IPL 2026: ಮುಂಬೈ ಇಂಡಿಯನ್ಸ್ ತೊರೆಯಲಿರುವ ಅರ್ಜುನ್ ತೆಂಡೂಲ್ಕರ್

IPL 2026 Trading Window: ಐಪಿಎಲ್ 2026ರ ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ವಿಂಡೋ ತೆರೆದಿದ್ದು, ಹಲವು ಆಟಗಾರರ ವಿನಿಮಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚೆನ್ನೈ ಮತ್ತು ರಾಜಸ್ಥಾನ ನಡುವೆ ಜಡೇಜಾ, ಸ್ಯಾಮ್ ಕರನ್, ಸಂಜು ಸ್ಯಾಮ್ಸನ್ ಟ್ರೇಡ್ ಬಹುತೇಕ ಅಂತಿಮವಾಗಿದೆ. ಮುಂಬೈ ಇಂಡಿಯನ್ಸ್‌ನಿಂದ ಅರ್ಜುನ್ ತೆಂಡೂಲ್ಕರ್ ಲಕ್ನೋ ಸೂಪರ್ ಜೈಂಟ್ಸ್‌ಗೆ ಹಾಗೂ ಶಾರ್ದೂಲ್ ಠಾಕೂರ್ ಮುಂಬೈಗೆ ನಗದು ವ್ಯವಹಾರದ ಮೂಲಕ ಸೇರುವ ಸಾಧ್ಯತೆ ಇದೆ. ಇದು ಅರ್ಜುನ್‌ಗೆ ಉತ್ತಮ ಅವಕಾಶ ನೀಡಲಿದೆ.

IPL 2026: ಮುಂಬೈ ಇಂಡಿಯನ್ಸ್ ತೊರೆಯಲಿರುವ ಅರ್ಜುನ್ ತೆಂಡೂಲ್ಕರ್
Arjun Tendulkar

Updated on: Nov 12, 2025 | 10:19 PM

2026 ರ ಐಪಿಎಲ್​ಗೂ (IPL 2026) ಮುನ್ನ ಇದೇ ಡಿಸೆಂಬರ್​ನಲ್ಲಿ ಮಿನಿ ಹರಾಜು ನಡೆಯಲಿದೆ. ಆದರೆ ಅದಕ್ಕೂ ಮುಂಚಿತವಾಗಿ ಟ್ರೇಡಿಂಗ್ ವಿಂಡೋ ತೆರೆದಿದ್ದು ಈ ನಿಯಮದಡಿಯಲ್ಲಿ ಕೆಲವು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಬೇರೊಂದು ತಂಡದಿಂದ ಟ್ರೇಡ್ ಮಾಡಿಕೊಳ್ಳಲು ನೋಡುತ್ತಿವೆ. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವೆ ರವೀಂದ್ರ ಜಡೇಜಾ, ಸ್ಯಾಮ್ ಕರನ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಒಳಗೊಂಡ ಟ್ರೇಡಿಂಗ್ ಒಪ್ಪಂದವನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಏತನ್ಮಧ್ಯೆ, ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಸೇರಿದಂತೆ ಇತರ ಎರಡು ತಂಡಗಳ ನಡುವಿನ ಟ್ರೇಡಿಂಗ್​ ಒಪ್ಪಂದದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಆದಾಗ್ಯೂ, ಈ ಒಪ್ಪಂದವು ಆಟಗಾರರ ವಿನಿಮಯವನ್ನು ಒಳಗೊಂಡಿರುವುದಿಲ್ಲ, ಬದಲಿಗೆ ನಗದು ವ್ಯವಹಾರವನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.

