T20 World cup: ಭಾರತ ಟಿ-20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಸಾಧ್ಯತೆ: ಆ ಒಂದು ಕ್ಷಣಕ್ಕೆ ಕಾದು ಕುಳಿತಿದೆ ಬಿಸಿಸಿಐ

IPL 2021: ಟಿ-20 ವಿಶ್ವಕಪ್​ಗೆ ಪ್ರಕಟವಾಗಿರುವ ಟೀಮ್ ಇಂಡಿಯಾ ಫೈನಲ್ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಐಪಿಎಲ್ 2021ರ ನಡುವೆ ಭಾರತದ ಈ ತಂಡದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕೂಡ ಇದೆ.

T20 World cup: ಭಾರತ ಟಿ-20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಸಾಧ್ಯತೆ: ಆ ಒಂದು ಕ್ಷಣಕ್ಕೆ ಕಾದು ಕುಳಿತಿದೆ ಬಿಸಿಸಿಐ
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಪ್ರಕಟಗೊಂಡಿದೆ. 15 ಸದಸ್ಯರ ಬಳಗದಲ್ಲಿ 7 ಬ್ಯಾಟ್ಸ್​ಮನ್​ಗಳಿದ್ದಾರೆ. ಇನ್ನು ಮೂವರು ವೇಗಿಗಳಿಗೆ ಸ್ಥಾನ ನೀಡಲಾಗಿದೆ. ಹಾಗೆಯೇ ಒಟ್ಟು ಐದು ಸ್ಪಿನ್​ ಬೌಲರುಗಳನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಪರಿಪೂರ್ಣ ಸ್ಪಿನ್ನರ್​ಗಳಾದರೆ, ಸ್ಪಿನ್ ಆಲ್​ರೌಂಡರ್ ಆಗಿ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂದರೆ ತಂಡದಲ್ಲಿ ಸ್ಪಿನ್ನರ್​ಗಳಿಗೆ ಮಣೆ ಹಾಕಲಾಗಿದೆ. ಇದುವೇ ಟೀಮ್ ಇಂಡಿಯಾ ಪಾಲಿಗೆ ತಿರುಮಂತ್ರವಾಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಯುಎಇ ಪಿಚ್​ ಸ್ಪಿನ್ನರ್​ಗಳಿಗೆ ಸಹಕಾರಿ ಎನ್ನಲಾಗುತ್ತದೆ. ಆದರೆ ಅಂಕಿ ಅಂಶಗಳನ್ನು ಗಮನಿಸಿದರೆ ಯುಎಇನಲ್ಲಿ ಅತ್ಯಂತ ಯಶಸ್ಸು ಸಾಧಿಸಿರುವುದು ವೇಗಿಗಳು ಎಂಬುದು ವಿಶೇಷ.
Follow us
| Updated By: Vinay Bhat

Updated on: Sep 09, 2021 | 10:19 AM

ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ (ICC T20 World cup) ಟೂರ್ನಿಗೆ ಬುಧವಾರ ಭಾರತ (India) ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಮಾಡಿದೆ. ಸಂಭಾವ್ಯ ತಂಡದ ಪಟ್ಟಿಯಲ್ಲಿದ್ದ ಕೆಲವು ಆಟಗಾರರನ್ನು ಕೈಬಿಟ್ಟು ಆಯ್ಕೆ ಸಮಿತಿ ಶಾಕ್ ನೀಡಿದೆ. ಪ್ರಮುಖವಾಗಿ ಶಿಖರ್ ಧವನ್ (Shikhar Dhawan), ಯುಜ್ವೇಂದ್ರ ಚಾಹಲ್ (Yuzvendra Chahal), ಟಿ. ನಟರಾಜನ್ ಅವರನ್ನು ತಂಡದಿಂದ ಹೊರಗಿಟಟ್ಟಿದ್ದರೆ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಮತ್ತು ದೀಪಕ್ ಚಹರ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರರನ್ನಾಗಿ ಹೆಸರಿಸಿದ್ದು ಅಚ್ಚರಿಗೆ ಕಾರಣವಾಗಿದೆ. ರವಿಚಂದ್ರನ್ ಅಶ್ವಿನ್ (Ravichandran Ashwin) ಬರೋಬ್ಬರಿ 4 ವರ್ಷಗಳ ಬಳಿಕ ಭಾರತ ಟಿ-20 ತಂಡ ಸೇರಿದ್ದಾರೆ. ಈ ಮೂಲಕ ಬಿಸಿಸಿಐ ವಿರಾಟ್‌ ಕೊಹ್ಲಿ (Virat Kohli) ಸಾರಥ್ಯದ 15 ಸದಸ್ಯರ ತಂಡವನ್ನು ಹೆಸರಿಸಿದೆ.

