
ಟಿ20 ವಿಶ್ವಕಪ್ನಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದ ಪಾಕಿಸ್ತಾನ್ ತಂಡವು ಇದೀಗ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಗಾಗಿ ಸಜ್ಜಾಗಿದೆ. ಮೂರು ಪಂದ್ಯಗಳ ಈ ಏಕದಿನ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಬಾಬರ್ ಆಝಂಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ. ಟಿ20 ವಿಶ್ವಕಪ್ನಲ್ಲಿನ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಬಾಬರ್ನನ್ನು ಕೈ ಬಿಡಲಾಗಿದೆ ಎನ್ನಲಾಗಿತ್ತು. ಆದರೆ ಈ ವರದಿಯನ್ನು ಪಾಕ್ ತಂಡದ ನೂತನ ನಾಯಕ ಶಾಹೀನ್ ಶಾ ಅಫ್ರಿದಿ ಅಲ್ಲೆಗೆಳೆದಿದ್ದಾರೆ.
ಪಾಕಿಸ್ತಾನ್ ಏಕದಿನ ತಂಡದಿಂದ ಬಾಬರ್ ಆಝಂ ಅವರನ್ನು ಕೈ ಬಿಟ್ಟಿಲ್ಲ. ಬದಲಾಗಿ 2027ರ ಏಕದಿನ ವಿಶ್ವಕಪ್ಗೂ ಮುನ್ನ ಯುವ ಆಟಗಾರರಿಗೆ ಅವಕಾಶ ನೀಡಲು ಅವರನ್ನು ಹೊರಗಿಡಲಾಗಿದೆ ಎಂದು ಶಾಹೀನ್ ಶಾ ಅಫ್ರಿದಿ ಹೇಳಿದ್ದಾರೆ.
ಅಂದರೆ ಬಾಬರ್ ಆಝಂ ಯಾವಾಗ ಬೇಕಿದ್ದರೂ ತಂಡಕ್ಕೆ ಮರಳಬಹುದು. ಸದ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ ಅಷ್ಟೇ ಎಂದು ಶಾಹೀನ್ ಶಾ ಅಫ್ರಿದಿ ಸ್ಪಷ್ಟನೆ ನೀಡಿದ್ದಾರೆ.
ಆದರೆ ಅತ್ತ ಪಾಕ್ ತಂಡದ ಕೋಚ್ ಮೈಕ್ ಹೆಸ್ಸನ್ ಅವರು ಬಾಬರ್ ಆಝಂ ಅವರ ಬ್ಯಾಟಿಂಗ್ ಹಾಗೂ ಸ್ಟ್ರೈಕ್ ರೇಟ್ನಿಂದ ಸಂತುಷ್ಟರಾಗಿಲ್ಲ. ಹೀಗಾಗಿಯೇ ಟಿ20 ವಿಶ್ವಕಪ್ನ ಕೊನೆಯ ಪಂದ್ಯಗಳ ವೇಳೆ ಬಾಬರ್ನನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಡಲಾಗಿತ್ತು. ಇದೀಗ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಯಿಂದಲೂ ಅವರನ್ನು ಕೈ ಬಿಡಲಾಗಿದೆ.
ಇತ್ತ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಈ ನಡೆಯ ವಿರುದ್ಧ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಏಕೆಂದರೆ ಬಾಬರ್ ಆಝಂ ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರು ಟಿ20 ಕ್ರಿಕೆಟ್ನಲ್ಲಿ ಮಾತ್ರ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿಯೇ ಟಿ20 ಕ್ರಿಕೆಟ್ಗೆ ಬಾಬರ್ ಸೂಕ್ತ ಆಟಗಾರನಲ್ಲ ಎಂಬ ಅಭಿಪ್ರಾಯಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ.
ಆದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಟಿ20 ಕ್ರಿಕೆಟ್ನಲ್ಲಿನ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಂಡು ಬಾಬರ್ ಆಝಂ ಅವರನ್ನು ಏಕದಿನ ತಂಡದಿಂದ ಕೈ ಬಿಟ್ಟಿದ್ದಾರೆ. ಹೀಗಾಗಿಯೇ ಇದೀಗ ಪಾಕ್ ತಂಡದ ನೂತನ ನಾಯಕ ಶಾಹೀನ್ ಶಾ ಅಫ್ರಿದಿ ಬಾಬರ್ ಆಝಂ ಅವರನ್ನು ತಂಡದಿಂದ ಕೈ ಬಿಟ್ಟಿಲ್ಲ ಎಂಬ ಹೇಳಿಕೆಯ ಮೂಲಕ ಸಮಜಾಯಿಷಿ ನೀಡಿದ್ದಾರೆ.
ಇದನ್ನೂ ಓದಿ: ಭಾರತ ತಂಡದೊಂದಿಗಿನ ‘ಅಂತರ’ ಬೆಳೀತಾ ಹೋಗ್ತಿದೆ!
ಪಾಕಿಸ್ತಾನ್ ಏಕದಿನ ತಂಡ: ಶಾಹೀನ್ ಶಾ ಅಫ್ರಿದಿ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫೈಸಲ್ ಅಕ್ರಮ್, ಹಾರಿಸ್ ರೌಫ್, ಹುಸೇನ್ ತಲತ್, ಮಾಝ್ ಸದಾಕತ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಂ ಜೂನಿಯರ್, ಮುಹಮ್ಮದ್ ಗಾಝಿ ಘೋರಿ (ವಿಕೆಟ್ ಕೀಪರ್), ಸಾದ್ ಮಸೂದ್, ಸಾಹಿಬ್ಝಾದ ಫರ್ಹಾನ್, ಸಲ್ಮಾನ್ ಅಲಿ ಅಘಾ ಮತ್ತು ಶಾಮಿಲ್ ಹುಸೇನ್.