IND vs SA: ಸಿಂಗಲ್​ಗೆ ಒಲ್ಲೆ ಎಂದ ಪಾಂಡ್ಯ; 26 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಉತ್ತರ ಕೊಟ್ಟ ಕಾರ್ತಿಕ್

| Updated By: ಪೃಥ್ವಿಶಂಕರ

Updated on: Jun 18, 2022 | 7:01 AM

IND vs SA: 14ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಯಾನ್ಸನ್ ಎಸೆತವನ್ನು ಪಾಯಿಂಟ್​ ಕಡೆಗೆ ಕಾರ್ತಿಕ್ ಹೊಡೆದರು. ನಂತರ ಕಾರ್ತಿಕ್ ಇದಕ್ಕೆ ಸಿಂಗಲ್ ತೆಗೆದುಕೊಳ್ಳಲು ಬಯಸಿದ್ದರು. ಆದರೆ ಅವರಿಗೆ ಇನ್ನೊಂದು ತುದಿಯಿಂದ ಪಾಂಡ್ಯರ ಬೆಂಬಲ ಸಿಗಲಿಲ್ಲ.

IND vs SA: ಸಿಂಗಲ್​ಗೆ ಒಲ್ಲೆ ಎಂದ ಪಾಂಡ್ಯ; 26 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಉತ್ತರ ಕೊಟ್ಟ ಕಾರ್ತಿಕ್
ದಿನೇಶ್ ಕಾರ್ತಿಕ್
Follow us on

ಐಪಿಎಲ್ 2022 (IPL 2022,)ರಲ್ಲಿ ಸೂಪರ್‌ಹಿಟ್ ಪ್ರದರ್ಶನ ನೀಡುವ ಮೂಲಕ ಸುದೀರ್ಘ ಕಾಯುವಿಕೆಯ ನಂತರ ಭಾರತ ತಂಡಕ್ಕೆ ಮರಳಿದ ದಿನೇಶ್ ಕಾರ್ತಿಕ್ (Dinesh Karthik), ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ 20 ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದರು. ತತ್ತರಿಸುತ್ತಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್‌ ನಿಭಾಯಿಸಿದ ಕಾರ್ತಿಕ್ ಹಾರ್ದಿಕ್ ಪಾಂಡ್ಯ ಎದುರು ದೊಡ್ಡ ಅಬ್ಬರ ಮಾಡಿದರು. ವಾಸ್ತವವಾಗಿ, ನಾಯಕ ರಿಷಬ್ ಪಂತ್ (Rishabh Pant) ಔಟಾದ ನಂತರ, ಕಾರ್ತಿಕ್ ಕ್ರೀಸ್‌ನಲ್ಲಿ ಪಾಂಡ್ಯಗೆ ಬೆಂಬಲ ನೀಡಲು ಬಂದರು. 14ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಯಾನ್ಸನ್ ಎಸೆತವನ್ನು ಪಾಯಿಂಟ್​ ಕಡೆಗೆ ಕಾರ್ತಿಕ್ ಹೊಡೆದರು. ನಂತರ ಕಾರ್ತಿಕ್ ಇದಕ್ಕೆ ಸಿಂಗಲ್ ತೆಗೆದುಕೊಳ್ಳಲು ಬಯಸಿದ್ದರು. ಆದರೆ ಅವರಿಗೆ ಇನ್ನೊಂದು ತುದಿಯಿಂದ ಪಾಂಡ್ಯರ ಬೆಂಬಲ ಸಿಗಲಿಲ್ಲ. ಹಾರ್ದಿಕ್​ಗೆ ಸಿಂಗಲ್ ತೆಗೆದುಕೊಳ್ಳುವ ಮೂಡ್ ಇರಲಿಲ್ಲ.