ಆದರೆ, ಇದೇ ತಂಡ ಫೈನಲ್ ಎಂದು ಹೇಳಲು ಸಾಧ್ಯವಿಲ್ಲ, ಭಾರತದ ಈ ತಂಡದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕೂಡ ಇದೆ. ಯಾಕಂದ್ರೆ ಈಗ ಪ್ರಕಟಿಸಿರುವ ತಂಡದಲ್ಲಿ ಬೇಕಿದ್ದರೆ ಬದಲಾವಣೆ ಮಾಡಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಕ್ಟೋಬರ್ 10 ರ ವರೆಗೆ ಅವಕಾಶ ನೀಡಿದೆ. ಹೀಗಾಗಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2021 ಎರಡನೇ ಚರಣದಲ್ಲಿ ಟಿ-20 ವಿಶ್ವಕಪ್​ಗೆ ಆಯ್ಕೆಯಾಗದ ಆಟಗಾರರು ಉತ್ತಮ ಪ್ರದರ್ಶನ ತೋರಿದರೆ ಅವರು ಅವಕಾಶ ಪಡೆಯುವ ಸಾಧ್ಯತೆ ಇದೆ. ಅಂತೆಯೆ ಆಯ್ಕೆಯಾದ ಆಟಗಾರರು ಕಳಪೆ ಆಟವಾಡಿದರೆ ಅಥವಾ ಇಂಜುರಿಗೆ ತುತ್ತಾದರೆ ಅವಕಾಶವಂಚಿತರಿಗೆ ಚಾನ್ಸ್ ಸಿಗಬಹುದು.

ಸದ್ಯ ಅವಕಾಶ ವಂಚಿತ ಆಟಗಾರರ ಪಟ್ಟಿಯಲ್ಲಿ ಶಿಖದರ್ ಧವನ್, ಯುಜ್ವೇಂದ್ರ ಚಹಾಲ್ ಮತ್ತು ಟಿ. ನಟರಾಜನ್ ಮೊದಲಿಗರಾಗಿದ್ದರೆ, ನಂತರದಲ್ಲಿ ಸಂಜು ಸ್ಯಾಮ್ಸನ್, ಪೃಥ್ವಿ ಶಾ, ಮನೀಶ್ ಪಾಂಡೆ, ಕ್ರನಾಲ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಕೂಡ ಇದ್ದಾರೆ.

ಆರ್. ಅಶ್ವಿನ್​ಗೆ ತೆರೆದ ಅವಕಾಶ:

