
IPL 2026: ಕ್ರಿಕೆಟ್ ಎಂಬುದು ಮಹಾನ್ ಅನಿಶ್ಚಿತತೆಗಳ ಆಟ. ಇಲ್ಲಿ ಕೇವಲ ಒಂದು ಎಸೆತ, ಒಂದು ರನ್ ಅಥವಾ ಪ್ರಕೃತಿಯ ಒಂದು ಸಣ್ಣ ಮುನಿಸು ಇಡೀ ಟೂರ್ನಿಯ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು. ಇಡೀ ಟೂರ್ನಿಯುದ್ದಕ್ಕೂ ಅದ್ಭುತವಾಗಿ ಆಡಿದರೂ, ಅಂತಿಮವಾಗಿ ಪ್ಲೇಆಫ್ ಹಂತ ತಲುಪಲು ಈ ಎರಡೂ ತಂಡಗಳಿಗೆ ಅಡ್ಡಿಯಾಗಿದ್ದು ಕೇವಲ ‘1 ರನ್’ ಮತ್ತು ‘1 ಅಂಕ’ದ ಸಣ್ಣ ವ್ಯತ್ಯಾಸ!
ಡೆಲ್ಲಿ ತಂಡದ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್ ಕ್ರೀಸ್ನಲ್ಲಿ ಮಾಡಿದ ಆ ಒಂದು ನಿರ್ಧಾರ ಹಾಗೂ ಪಂಜಾಬ್ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದ್ದಾಗ ಸುರಿದ ಅಕಾಲಿಕ ಮಳೆ ಹೇಗೆ ಇವೆರಡೂ ತಂಡಗಳನ್ನು ಟೂರ್ನಿಯಿಂದ ಹೊರದಬ್ಬಿದವು ಎಂಬ ರೋಚಕ ವಿವರ ಇಲ್ಲಿದೆ.
ಗುಜರಾತ್ ಟೈಟಾನ್ಸ್ (GT) ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 1 ರನ್ನಿಂದ ರೋಚಕ ಸೋಲು ಕಂಡಿತ್ತು. ಈ ಸೋಲು ಅಂತಿಮವಾಗಿ ತಂಡದ ಪ್ಲೇಆಫ್ ಅವಕಾಶವನ್ನೇ ಕಿತ್ತುಕೊಂಡಿತು ಎಂದರೆ ತಪ್ಪಾಗಲಾರದು.
ಪಂದ್ಯದ ವಿವರ: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ನ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 210 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೊನೆಯ 2 ಎಸೆತಗಳಲ್ಲಿ 2 ರನ್ ಬೇಕಿತ್ತು. ಕ್ರೀಸ್ನಲ್ಲಿದ್ದ ಸ್ಟಾರ್ ಫಿನಿಷರ್ ಡೇವಿಡ್ ಮಿಲ್ಲರ್ 5ನೇ ಎಸೆತವನ್ನು ಸ್ಕ್ವೇರ್ ಲೆಗ್ ಕಡೆಗೆ ಬಾರಿಸಿದರು.
ಆದರೆ ಈ ಒಂದು ರನ್ ಓಡಲು ಡೇವಿಡ್ ಮಿಲ್ಲರ್ ನಿರಾಕರಿಸಿದರು. ನಾನ್ಸ್ಟ್ರೈಕರ್ನಲ್ಲಿದ್ದ ಕುಲ್ದೀಪ್ ಯಾದವ್ ಅರ್ಧ ಪಿಚ್ವರೆಗೂ ಓಡಿ ಬಂದಿದ್ದರೂ ಕೂಡ ಮಿಲ್ಲರ್ ಒಂದು ರನ್ ಓಡಲು ಮನಸ್ಸು ಮಾಡಿರಲಿಲ್ಲ. ಪರಿಣಾಮ ಕೊನೆಯ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ 2 ರನ್ ಬೇಕಿದ್ದವು.
ಪ್ರಸಿದ್ಧ್ ಕೃಷ್ಣ ಎಸೆದ ಕೊನೆಯ ಬೌನ್ಸರ್ ಎಸೆತದಲ್ಲಿ ರನ್ ಗಳಿಸಲು ಮಿಲ್ಲರ್ ವಿಫಲರಾದರು. ಬೈಸ್ ರನ್ ಓಡಲು ಯತ್ನಿಸಿದಾಗ ಕುಲ್ದೀಪ್ ಯಾದವ್ ರನ್ ಔಟ್ ಆದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 1 ರನ್ನಿಂದ ಸೋಲೊಪ್ಪಿಕೊಂಡಿತು.