ಕಾರ್ತಿಕ್ ಬಿರುಗಾಳಿ ಆಟ

ನಾಲ್ಕನೇ ಟಿ20 ಪಂದ್ಯದಲ್ಲಿ ಕಾರ್ತಿಕ್ 27 ಎಸೆತಗಳಲ್ಲಿ 55 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಕಾರ್ತಿಕ್ ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಹೊಡೆದರು. ಅದೇ ಸಮಯದಲ್ಲಿ, ಪಾಂಡ್ಯ 31 ಎಸೆತಗಳಲ್ಲಿ 46 ರನ್ ಗಳಿಸಿದರು. ಕೇವಲ 4 ರನ್‌ಗಳಿಂದ ಅರ್ಧಶತಕ ವಂಚಿತರಾದರು. ಕಾರ್ತಿಕ್ ಮತ್ತು ಪಾಂಡ್ಯ ಅವರ ವೇಗದ ಇನ್ನಿಂಗ್ಸ್‌ನ ಆಧಾರದ ಮೇಲೆ ಭಾರತ ನಿಗದಿತ ಓವರ್‌ನಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತು. ಒಂದು ಹಂತದಲ್ಲಿ ಭಾರತ ಕೇವಲ 81 ರನ್‌ಗಳಿಗೆ ತನ್ನ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಇದನ್ನೂ ಓದಿ
IND vs SA: ಕಾರ್ತಿಕ್- ಹಾರ್ದಿಕ್ ಅಬ್ಬರ.. ಅವೇಶ್- ಹರ್ಷಲ್ ಮಾರಕ ದಾಳಿ; ಭಾರತಕ್ಕೆ 82 ರನ್ ಜಯ
India vs South Africa T20 Highlights: ದಿನೇಶ್ ಅಬ್ಬರದ ಅರ್ಧಶತಕ; ಭಾರತಕ್ಕೆ 82 ರನ್​ಗಳ ಜಯ, ಸರಣಿ ಸಮಬಲ

ಇದನ್ನೂ ಓದಿ: India vs South Africa T20 Highlights: ದಿನೇಶ್ ಅಬ್ಬರದ ಅರ್ಧಶತಕ; ಭಾರತಕ್ಕೆ 82 ರನ್​ಗಳ ಜಯ, ಸರಣಿ ಸಮಬಲ

ಮೊದಲ ಪಂದ್ಯದಲ್ಲಿ ಪಾಂಡ್ಯ ಸಿಂಗಲ್‌ ಪಡೆಯಲು ನಿರಾಕರಿಸಿದ್ದರು

ಈ ಹಿಂದೆಯೂ ಪಾಂಡ್ಯ ಹಾಗೂ ಕಾರ್ತಿಕ್ ನಡುವೆ ಕೊಂಚ ಸಮನ್ವಯದ ಕೊರತೆ ಇತ್ತು. ವಾಸ್ತವವಾಗಿ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದ ಕೊನೆಯ ಓವರ್‌ನಲ್ಲಿ, ಪಾಂಡ್ಯ ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿದರು. ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ ಪಾಂಡ್ಯ ನೋಕಿಯಾ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಇನ್ನೊಂದು ತುದಿಯಲ್ಲಿ ದಿನೇಶ್ ಕಾರ್ತಿಕ್ ನಿಂತಿದ್ದರು. ಆ ಓವರ್‌ನ 5ನೇ ಎಸೆತದಲ್ಲಿ ಪಾಂಡ್ಯ ಡೀಪ್ ಮಿಡ್ ವಿಕೆಟ್ ಕಡೆಗೆ ಶಾಟ್ ಹೊಡೆದರು. ಇಲ್ಲಿ ಕಾರ್ತಿಕ್ ಸಿಂಗಲ್ ಓಡುವ ಉತ್ಸಾಹದಲ್ಲಿದ್ದರು, ಆದರೆ ಈ ಎಸೆತದಲ್ಲಿ ಪಾಂಡ್ಯ ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿದರು, ನಂತರ ಅವರು ಕೊನೆಯ ಎಸೆತದಲ್ಲಿ 2 ರನ್ ಸೇರಿಸಿದರು. ಮೊದಲ ಪಂದ್ಯದಲ್ಲಿ ಪಾಂಡ್ಯ 31 ಹಾಗೂ ಕಾರ್ತಿಕ್ 1 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ಭಾರತಕ್ಕೆ ಜಯ

ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಬ್ಯಾಟಿಂಗ್‌, ಹಾಗೂ ಬೌಲರ್‌ಗಳ ಬಲದಿಂದ ಭಾರತವು ನಾಲ್ಕನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 82 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 2-2ರಲ್ಲಿ ಸಮಬಲ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಿಷಬ್ ಪಂತ್ ನೇತೃತ್ವದ ಟೀಂ ಇಂಡಿಯಾ ನಿಗದಿತ ಓವರ್‌ನಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 87 ರನ್‌ಗಳಿಗೆ ಕುಸಿಯಿತು. 170 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಭಾರತದ ಬೌಲರ್​ಗಳ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ಅವೇಶ್ ಖಾನ್ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್​ಗಳಿಗೆ ಸಿಂಹಸ್ವಪ್ನರಾದರು.