IPL 2024: ‘ಬೇಡ ಅಂದ್ರೂ ಈ ಕೆಲಸ ಮಾಡಿದ್ದಾರೆ’; ಐಪಿಎಲ್ ಪ್ರಸಾರಕರ ವಿರುದ್ಧ ರೋಹಿತ್ ಬೇಸರ

IPL 2024: ತನ್ನ ಮನವಿಗೆ ಗೌರವ ನೀಡದೆ, ವಿಡಿಯೋ ಪ್ರಸಾರ ಮಾಡಿದ್ದ ಸ್ಟಾರ್ ಸ್ಪೋರ್ಟ್ಸ್‌ ವಿರುದ್ಧ ರೋಹಿತ್ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್​ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಬರೆದುಕೊಂಡಿರುವ ರೋಹಿತ್, ‘ಕ್ರಿಕೆಟಿಗರ ಜೀವನದಲ್ಲಿ ಕ್ಯಾಮೆರಾಗಳು ನುಸುಳಿವೆ, ಅವರ ಪ್ರತಿಯೊಂದು ಹೆಜ್ಜೆಯೂ ದಾಖಲಾಗುತ್ತಿದೆ ಎಂದಿದ್ದಾರೆ.

IPL 2024: ‘ಬೇಡ ಅಂದ್ರೂ ಈ ಕೆಲಸ ಮಾಡಿದ್ದಾರೆ’; ಐಪಿಎಲ್ ಪ್ರಸಾರಕರ ವಿರುದ್ಧ ರೋಹಿತ್ ಬೇಸರ
ರೋಹಿತ್ ಶರ್ಮಾ
Follow us
|

Updated on:May 19, 2024 | 8:46 PM

ಈ ಬಾರಿ ಶತಾಯಗತಾಯ ಟ್ರೋಫಿ ಗೆಲ್ಲಲೇಬೇಕೆಂದು ಸಾಕಷ್ಟು ಬದಲಾವಣೆಗಳೊಂದಿಗೆ ಐಪಿಎಲ್ (IPL 2024) ಅಖಾಡಕ್ಕಿಳಿದಿದ್ದ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಪಾಯಿಂಟ್ ಪಟ್ಟಿಯಲ್ಲಿ ಸಿಕ್ಕಿದ್ದು ಕೊನೆಯ ಸ್ಥಾನ. ಈ ಸೀಸನ್ ಆರಂಭಕ್ಕೂ ಮುನ್ನ ನಾಯಕನನ್ನು ಬದಲಿಸಿದ್ದ ಮುಂಬೈ ರೋಹಿತ್ ಶರ್ಮಾ ಬದಲಿಗೆ, ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಪಟ್ಟಕಟ್ಟಿತ್ತು. ಆದರೆ ನಾಯಕ ಬದಲಾದರೂ ತಂಡದ ಪ್ರದರ್ಶನ ಮಾತ್ರ ಇನ್ನಷ್ಟು ಶೋಚನಿಯವಾಗಿತ್ತು. ಇದರೊಳಗೆ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾರನ್ನು (Rohit Sharma) ಪಂದ್ಯದ ವೇಳೆ ನಡೆಸಿಕೊಂಡ ರೀತಿ ಎಲ್ಲರನ್ನೂ ಅಸಮಾಧಾನಗೊಳ್ಳುವಂತೆ ಮಾಡಿತ್ತು. ಇದಲ್ಲದೆ ಈ ಸೀಸನ್​ ಮುಗಿದ ಬಳಿಕ ರೋಹಿತ್ ಶರ್ಮಾ ಮುಂಬೈ ಪ್ರಾಂಚೈಸಿ ತೊರೆಯಲ್ಲಿದ್ದಾರೆ ಎಂಬ ವದಂತಿ ಹರಡಲು ಶುರುವಾಗಿತ್ತು. ಈ ಬಗ್ಗೆ ರೋಹಿತ್ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಜೊತೆ ರೋಹಿತ್ ಆಡಿದ ಮಾತುಗಳು ವೈರಲ್ ಆದ ಬಳಿಕ ರೋಹಿತ್ ತಂಡ ತೊರೆಯಲಿದ್ದಾರೆ ಎಂಬುದಕ್ಕೆ ಇನ್ನಷ್ಟು ರೆಕ್ಕೆ ಪುಕ್ಕಗಳು ಸಿಕ್ಕಿದ್ದವು. ಆದರೆ ಇದೀಗ ತಾನು ಬೇಡವೆಂದರೂ ವೈಯಕ್ತಿಕ ವಿಚಾರಗಳನ್ನು ರೆಕಾರ್ಡ್​ ಮಾಡಿದಲ್ಲದೆ, ಅದನ್ನು ಪ್ರಸಾರ ಮಾಡಿದಕ್ಕಾಗಿ ರೋಹಿತ್, ಐಪಿಎಲ್ ಪ್ರಸಾರದ ಹಕ್ಕು ಖರೀದಿಸಿರುವ ಸ್ಟಾರ್ ಸ್ಪೋರ್ಟ್ಸ್‌​ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ರೋಹಿತ್ ಟ್ವೀಟ್​ನಲ್ಲಿರುವುದೇನು?