ಅಶ್ವಿನ್ ಟೀಮ್ ಇಂಡಿಯಾ ಪರವಾಗಿ ಕೊನೆಯದಾಗಿ ಟಿ-20 ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದು 2017ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಬಳಿಕ ಅಶ್ವಿನ್ ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್​ನಲ್ಲಿ ಕಣಕ್ಕಿಳಿಯಲಿಲ್ಲ. ಈ ಸಂದರ್ಭದಲ್ಲಿ ಕುಲ್‌ದೀಪ್ ಯಾದವ್ ಹಾಗೂ ಚಾಹಲ್ ಟೀಮ್ ಇಂಡಿಯಾದಲ್ಲಿ ಮಿಂಚಲು ಆರಂಭಿಸಿದ ಕಾರಣ ಅಶ್ವಿನ್ ಸ್ಥಾನ ಕೈ ತಪ್ಪಿತ್ತು. ಸದ್ಯ ಕುಲ್-ಚಾ ಜೋಡಿ ಟಿ-20 ವಿಶ್ವಕಪ್ ತಂಡದಿಂದ ಹೊರಬಿದ್ದರೆ ಅಶ್ವಿನ್ ಆಯ್ಕೆಯಾಗಿದ್ದಾರೆ.

ಧೋನಿ ಮೆಂಟರ್:

ಅಚ್ಚರಿಯ ಬೆಳವಣಿಗೆ ಎಂಬಂತೆ ಮಾಜಿ ನಾಯಕ ಎಂಎಸ್‌ ಧೋನಿ ಅವರನ್ನು ತಂಡದ ಮೆಂಟರ್‌ ಆಗಿ ನೇಮಕ ಮಾಡಿರುವ ಬಿಸಿಸಿಐ, ಈ ಮೂಲಕ ಟೀಮ್ ಇಂಡಿಯಾಗೆ ಮತ್ತೆ ಕ್ಯಾಪ್ಟನ್‌ ಕೂಲ್‌ ಸೇವೆ ಲಭ್ಯವಾಗುವಂತೆ ಮಾಡಿದೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, “ಈ ಆಫರ್‌ಅನ್ನು ಎಂಎಸ್ ಧೋನಿ ಒಪ್ಪಿಕೊಂಡಿದ್ದಾರೆ. ಅವರು ಈ ಬಾರಿ ಸಹಾಯಕ ಸಿಬ್ಬಂಧಿಯಾಗಿ ತಂಡಕ್ಕೆ ನೆರವಾಗಲು ಸಿದ್ಧರಾಗಿದ್ದಾರೆ. ಧೋನಿ ಟೀಮ್ ಇಂಡಿಯಾಕ್ಕೆ ಬೆಂಬಲ ನೀಡಲು ರವಿಶಾಸ್ತ್ರಿ ಹಾಗೂ ಇತರ ಸಹಾಯಕ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ” ಎಂದು ಹೇಳಿದ್ದಾರೆ.

ಟಿ-20 ವಿಶ್ವಕಪ್​ಗೆ ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್‌ ಚಹರ್‌, ಆರ್‌.ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ವರುಣ್‌ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ.

ಮೆಂಟರ್‌: ಎಂ.ಎಸ್‌.ಧೋನಿ

ಹೆಚ್ಚುವರಿ ಆಟಗಾರರು: ಶ್ರೇಯಸ್‌ ಅಯ್ಯರ್‌, ಶಾರ್ದೂಲ್ ಠಾಕೂರ್‌, ದೀಪಕ್‌ ಚಹರ್‌.

T20 World Cup 2021: ಟಿ-20 ವಿಶ್ವಕಪ್​ನಿಂದ ಯುಜ್ವೇಂದ್ರ ಚಾಹಲ್​ರನ್ನು ಕೈಬಿಟ್ಟಿದ್ದಕ್ಕೆ ಅಸಲಿ ಕಾರಣ ಬಹಿರಂಗ

India vs England: ಐದನೇ ಟೆಸ್ಟ್​ಗೂ ಮುನ್ನ ಭಾರತಕ್ಕೆ ಒಂದು ಗುಡ್ ನ್ಯೂಸ್, ಎರಡು ಬ್ಯಾಡ್ ನ್ಯೂಸ್: ಏನದು?

(India T20 World cup: If unselected Players good in IPL 2021 Chance of changes in India T20 World Cup squad)