ಒಂದು ವೇಳೆ ಆ ಸಿಂಗಲ್ ಪಡೆದಿದ್ದರೆ ಪಂದ್ಯ ಕನಿಷ್ಠ ಸೂಪರ್ ಓವರ್ಗೆ ತಲುಪುತ್ತಿತ್ತು. ಅಲ್ಲದೆ ಸೂಪರ್ ಓವರ್ನಲ್ಲಿ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 2 ಅಂಕಗಳನ್ನು ಪಡೆಯಲು ಅವಕಾಶ ಇರುತ್ತಿತ್ತು. ಒಂದು ವೇಳೆ ಹೀಗೆ 2 ಅಂಕಗಳನ್ನು ಪಡೆದಿದ್ದರೆ 14 ರ ಬದಲಿಗೆ ಒಟ್ಟು 16 ಅಂಕ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ಸುಲಭವಾಗಿ ಪ್ಲೇಆಫ್ ತಲುಪಬಹುದಿತ್ತು.
ಐಪಿಎಲ್ನ ಮೊದಲಾರ್ಧದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡದ ಪ್ರಚಂಡ ಪ್ರದರ್ಶನ ನೀಡಿತ್ತು. ಈ ಪ್ರದರ್ಶನದೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿದ್ದರು. ಆದರೆ ಈ ಪಂದ್ಯದಲ್ಲಿ ಪಂಜಾಬ್ ಪಾಲಿಗೆ ಅದೃಷ್ಟ ಕೈಕೊಟ್ಟಿತು.
ಪಂದ್ಯದ ವಿವರ: ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಪಂಜಾಬ್ ಕಿಂಗ್ಸ್ ಬೌಲರ್ಗಳು ಯಶಸ್ವಿಯಾಗಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 3.4 ಓವರ್ಗಳಲ್ಲಿ ಕೇವಲ 25 ರನ್ಗಳಿಗೆ 2 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅತ್ಯುತ್ತಮ ಆರಂಭ ಪಡೆದಿದ್ದರಿಂದ ಈ ಪಂದ್ಯವು ಪಂಜಾಬ್ ಕಿಂಗ್ಸ್ ಪಾಲಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಪಂಜಾಬ್ ಕಿಂಗ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದ್ದಂತೆಯೇ ಮಳೆ ಆರಂಭವಾಯಿತು. ನಿರಂತರ ಮಳೆಯಿಂದಾಗಿ ಪಂದ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು.
ಪಂದ್ಯ ರದ್ದಾದ ಕಾರಣ ಐಪಿಎಲ್ ನಿಯಮಾವಳಿಗಳ ಪ್ರಕಾರ ಎರಡೂ ತಂಡಗಳಿಗೆ ತಲಾ 1 ಅಂಕವನ್ನು ಹಂಚಲಾಯಿತು. ಈ ಪಂದ್ಯ ನಡೆದಿದ್ದರೆ ಪಂಜಾಬ್ ಕಿಂಗ್ಸ್ ಗೆದ್ದು 2 ಪೂರ್ಣ ಅಂಕಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿದ್ದವು.
ಇದನ್ನೂ ಓದಿ: RCB ಅಲ್ಲ, ಬಲಿಷ್ಠ ತಂಡವನ್ನು ಹೆಸರಿಸಿದ ಅಕ್ಷರ್ ಪಟೇಲ್
ಈ ಎರಡು ಅಂಕಗಳು ಸಿಕ್ಕಿದ್ದರೆ ಪಂಜಾಬ್ ಕಿಂಗ್ಸ್ ತಂಡವು 15 ರ ಬದಲಿಗೆ ಒಟ್ಟು 16 ಅಂಕಗಳೊಂದಿಗೆ ಪ್ಲೇಆಫ್ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ವರುಣನ ಅವಕೃಪೆಯಿಂದಾಗಿ ಪಂಜಾಬ್ ಕಿಂಗ್ಸ್ ಪಾಲಿಗೆ ಒಂದು ಅಂಕ ಕೈ ತಪ್ಪಿತು. ಈ ಒಂದು ಅಂಕದ ಕಾರಣದಿಂದಲೇ ಇದೀಗ ಪಂಜಾಬ್ ಕಿಂಗ್ಸ್ ಐಪಿಎಲ್ನಿಂದ ಹೊರಬಿದ್ದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2026ರ ಈ ಸೀಸನ್ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೆ ಅತ್ಯಂತ ಹೃದಯವಿದ್ರಾವಕ ಮತ್ತು ನಿರಾಶಾದಾಯಕವಾಗಿ ಮುಕ್ತಾಯಗೊಂಡಿದೆ.ಕ್ರಿಕೆಟ್ ಮೈದಾನದಲ್ಲಿ ಕೇವಲ ‘ಒಂದು ರನ್’ ಮತ್ತು ‘ಒಂದು ಅಂಕ’ ಇಡೀ ಟೂರ್ನಿಯ ಭವಿಷ್ಯವನ್ನೇ ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಈ ಎರಡೂ ತಂಡಗಳ ದುರಾದೃಷ್ಟದ ನಿರ್ಗಮನವೇ ಸಾಕ್ಷಿ
Published On - 11:23 am, Mon, 25 May 26