ತನ್ನ ಮನವಿಗೆ ಗೌರವ ನೀಡದೆ, ವಿಡಿಯೋ ಪ್ರಸಾರ ಮಾಡಿದ್ದ ಸ್ಟಾರ್ ಸ್ಪೋರ್ಟ್ಸ್‌ ವಿರುದ್ಧ ರೋಹಿತ್ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್​ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಬರೆದುಕೊಂಡಿರುವ ರೋಹಿತ್, ‘ಕ್ರಿಕೆಟಿಗರ ಜೀವನದಲ್ಲಿ ಕ್ಯಾಮೆರಾಗಳು ನುಸುಳಿವೆ, ಅವರ ಪ್ರತಿಯೊಂದು ಹೆಜ್ಜೆಯೂ ದಾಖಲಾಗುತ್ತಿದೆ. ಅದು ತರಬೇತಿ ಸಮಯವಾಗಿರಬಹುದು ಅಥವಾ ಕ್ರಿಕೆಟಿಗರು ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗಿನ ಖಾಸಗಿ ಸಂಭಾಷಣೆಯಾಗಿರಬಹುದು. ನನ್ನ ಸಂಭಾಷಣೆಯನ್ನು ರೆಕಾರ್ಡ್ ಮಾಡಬೇಡಿ ಎಂದು ಸ್ಟಾರ್ ಸ್ಪೋರ್ಟ್ಸ್ ಬಳಿ ಮನವಿ ಮಾಡಿದರೂ, ಅವರು ಅದನ್ನು ರೆಕಾರ್ಡ್ ಮಾಡಿ, ಪ್ರಸಾರ ಮಾಡಿದ್ದಾರೆ. ಇದು ಖಾಸಗಿತನದ ಉಲ್ಲಂಘನೆಯಾಗಿದೆ. ವೀಕ್ಷರಿಗೆ ಕುತೂಹಲಕಾರಿ ಸುದ್ದಿಯನ್ನು ನೀಡುವುದಕ್ಕೆ ಹೆಚ್ಚು ಒತ್ತು ನೀಡುವ ಈ ನಡೆಯಿಂದ ಒಂದು ದಿನ ಅಭಿಮಾನಿಗಳು, ಕ್ರಿಕೆಟಿಗರು ಮತ್ತು ಕ್ರಿಕೆಟ್‌ ನಡುವೆ ಇರುವ ನಂಬಿಕೆ ಮುರಿದುಹೋಗುತ್ತದೆ. ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ನಿಮ್ಮ ತಿಳುವಳಿಕೆಯ ವ್ಯಾಪ್ತಿಯನ್ನು ವಿಸ್ತರಿಸಿ ಎಂದಿದ್ದಾರೆ.

ಅಷ್ಟಕ್ಕೂ ಅಂದು ನಡೆದುದ್ದೇನು?

ವಾಸ್ತವವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಬಳಿಕ ರೋಹಿತ್ ಶರ್ಮಾ, ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಆ ವೇಳೆ ರೋಹಿತ್, ಮುಂಬೈ ತಂಡದಲ್ಲಿ ಇದು ನನ್ನ ಕೊನೆಯ ಸೀಸನ್ ಎಂಬರ್ಥದಲ್ಲಿ ಮಾತನಾಡಿದ್ದರು. ಆ ಬಳಿಕ ಇವರಿಬ್ಬರ ನಡುವಿನ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದಾದ ನಂತರ ಕೆಲವು ದಿನಗಳ ಹಿಂದೆ ರೋಹಿತ್ ಶರ್ಮಾ, ಧವಳ್ ಕುಲಕರ್ಣಿ ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಕ್ಯಾಮರಾಮ್ಯಾನ್ ಇವರಿಬ್ಬರ ನಡುವಿನ ಸಂಭಾಷಣೆಯನ್ನು ಚಿತ್ರಿಕರಿಸಲು ಮುಂದಾದರು. ಆಗ ರೋಹಿತ್ ಶರ್ಮಾ ತಮ್ಮಿಬ್ಬರ ನಡುವಿನ ಸಂಭಾಷಣೆಯನ್ನು ರೆಕಾರ್ಡ್ ಮಾಡದಂತೆ ಹಾಗೂ ಈ ಆಡಿಯೊವನ್ನು ಡಿಲೀಟ್ ಮಾಡುವಂತೆ ವಿನಂತಿ ಮಾಡಿದ್ದರು. ಅದಾಗ್ಯೂ ಈ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್‌ ಪ್ರಸಾರ ಮಾಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:42 pm, Sun, 19 May 24