ಫೈನಲ್ ಪಂದ್ಯಕ್ಕೂ ಮುನ್ನ ಸಂಕಷ್ಟಕ್ಕೆ ಸಿಲುಕಿದ ಗುಜರಾತ್ ಟೈಟಾನ್ಸ್​!

IPL 2026 Final, Royal Challengers Bengaluru vs Gujarat Titans: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಶುಭ್​ಮನ್ ಗಿಲ್​ ಪಡೆ ಸಂಕಷ್ಟಕ್ಕೆ ಸಿಲುಕಿದೆ.

ಫೈನಲ್ ಪಂದ್ಯಕ್ಕೂ ಮುನ್ನ ಸಂಕಷ್ಟಕ್ಕೆ ಸಿಲುಕಿದ ಗುಜರಾತ್ ಟೈಟಾನ್ಸ್​!
Gujarat Titans
Image Credit source: IPL

Updated on: May 31, 2026 | 8:21 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯಕ್ಕೂ ಮುನ್ನ ಗುಜರಾತ್ ಟೈಟಾನ್ಸ್​ ತಂಡವು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ವಾಯುವ್ಯ ಭಾರತದಲ್ಲಿ ಎದ್ದಿರುವ ಧೂಳಿನ ಬಿರುಗಾಗಿ ಹಾಗೂ ಭಾರೀ ಮಳೆಯಿಂದಾಗಿ ಶುಭ್​ಮನ್ ಗಿಲ್ ನೇತೃತ್ವದ ಜಿಟಿ ಪಡೆಯ ವಿಮಾನ ಪ್ರಯಾಣ ಗಂಟೆಗಟ್ಟಲೆ ವಿಳಂಬವಾಗಿದೆ. ಇದರಿಂದ ಶನಿವಾರದ ಅಭ್ಯಾಸವನ್ನು ತಪ್ಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಫೈನಲ್ ಪಂದ್ಯಕ್ಕೆ 24 ಗಂಟೆಗಳಿಗಿಂತ ಕಡಿಮೆ ಸಮಯ ಬಾಕಿ ಇರುವಾಗ ಗುಜರಾತ್ ಟೈಟಾನ್ಸ್ ಅಹಮದಾಬಾದ್​ಗೆ ಬಂದಿಳಿದಿದೆ.

ಎಷ್ಟು ಗಂಟೆಗೆ ಬರಬೇಕಿತ್ತು?

ಶುಕ್ರವಾರ ನಡೆದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ನ್ಯೂ ಚಂಡೀಗಢ್​ನಿಂದ ಶನಿವಾರ ಮಧ್ಯಾಹ್ನದೊಳಗೆ ಅಹಮದಾಬಾದ್​ಗೆ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಬಂದಿಳಿಯಬೇಕಿತ್ತು. ಆದರೆ ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಆವರಿಸಿದ ಭೀಕರ ಚಂಡಮಾರುತ ಮತ್ತು ಮಳೆಯಿಂದಾಗಿ ವಿಮಾನದ ಟೇಕ್ ಆಫ್​ ಅನುಮತಿಯನ್ನು ನಿರಾಕರಿಸಲಾಯಿತು.

ಹೀಗಾಗಿ ಗುಜರಾತ್ ಟೈಟಾನ್ಸ್ ಆಟಗಾರರು ನ್ಯೂ ಚಂಡೀಗಢ್​ನಲ್ಲೇ ಉಳಿದಿದ್ದರು. ಅಲ್ಲದೆ ಸುದೀರ್ಘ ಕಾಯುವಿಕೆಯ ನಂತರ ಶನಿವಾರ ತಡರಾತ್ರಿ (10 ಗಂಟೆಯ ನಂತರ) ಗುಜರಾತ್ ಟೈಟಾನ್ಸ್ ಆಟಗಾರರು ಅಹಮದಾಬಾದ್​ಗೆ ಬಂದಿಳಿದಿದ್ದಾರೆ. ಅಲ್ಲದೆ ಅಲ್ಲಿಂದ ಟೀಮ್ ಹೊಟೇಲ್ ತಲುಪುವಷ್ಟರಲ್ಲಿ ಮಧ್ಯ ರಾತ್ರಿಯಾಗಿತ್ತು ಎಂದು ತಿಳಿದು ಬಂದಿದೆ.

