
ಝಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾಗೆ ಅಂತಿಮ ಪಂದ್ಯಕ್ಕೂ ಮುನ್ನ ಭಾರಿ ಆಘಾತ ಎದುರಾಗಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಪ್ರಿನ್ಸ್ ಯಾದವ್ ಗಾಯಗೊಂಡಿದ್ದು, ಹೀಗಾಗಿ ಅವರು ಮೂರನೇ ಪಂದ್ಯದಿಂದ ಹೊರಗುಳಿದಿದ್ದಾರೆ.
ಝಿಂಬಾಬ್ವೆ ಇನ್ನಿಂಗ್ಸ್ನ ತನ್ನ ಎರಡನೇ ಓವರ್ನ ಎರಡನೇ ಎಸೆತವನ್ನು ಎಸೆಯುವಾಗ ಪ್ರಿನ್ಸ್ ಯಾದವ್ ಅವರ ಹ್ಯಾಮ್ಸ್ಟ್ರಿಂಗ್ ಸ್ನಾಯು ಸೆಳೆತಕ್ಕೊಳಗಾಯಿತು. ರನ್-ಅಪ್ ಮಧ್ಯದಲ್ಲೇ ತೀವ್ರ ನೋವಿನಿಂದ ನರಳಿದ ಅವರು ತಕ್ಷಣವೇ ಮೈದಾನದಲ್ಲೇ ಕುಳಿತುಕೊಂಡರು.
ತಂಡದ ಫಿಸಿಯೋ ತಪಾಸಣೆ ನಡೆಸಿದ ಬಳಿಕ, ಅವರು ಕುಂಟುತ್ತಾ ಮೈದಾನದಿಂದ ಹೊರನಡೆದಿದ್ದರು. ಹೀಗಾಗಿ ಅವರ ಓವರ್ನ ಬಾಕಿ ಉಳಿದ ಎಸೆತಗಳನ್ನು ಆಲ್ ರೌಂಡರ್ ಶಿವಂ ದುಬೆ ಪೂರ್ಣಗೊಳಿಸಿದ್ದರು.
ಮೈದಾನದಿಂದ ಹೊರಹೋಗುವ ಮುನ್ನ ಪ್ರಿನ್ಸ್ ಯಾದವ್ ಕೇವಲ 10 ರನ್ ನೀಡಿ ಝಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಝ ಸೇರಿದಂತೆ 2 ಪ್ರಮುಖ ವಿಕೆಟ್ ಪಡೆಯುವ ಮೂಲಕ ಎದುರಾಳಿಗಳಿಗೆ ಆರಂಭಿಕ ಆಘಾತ ನೀಡಿದ್ದರು. ಇದೀಗ ಹ್ಯಾಮ್ಸ್ಟ್ರಿಂಗ್ ಇಂಜುರಿ ಕಾರಣ ಮೂರನೇ ಟಿ20 ಪಂದ್ಯದಿಂದ ಹೊರಗುಳಿಯಲಿದ್ದಾರೆ.
ದ್ವಿತೀಯ ಟಿ20 ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ದುರದೃಷ್ಟವಶಾತ್ ನಮ್ಮ ಪ್ರಮುಖ ಆಟಗಾರರೊಬ್ಬರು ಗಾಯಗೊಂಡಿದ್ದಾರೆ. ಹೀಗಾಗಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ನೀವು ನಿರೀಕ್ಷಿಸಬಹುದು ಎಂದು ತಿಳಿಸಿದ್ದಾರೆ.
ಹೀಗಾಗಿ ಭಾನುವಾರ ನಡೆಯಲಿರುವ ಝಿಂಬಾಬ್ವೆ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ. ಇಲ್ಲಿ ಪ್ರಿನ್ಸ್ ಯಾದವ್ ಬದಲಿಗೆ ವೇಗದ ಬೌಲಿಂಗ್ ಆಲ್ರೌಂಡರ್ ಸೂರ್ಯಂಶ್ ಶೆಡ್ಗೆಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ.
ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಸೂರ್ಯಂಶ್ ಶೆಡ್ಗೆ, ಯಶ್ ಠಾಕೂರ್, ಮಯಾಂಕ್ ಯಾದವ್.
ಇದನ್ನೂ ಓದಿ: ಅಗ್ರಸ್ಥಾನ ಮರಳಿ ಪಡೆದ ಟೀಮ್ ಇಂಡಿಯಾ