡೊನಾವನ್ ಫೆರೇರಾ, ಜೋಫ್ರಾ ಆರ್ಚರ್ ಹಾಗೂ ನಾಂಡ್ರೆ ಬರ್ಗರ್ ಅವರನ್ನು ಕಣಕ್ಕಿಳಿಸುತ್ತಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲೂ ದಸುನ್ ಶಾನಕಗೆ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲು ಅವಕಾಶ ಸಿಗುವುದು ಡೌಟ್ ಎಂದೇ ಹೇಳಬಹುದು.