
ಸದ್ಯ ಟೀಂ ಇಂಡಿಯಾ ಪಾಳಯದಲ್ಲಿ ಸಖತ್ ಚರ್ಚೆಯಾಗುತ್ತಿರುವ ಆಟಗಾರನೆಂದರೆ ಅದು ಕನ್ನಡಿಗ ಕೆಎಲ್ ರಾಹುಲ್ (KL Rahul). ಕಳೆದ ಕೆಲವು ತಿಂಗಳುಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ರಾಹುಲ್ಗೆ ಹಂತಹಂತವಾಗಿ ಟೀಂ ಇಂಡಿಯಾದ (Team India) ಕದ ಮುಚ್ಚಲಾರಂಭಿಸಿದೆ. ಈ ಹಿಂದೆ ತಂಡದ ಖಾಯಂ ಉಪನಾಯಕನಾಗಿ ಬಿಂಭಿಸಿಕೊಂಡಿದ್ದ ರಾಹುಲ್ಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟಕರವಾಗಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ (India Vs Australia) ತನ್ನ ಉಪನಾಯಕನ ಹುದ್ದೆ ಕಳೆದುಕೊಂಡಿರುವ ರಾಹುಲ್, ತಂಡದಿಂದಲೂ ಹೊರಹೊಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣವೂ ಇದ್ದು, ಈ ಸರಣಿಯಲ್ಲಿ ಆಡಿರುವ 2 ಪಂದ್ಯಗಳ 3 ಇನ್ನಿಂಗ್ಸ್ಗಳಲ್ಲಿ ರಾಹುಲ್ ಕೇವಲ 20, 17, 1 ರನ್ ಗಳಿಸಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಬೇಕು ಎಂಬುದು ಕ್ರಿಕೆಟ್ ಪಂಡಿತರ ವಾದವಾಗಿದೆ. ಆದರೆ ಇದೆಲ್ಲದರ ನಡುವೆ ಫಾರ್ಮ್ ಕೊರತೆಯಿಂದ ನರಳುತ್ತಿರುವ ರಾಹುಲ್, ನಾಗ್ಪುರ ಟೆಸ್ಟ್ ಆರಂಭಕ್ಕೂ ಮುನ್ನ ಬಾಬಾ ಮಹಾಕಾಲ್ (Mahakal) ದೇವಾಲಯಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ.
ಮೂರನೇ ಟೆಸ್ಟ್ಗೂ ಮುನ್ನ ರಾಹುಲ್ ಪತ್ನಿ ಅಥಿಯಾ ಶೆಟ್ಟಿಯೊಂದಿಗೆ ಮಹಾಕಾಲ್ ಮಂದಿರಕ್ಕೆ ಭೇಟಿ ನೀಡಿದ್ದು, ಭಸ್ಮ ಆರತಿಯಲ್ಲಿಯೂ ಭಾಗವಹಿಸಿದ್ದರು. ಮದುವೆಯ ನಂತರ ದಂಪತಿಗಳಿಬ್ಬರು ಮೊದಲ ಬಾರಿಗೆ ಮಹಾಕಾಲ್ ದೇವಾಲಯಕ್ಕೆ ಭೇಟಿ ನೀಡಿದ್ದು, ಇಬ್ಬರು ಮಹಾಕಾಲ್ ಮಂದಿರದಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ. ಜೋಡಿಗಳಿಬ್ಬರು ಮೊದಲ ಬಾರಿಗೆ ದೇವಾಲಯಕ್ಕೆ ಭೇಟಿ ನೀಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ವಾಸ್ತವವಾಗಿ ಎರಡನೇ ಮತ್ತು ಮೂರನೇ ಟೆಸ್ಟ್ ನಡುವೆ ಸುಮಾರು 10 ದಿನಗಳ ಸಮಯಾವಕಾಶವಿತ್ತು. ಅಲ್ಲದೆ ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಕೇವಲ 3 ದಿನಗಳಲ್ಲಿ ಗೆದ್ದುಕೊಂಡಿತು. ಹೀಗಾಗಿ ಉಭಯ ತಂಡಗಳಿಗೂ ಕೆಲವು ದಿನಗಳ ಕಾಲ ವಿರಾಮ ನೀಡಲಾಗಿದ್ದು, ಫೆಬ್ರವರಿ 25 ರಂದು ಇಂದೋರ್ನಲ್ಲಿ ತಂಡದೊಂದಿಗೆ ಕೂಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು. ಹೀಗಾಗಿ ರಾಹುಲ್, ಬಿಡುವಿನ ವೇಳೆಯಲ್ಲಿ ಪತ್ನಿಯೊಂದಿಗೆ ತಿರುಪತಿ ದೇವಸ್ಥಾನಕ್ಕೂ ತೆರಳಿದ್ದರು.
ರೋಹಿತ್ ಶರ್ಮಾ ನೇತೃತ್ವದ ತಂಡ 4 ಟೆಸ್ಟ್ಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಇದೀಗ ಇಂದೋರ್ನಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳುವುದು ಮಾತ್ರವಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ಪ್ರವೇಶಿಸುವುದರ ಮೇಲೆ ಕಣ್ಣಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ಗೆ ಈ ಪಂದ್ಯದಲ್ಲಿ ಅವಕಾಶ ಸಿಕ್ಕರೆ ಅವರ ಬ್ಯಾಟ್ನಿಂದ ಒಂದು ಬಿಗ್ ಇನ್ನಿಂಗ್ಸ್ ಬರಲೇಬೇಕಿದೆ. ಇಲ್ಲದಿದ್ದರೆ ಈಗ ಉಪನಾಯಕತ್ವ ಕಳೆದುಕೊಂಡಿರುವ ರಾಹುಲ್, ತಂಡದಿಂದಲೂ ಹೊರಹೋಗುವುದು ಖಚಿತ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:28 pm, Sun, 26 February 23