ತಂಡದ ಮೇಲೆ ಪರಿಣಾಮ:

ಗುಜರಾತ್ ಟೈಟಾನ್ಸ್ ತಂಡವು ಶನಿವಾರ ಮಧ್ಯರಾತ್ರಿ ಅಹಮದಾಬಾದ್​ ತಲುಪಿದ ಕಾರಣ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಇದು ತಂಡದ ಸಿದ್ಧತೆಯ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ ಕಳೆದ ಮಧ್ಯ ರಾತ್ರಿ ಅಹಮದಾಬಾದ್​ಗೆ ತಲುಪಿರುವ ಆಟಗಾರರು ಹೆಚ್ಚಿನ ಸಮಯ ವಿಶ್ರಾಂತಿ ಪಡೆಯಲಿದ್ದಾರೆ.

ಅಲ್ಲದೆ ಇಂದು ಹೊಟೇಲ್ ರೂಮ್​ನಿಂದ ಪಂದ್ಯದ ಆರಂಭಕ್ಕೂ ಮುನ್ನ ಮೈದಾನಕ್ಕೆ ಬರಲಿದ್ದಾರೆ. ಅಂದರೆ ಫೈನಲ್ ಪಂದ್ಯಕ್ಕಾಗಿ ಹೆಚ್ಚಿನ ಅಭ್ಯಾಸ ನಡೆಸಲು ಗುಜರಾತ್ ಟೈಟಾನ್ಸ್ ತಂಡಕ್ಕೆ ಸಮಯ ಸಿಗಲ್ಲ ಎಂದೇ ಹೇಳಬಹುದು.

ಆರ್​ಸಿಬಿ ನಿರಾಳ:

ಇತ್ತ ಗುಜರಾತ್ ಟೈಟಾನ್ಸ್ ತಂಡವು ವಿಮಾನ ಪ್ರಯಾಣ ವಿಳಂಬ, ದಣಿವು ಹಾಗೂ ಅಭ್ಯಾಸ ಕೈ ತಪ್ಪಿದ ಚಿಂತೆಯಲ್ಲಿದ್ದರೆ ಅತ್ತ ಆರ್​ಸಿಬಿ ತಂಡವು ನಿರಾಳವಾಗಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಕ್ವಾಲಿಫೈಯರ್ ಪಂದ್ಯ ಗೆದ್ದ ಬೆನ್ನಲ್ಲೇ ಅಹಮದಾಬಾದ್​ಗೆ ಆಗಮಿಸಿದ್ದರು.

ಆರ್​ಸಿಬಿ ತಂಡಕ್ಕೆ ಎರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಸಿಕ್ಕಿದ್ದು, ಇದರ ಜೊತೆಗೆ ತಾಲೀಮು ನಡೆಸಲು ಸಾಕಷ್ಟು ಸಮಯ ಕೂಡ ದಕ್ಕಿದೆ. ಹೀಗಾಗಿ ಫೈನಲ್ ಪಂದ್ಯಕ್ಕಾಗಿ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

ಇದನ್ನೂ ಓದಿ: RCB vs GT: ಯಾರೇ ಗೆದ್ದರೂ 2ನೇ ಬಾರಿ ಚಾಂಪಿಯನ್!

ಅತ್ತ ಫ್ಲೈಟ್ ಡಿಲೇಯಿಂದಾಗಿ ಗುಜರಾತ್ ಟೈಟಾನ್ಸ್ ತಂಡವು ಸಂಕಷ್ಟಕ್ಕೆ ಸಿಲುಕಿದ್ದು, ಇದಾಗ್ಯೂ ಭಾನುವಾರ ಸಂಜೆ ಮೈದಾನಕ್ಕಿಳಿಯುವ ಮೂಲಕ ಶುಭ್​ಮನ್ ಗಿಲ್ ಪಡೆ ಫೈನಲ್ ಪಂದ್ಯಕ್ಕಾಗಿ ಬೇಕಾದ ಸಿದ್ಧತೆಗಳನ್ನು ನಡೆಸುವ ನಿರೀಕ್ಷೆಯಿದೆ. ಈ ಅಲ್ಪಾವಧಿಯ ಸಿದ್ಧತೆಗಳೊಂದಿಗೆ ಗುಜರಾತ್ ಟೈಟಾನ್ಸ್ ಆರ್​ಸಿಬಿ ವಿರುದ್ಧ ಹೇಗೆ ಹೋರಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us