T20 World Cup 2021: ಟಿ-20 ವಿಶ್ವಕಪ್​ನಿಂದ ಯುಜ್ವೇಂದ್ರ ಚಾಹಲ್​ರನ್ನು ಕೈಬಿಟ್ಟಿದ್ದಕ್ಕೆ ಅಸಲಿ ಕಾರಣ ಬಹಿರಂಗ

India’s Squad For T20 World Cup 2021: ಟಿ-20 ವಿಶ್ವಕಪ್ ತಂಡದಿಂದ ಯುಜ್ವೇಂದ್ರ ಚಾಹಲ್ ಅವರನ್ನ ಹೊರಗಿಟ್ಟ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿದ್ದು, ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಈ ಬಗ್ಗೆ ಮಾತನಾಡಿದ್ದಾರೆ.

T20 World Cup 2021: ಟಿ-20 ವಿಶ್ವಕಪ್​ನಿಂದ ಯುಜ್ವೇಂದ್ರ ಚಾಹಲ್​ರನ್ನು ಕೈಬಿಟ್ಟಿದ್ದಕ್ಕೆ ಅಸಲಿ ಕಾರಣ ಬಹಿರಂಗ
Yuzvendra Chahal
Follow us
| Updated By: Vinay Bhat

Updated on: Sep 09, 2021 | 8:38 AM

ಮುಂದಿನ ತಿಂಗಳು ಅಕ್ಟೋಬರ್​ನಲ್ಲಿ ಆರಂಭವಾಗಲಿರುವ ಬಹುನಿರೀಕ್ಷಿತ ಐಸಿಸಿ ಪುರುಷರ ಟಿ-20 ವಿಶ್ವಕಪ್ ಟೂರ್ನಿಗೆ (ICC T20 World Cup 2021) ಭಾರತ ತಂಡ ಪ್ರಕಟವಾಗಿದೆ. ಊಹಿಸಲಾಗದ ಕೆಲವು ಅಚ್ಚರಿಯ ಬೆಳವಣಿಗೆಗಳೂ ನಡೆದಿವೆ. ಪ್ರಮುಖವಾಗಿ 2018 ರಿಂದ ಸೀಮಿತ ವೇಗದ ಕ್ರಿಕೆಟ್​ನಲ್ಲಿ ಭಾರತದ ನಂಬರ್ ಒನ್ ಸ್ಪಿನ್ನರ್ ಆಗಿ ಗುರುತಿಸಿಕೊಂಡ ಯುಜ್ವೇಂದ್ರ ಚಾಹಲ್ (Yuzvendra Chahal) ಟಿ-20 ವಿಶ್ವಕಪ್ ತಂಡದಿಂದ ಹೊರಬಿದ್ದರೆ, 4 ವರ್ಷಗಳ ಬಳಿಕ ರವಿಚಂದ್ರನ್ ಅಶ್ವಿನ್ (R Ashwin) ಭಾರತ ಟಿ-20 ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಟಿ. ನಟರಾಜನ್​ರನ್ನೂ ಕೈಬಿಡಲಾಗಿದ್ದು ವರುಣ್ ಚಕ್ರವರ್ತಿ ಮತ್ತು ಮುಂಬೈ ಮೂಲದ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್​ಗೆ (Rahul Chahar) ಅವಕಾಶ ಕಲ್ಪಿಸಲಾಗಿದೆ. ಇದರ ನಡುವೆ ಚಾಹಲ್​ ಆಯ್ಕೆ ಆಗದಿರಲು ಏನು ಕಾರಣ ಎಂಬುದು ಅನೇಕ ಪ್ರಶ್ನೆಯಾಗಿದೆ. ಇದಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ (Chetan Sharma, BCCI) ಉತ್ತರಿಸಿದ್ದಾರೆ.

ಹೌದು, ಟಿ-20 ವಿಶ್ವಕಪ್ ತಂಡದಿಂದ ಯುಜ್ವೇಂದ್ರ ಚಾಹಲ್ ಅವರನ್ನ ಹೊರಗಿಟ್ಟ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಇವರ ಬದಲು ಕೆಲ ಅಚ್ಚರಿಯ ನಿರ್ಧಾರಗಳನ್ನು ಬಿಸಿಸಿಐ ತೆಗೆದುಕೊಂಡಿದ್ದು, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ರಾಹುಲ್ ಚಹಾರ್ ಪ್ರಮುಖ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ. ಇವರ ಜೊತೆ ವರುಣ್ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ಕೂಡ ಸ್ಪಿನ್ನರ್​​ಗಳ ಪಟ್ಟಿಗೆ ಸೇರಿದ್ದಾರೆ.