ಲಕ್ನೋ ತಂಡಕ್ಕೆ ಅರ್ಜುನ್ ತೆಂಡೂಲ್ಕರ್

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಟ್ರೇಡ್ ವಿಂಡೋದಡಿಯಲ್ಲಿ ಒಪ್ಪಂದವೊಂದು ನಡೆಯುತ್ತಿದೆ ಎಂದು ವರದಿ ಮಾಡಿದೆ. ಆ ಪ್ರಕಾರ ಭಾರತದ ಅನುಭವಿ ವೇಗಿ ಶಾರ್ದೂಲ್ ಠಾಕೂರ್ ಅವರನ್ನು ಲಕ್ನೋ ತಂಡದಿಂದ ಮುಂಬೈ ಇಂಡಿಯನ್ಸ್‌ಗೆ ಟ್ರೇಡ್ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿದೆ. ಏತನ್ಮಧ್ಯೆ, ಮುಂಬೈನ ಯುವ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಅವರನ್ನು ಲಕ್ನೋ ತಂಡಕ್ಕೆ ಟ್ರೇಡ್ ಮಾಡಬಹುದು ಎಂತಲೂ ವರದಿಯಾಗಿದೆ.

ಎರಡು ತಂಡಗಳ ನಡುವೆ ನಗದು ವ್ಯವಹಾರ

ಐಪಿಎಲ್ ಟ್ರೇಡ್ ವಿಂಡೋ ನಗದು ವ್ಯವಹಾರಗಳಿಗೆ ನಿರ್ದಿಷ್ಟ ನಿಯಮಗಳನ್ನು ಹೊಂದಿದೆ. ಆ ಪ್ರಕಾರ ಒಂದು ತಂಡವು ಆಟಗಾರನನ್ನು ಅವನ ಮೂಲ ಖರೀದಿ ಬೆಲೆಗೆ ಸಮಾನವಾದ ಶುಲ್ಕವನ್ನು ನೀಡಿ ಖರೀದಿ ಮಾಡಬಹುದು. ಉದಾಹರಣೆಗೆ, ಮುಂಬೈ ಇಂಡಿಯನ್ಸ್ ಅರ್ಜುನ್ ಅವರನ್ನು ಮೆಗಾ ಹರಾಜಿನಲ್ಲಿ 20 ಲಕ್ಷಕ್ಕೆ ಖರೀದಿಸಿತ್ತು. ಇತ್ತ ಲಕ್ನೋ ಸೂಪರ್ ಜೈಂಟ್ಸ್ ಶಾರ್ದೂಲ್ ಠಾಕೂರ್ ಅವರನ್ನು 2 ಕೋಟಿಗೆ ಬದಲಿ ಆಟಗಾರನಾಗಿ ಆಯ್ಕೆ ಮಾಡಿತ್ತು. ಆದ್ದರಿಂದ, ಎರಡೂ ತಂಡಗಳು ಅಷ್ಟೇ ಹಣವನ್ನು ನೀಡಿ ಈ ಇಬ್ಬರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.

ಬೌಲಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ಕರ್ನಾಟಕವನ್ನು ಕಾಡಿದ ಅರ್ಜುನ್ ತೆಂಡೂಲ್ಕರ್

ಅರ್ಜುನ್ ತೆಂಡೂಲ್ಕರ್‌ಗೆ ದೊಡ್ಡ ಅವಕಾಶ

ಕಳೆದ ಕೆಲವು ಆವೃತ್ತಿಗಳಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ತಂಡದ ಭಾಗವಾಗಿದ್ದಾರೆ. ಆದಾಗ್ಯೂ, ಕಳೆದ ಸೀಸನ್​ನಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಅದಕ್ಕೂ ಮೊದಲು, ಅವರು 2023 ರಲ್ಲಿ ಪಾದಾರ್ಪಣೆ ಮಾಡಿ ನಾಲ್ಕು ಪಂದ್ಯಗಳನ್ನು ಆಡಿದ್ದರು. 2024 ರಲ್ಲಿ, ಅವರಿಗೆ ಕೇವಲ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿತು. ಇಲ್ಲಿಯವರೆಗೆ ಅವರು ಐಪಿಎಲ್‌ನಲ್ಲಿ ಐದು ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಬ್ಯಾಟ್ಸ್‌ಮನ್ ಆಗಿ, ಅವರು ಕೇವಲ 13 ರನ್‌ ಬಾರಿಸಿದ್ದಾರೆ. ಆದ್ದರಿಂದ, ಅರ್ಜುನ್ ಲಕ್ನೋ ತಂಡಕ್ಕೆ ಹೋದರೆ ಅವರಿಗೆ ಆಡುವ ಅವಕಾಶ ಸಿಕ್ಕರೂ ಸಿಗಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