ಬೆಂಗಳೂರು (ಮಾ. 20): 2025 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಇದೇ ಮಾರ್ಚ್ 22 ರ ಶನಿವಾರದಿಂದ ಹೊಡಿಬಡಿ ಆಟಕ್ಕೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಈಡನ್ ಗಾರ್ಡನ್ಸ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಪ್ರತಿ ವರ್ಷ ಐಪಿಎಲ್ನಲ್ಲಿ ಬಹುತೇಕ ಎಲ್ಲ ಪಂದ್ಯಗಳು ರೋಚಕವಾಗಿರುತ್ತದೆ. ಆದರೆ, ಐಪಿಎಲ್ನಲ್ಲಿ ಅತಿ ದೊಡ್ಡ ಪೈಪೋಟಿ ಎಂದರೆ ಆರ್ಸಿಬಿ ಮತ್ತು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ. ಎರಡೂ ತಂಡಗಳ ನಡುವೆ ಪಂದ್ಯ ಇದೆ ಎಂದಾದರೆ ಅಲ್ಲಿ ಯಾವಾಗಲೂ ಕಠಿಣ ಸ್ಪರ್ಧೆ ಇರುತ್ತದೆ.
ಈ ಬಾರಿಯ ಸೀಸನ್ನಲ್ಲಿ ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮಾರ್ಚ್ 28 ರಂದು ಎದುರಿಸಲಿದೆ. ಇದರ ನಡುವೆ ಇದೀಗ ಮಾಜಿ ಸಿಎಸ್ಕೆ ಬ್ಯಾಟ್ಸ್ಮನ್ ಸುಬ್ರಮಣಿಯಂ ಬದ್ರಿನಾಥ್ ವೈರಲ್ ಮೀಮ್ ಒಂದನ್ನು ಮರುಸೃಷ್ಟಿಸಿ ಆರ್ಸಿಬಿ ಅಭಿಮಾನಿಗಳನ್ನು ಕೆಣಕಿದ್ದಾರೆ. ಭಾರತದ ಮಾಜಿ ಆಟಗಾರ ವಿಡಿಯೋ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಬದ್ರಿನಾಥ್ ತನ್ನನ್ನು ಸಿಎಸ್ಕೆ ಪ್ರತಿನಿಧಿ ಎಂದು ತೋರಿಸಿದ್ದು, ಇತರ ತಂಡಗಳ ಪ್ರತಿನಿಧಿಗಳನ್ನು ಭೇಟಿಯಾಗುವುದನ್ನು ತೋರಿಸುತ್ತದೆ.
ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಎಸ್ಆರ್ಹೆಚ್, ಜಿಟಿ ಹೀಗೆ ಎಲ್ಲ ತಂಡಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಕೈಕುಳುಕಿ ನಗುಮೊಗದಿಂದ ಮಾತನಾಡಿಸುತ್ತಾರೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿನಿಧಿಯನ್ನು ಭೇಟಿ ಮಾಡುವ ಸರದಿ ಬಂದಾಗ, ಬದ್ರಿನಾಥ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬೇರೆ ತಂಡದತ್ತ ತೆರಳಿದ್ದಾರೆ. ಆರ್ಸಿಬಿ ಪ್ರತಿನಿಧಿ ಕೈಕೊಡಲು ಬಂದರೂ ಅದನ್ನು ಬದ್ರಿನಾಥ್ ನೋಡಿಯೂ ನೋಡದಂತೆ ಮಾಡಿದ್ದಾರೆ. ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜೊತೆಗೆ ಆರ್ಸಿಬಿ ಅಭಿಮಾನಿಗಳು ಬದ್ರಿನಾಥ್ ವಿರುದ್ಧ ಕೆಂಡಕಾರಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುಬ್ರಮಣಿಯಂ ಬದ್ರಿನಾಥ್ ಭಾರತ ಪರ ಮೂರು ಸ್ವರೂಪಗಳ ಕ್ರಿಕೆಟ್ ಆಡಿದ್ದಾರೆ. ಅವರು ಭಾರತವನ್ನು 2 ಟೆಸ್ಟ್, 7 ಏಕದಿನ ಮತ್ತು ಒಂದೇ ಒಂದು ಟಿ20ಐ ಪಂದ್ಯದಲ್ಲಿ ಪ್ರತಿನಿಧಿಸಿದ್ದಾರೆ. ಐಪಿಎಲ್ನಲ್ಲಿ ಆಡಿರುವ 95 ಪಂದ್ಯಗಳಲ್ಲಿ ಬದರಿನಾಥ್ 1441 ರನ್ ಗಳಿಸಿದ್ದಾರೆ.
IPL 2025: ಬೌಲರ್ಗಳ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಿದ ಬಿಸಿಸಿಐ
ಐಪಿಎಲ್ 2025 ರ ಲೀಗ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ಬಾರಿ ಸೆಣಸಲಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಮಾರ್ಚ್ 28 ರಂದು ಚೆಪಾಕ್ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಮೇ 3 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಆರ್ಸಿಬಿ ತನ್ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಈಡನ್ ಗಾರ್ಡನ್ಸ್ನಲ್ಲಿ ಎದುರಿಸಲಿದೆ. ಮಾರ್ಚ್ 22 ರಂದು ಉಭಯ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಇದೀಗ ಈ ಪಂದ್ಯಕ್ಕಾಗಿ ಆರ್ಸಿಬಿ ತಂಡ ಬೆಂಗಳೂರಿನಿಂದ ಕೊಲ್ಕತ್ತಾಗೆ ಪ್ರಯಾಣ ಬೆಳೆಸಿದೆ. ಅದರ ವಿಡಿಯೋವನ್ನು ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