ರವೀಂದ್ರ ಜಡೇಜಾ ಖೇಲ್ ಖತಂ? ಅಜಿತ್ ಅಗರ್ಕರ್ ಹೇಳಿದ್ದೇನು?

Ravindra Jadeja: ಟೀಮ್ ಇಂಡಿಯಾದ ಅನುಭವಿ ಆಲ್​ರೌಂಡರ್ ರವೀಂದ್ರ ಜಡೇಜಾ 2024 ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದಾಗ್ಯೂ ಅವರು ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಮುಂದುವರೆದಿದ್ದರು. ಆದರೆ ಅಫ್ಘಾನಿಸ್ತಾನ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಜಡೇಜಾಗೆ ಸ್ಥಾನ ನೀಡಲಾಗಿರಲಿಲ್ಲ. ಹೀಗಾಗಿ ಅವರ ಇಂಟರ್​ನ್ಯಾಷನಲ್ ಕ್ರಿಕೆಟ್ ಕೆರಿಯರ್ ಬಗ್ಗೆ ಪ್ರಶ್ನೆಗಳೆದ್ದಿತ್ತು. ಈ ಪ್ರಶ್ಗೆ ಇದೀಗ ಬಿಸಿಸಿಐ ಉತ್ತರ ನೀಡಿದೆ.

ರವೀಂದ್ರ ಜಡೇಜಾ ಖೇಲ್ ಖತಂ? ಅಜಿತ್ ಅಗರ್ಕರ್ ಹೇಳಿದ್ದೇನು?
Ravindra Jadeja
Image Credit source: BCCI

Updated on: Jun 09, 2026 | 12:00 PM

ಟೀಮ್ ಇಂಡಿಯಾದಿಂದ ಅನುಭವಿ ಆಲ್​ರೌಂಡರ್ ರವೀಂದ್ರ ಜಡೇಜಾ ಅವರನ್ನು ಹೊರದಬ್ಬಲಾಗಿದೆಯಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಜಡೇಜಾ ಅವರನ್ನು ಎರಡು ಸರಣಿಗಳಿಂದ ಕೈ ಬಿಟ್ಟಿರುವುದು. ಅಂದರೆ ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳದ ಜಡೇಜಾ ಮುಂಬರುವ ಏಕದಿನ ಸರಣಿಯಲ್ಲೂ ಕಣಕ್ಕಿಳಿಯುವುದಿಲ್ಲ.

ಇದರ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ರವೀಂದ್ರ ಜಡೇಜಾ ಅವರ ಖೇಲ್ ಖತಂ ಆಗಿದೆಯಾ? ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಖುದ್ದು ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಉತ್ತರ ನೀಡಿದ್ದಾರೆ.

“ರವೀಂದ್ರ ಜಡೇಜಾ ಅವರಿಗೆ ಟೆಸ್ಟ್ ಪಂದ್ಯದ ವೇಳೆ ಕೇವಲ ವಿಶ್ರಾಂತಿ ನೀಡಲಾಗಿದೆ. ಈ ವಿಷಯ ಅವರಿಗೂ ಗೊತ್ತಿದೆ. ಅವರು ಇಂದಿಗೂ ಭಾರತೀಯ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರೇ ನಮ್ಮ ನಂ. 1 ಸ್ಪಿನ್ನರ್ ಆಗಿ ಮುಂದುವರಿಯಲಿದ್ದಾರೆ” ಎಂದು ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.

“ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಅವರ ಸಾಮರ್ಥ್ಯ ಏನೆಂಬುದು ನಮಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಈ ಸಣ್ಣ ಸರಣಿಗಳಲ್ಲಿ ಹರ್ಷ ದುಬೆ ಅವರಂತಹ ಇತರ ಹೊಸ ಆಟಗಾರರನ್ನು ಕಣಕ್ಕಿಳಿಸಿ ನಮ್ಮಲ್ಲಿರುವ ಪರ್ಯಾಯ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಸಣ್ಣ ಸರಣಿಗಳಿಗೆ ಅಕ್ಷರ್ ಪಟೇಲ್ ಮತ್ತು ಜಡೇಜಾ ಇಬ್ಬರನ್ನೂ ಒಟ್ಟಿಗೆ ಕರೆದೊಯ್ಯುವುದರಲ್ಲಿ ಯಾವುದೇ ಅರ್ಥವಿಲ್ಲ. ಇಬ್ಬರಲ್ಲಿ ಒಬ್ಬರು ಬೆಂಚ್ ಕಾಯಬೇಕಾಗುತ್ತದೆ”.

“ಬದಲಿಗೆ ಸುದೀರ್ಘ ಕ್ರಿಕೆಟ್ ಸರಣಿಗಳನ್ನು ಆಡಲು ಅವರ ಫಿಟ್ನೆಸ್ ಮತ್ತು ಕೆಲಸದ ಹೊರೆಯನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಬಿಸಿಸಿಐ ಈಗ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ” ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.

ಇದೇ ವೇಳೆ ಜಡೇಜಾ ಏಕದಿನ ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅಗರ್ಕರ್, “ರವೀಂದ್ರ ಜಡೇಜಾ ಅವರು  ನಮ್ಮ 2027 ರ ವಿಶ್ವಕಪ್ ಯೋಜನೆಗಳಲ್ಲಿದ್ದಾರೆ. ಅವರ ಅನುಭವ ಮತ್ತು ಆಲ್-ರೌಂಡರ್ ಪ್ರದರ್ಶನ ತಂಡಕ್ಕೆ ಸದಾ ಮುಖ್ಯ” ಎಂದಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ರವೀಂದ್ರ ಜಡೇಜಾ ಆಯ್ಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಸರಿಯಾದ ನಿರ್ಧಾರ… ರಜತ್ ಪಾಟಿದಾರ್ ಆಯ್ಕೆಯಾಗದಿರಲು ಇದುವೇ ಕಾರಣ!

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಜುಲೈ 14 ರಿಂದ ಶುರುವಾಗಲಿದ್ದು, ಈ ಸರಣಿಯ ಮೂಲಕ ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us