ಸದ್ಯ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಚಾಹಲ್​ರನ್ನು ಕೈಬಿಟ್ಟ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಇವರು ಹೇಳುವ ಪ್ರಕಾರ, ನಮಗೆ ವೇಗವಾಗಿ ಬೌಲಿಂಗ್ ಮಾಡುವ ಸ್ಪಿನ್ನರ್‌ಗಳ ಅವಶ್ಯಕತೆಯಿತ್ತು. ಇದು ನಮ್ಮ ಮೊದಲ ಆದ್ಯತೆ ಯಾಗಿತ್ತು. ಆದ್ದರಿಂದ, ನಾವು ರಾಹುಲ್ ಚಹರ್​ಗೆ ಅವಕಾಶ ನೀಡಿದೆವು ಎಂದಿದ್ದಾರೆ.

ಇನ್ನೂ ಐಪಿಎಲ್​ನಿಂದ ಯಾರ್ಕರ್ ಕಿಂಗ್ ಎಂದೇ ಪ್ರಸಿದ್ಧಿ ಪಡೆದು ಬಹುಬೇಗ ಹೆಸರು ಗಳಿಸಿದ ಟಿ. ನಟರಾಜನ್ ಅವರನ್ನೂ ಕೈಬಿಡಲಾಗಿದೆ.​ ಐಪಿಎಲ್​ನಲ್ಲಿ ಸನ್​ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲಿಂಗ್​ ಅಸ್ತ್ರವಾಗಿ ಅವರು ಕಳೆದ ಸೀಸನ್​ನಿಂದ ಬಳಕೆಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್​ಗೂ ಪದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ನೀಡಿದ್ದರು. ಚುಟುಕು ಕ್ರಿಕೆಟ್​ನಲ್ಲಿ ಭಾರತ ತಂಡದಲ್ಲಿ ನಟರಾಜನ್​ ಸ್ಥಾನ ಭದ್ರ ಎಂದೇ ವಿಶ್ಲೇಶಿಸಲಾಗಿತ್ತು. ಆದರೆ ಇವರನ್ನು ಆಯ್ಕೆ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.

ಅನುಭವಿ ಆರಂಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್​ಗೂ ಅವಕಾಶವಿಲ್ಲ. ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಮತ್ತು ದೀಪಕ್ ಚಹರ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರರನ್ನಾಗಿ ಹೆಸರಿಸಲಾಗಿದೆ. ಅಚ್ಚರಿಯ ಬೆಳವಣಿಗೆ ಎಂಬಂತೆ ಮಾಜಿ ನಾಯಕ ಎಂಎಸ್‌ ಧೋನಿ ಅವರನ್ನು ತಂಡದ ಮೆಂಟರ್‌ ಆಗಿ ನೇಮಕ ಮಾಡಿರುವ ಬಿಸಿಸಿಐ, ಈ ಮೂಲಕ ಟೀಮ್ ಇಂಡಿಯಾಗೆ ಮತ್ತೆ ಕ್ಯಾಪ್ಟನ್‌ ಕೂಲ್‌ ಸೇವೆ ಲಭ್ಯವಾಗುವಂತೆ ಮಾಡಿದೆ.

ಟಿ-20 ವಿಶ್ವಕಪ್‌ಗಾಗಿ ಭಾರತ ತಂಡ ಇಂತಿದೆ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆ), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್​ಪ್ರೀತ್  ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್. ಅಶ್ವಿನ್, ರಾಹುಲ್ ಚಾಹರ್, ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ.

ಹೆಚ್ಚುವರಿ ಆಟಗಾರರು: ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್.

India vs England: ಐದನೇ ಟೆಸ್ಟ್​ಗೂ ಮುನ್ನ ಭಾರತಕ್ಕೆ ಒಂದು ಗುಡ್ ನ್ಯೂಸ್, ಎರಡು ಬ್ಯಾಡ್ ನ್ಯೂಸ್: ಏನದು?

2 ವರ್ಷಗಳ ನಂತರ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಕೂಲ್ ಕ್ಯಾಪ್ಟನ್ ಧೋನಿ! ಬಿಸಿಸಿಐ ಅಧಿಕೃತ ಘೋಷಣೆ

(Why Yuzvendra Chahal not selected India Squad For T20 World Cup 2021 Chetan Sharma Reveals)