ವಿದಾಯದ ಬೆನ್ನಲ್ಲೇ ಕಿಂಗ್ ಕೊಹ್ಲಿಗೆ ಹೊಸ ಟಾಸ್ಕ್ ನೀಡಿದ ಗುರು ದ್ರಾವಿಡ್; ಏನದು..? ವಿಡಿಯೋ ನೋಡಿ

|

Updated on: Jul 01, 2024 | 7:24 PM

Rahul Dravid: ಭಾರತ ತಂಡದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ದಿನದಂದು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಹೊಸ ಟಾಸ್ಕ್​ವೊಂದನ್ನು ನೀಡಿದ್ದಾರೆ. ಐಸಿಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆ ಟಾಸ್ಕ್ ಬಗ್ಗೆ ದ್ರಾವಿಡ್, ಕೊಹ್ಲಿ ಬಳಿ ಮಾತನಾಡಿದ್ದಾರೆ.

ವಿದಾಯದ ಬೆನ್ನಲ್ಲೇ ಕಿಂಗ್ ಕೊಹ್ಲಿಗೆ ಹೊಸ ಟಾಸ್ಕ್ ನೀಡಿದ ಗುರು ದ್ರಾವಿಡ್; ಏನದು..? ವಿಡಿಯೋ ನೋಡಿ
ಟೀಂ ಇಂಡಿಯಾ
Follow us on

ಭಾರತ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಂಡಿದೆ. ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವುದರೊಂದಿಗೆ ತಂಡದೊಂದಿಗೆ ದ್ರಾವಿಡ್ ಪಯಣ ಕೊನೆಗೊಂಡಿತು. ದ್ರಾವಿಡ್ ಅವರ ಅಧಿಕಾರಾವಧಿಯಲ್ಲಿ ಭಾರತವು ತನ್ನ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತು. ಆದರೆ, ಭಾರತ ತಂಡದ ನಿರ್ಗಮಿತ ಕೋಚ್ ದ್ರಾವಿಡ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ದಿನದಂದು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಹೊಸ ಟಾಸ್ಕ್​ವೊಂದನ್ನು ನೀಡಿದ್ದಾರೆ. ಐಸಿಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆ ಟಾಸ್ಕ್ ಬಗ್ಗೆ ದ್ರಾವಿಡ್, ಕೊಹ್ಲಿ ಬಳಿ ಮಾತನಾಡಿದ್ದಾರೆ.

ಡಬ್ಲ್ಯುಟಿಸಿ ಗೆಲ್ಲಿ; ದ್ರಾವಿಡ್

ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಎರಡನೇ ಬಾರಿಗೆ ಈ ಟೂರ್ನಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್ ಕೊಹ್ಲಿ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಭಾಗವಾಗಿದ್ದರು. ಇದೀಗ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯರು ಆಗಿದ್ದಾರೆ. ಈ ಮೂಲಕ ಕೊಹ್ಲಿ ಮೂರು ಸೀಮಿತ ಓವರ್‌ಗಳ ಐಸಿಸಿ ಟೂರ್ನಿಗಳನ್ನು ಗೆದ್ದಿರುವವರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇದನ್ನೇ ಇಟ್ಟುಕೊಂಡು ರಾಹುಲ್ ದ್ರಾವಿಡ್, ಕಿಂಗ್ ಕೊಹ್ಲಿಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಟೆಸ್ಟ್ ಮಾದರಿಯ ಅತಿದೊಡ್ಡ ಪಂದ್ಯಾವಳಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಗೆಲ್ಲಲು ದ್ರಾವಿಡ್ ಕೊಹ್ಲಿಯನ್ನು ಕೇಳಿಕೊಂಡಿದ್ದಾರೆ.

ವಿಡಿಯೋ ವೈರಲ್

ಐಸಿಸಿ ತನ್ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಭಾರತೀಯ ಆಟಗಾರರು ಫೈನಲ್ ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಪರಸ್ಪರ ಭೇಟಿಯಾಗುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದೆ. ಈ ವೇಳೆ ರಾಹುಲ್ ದ್ರಾವಿಡ್, ಕೊಹ್ಲಿಗೆ ‘ಎಲ್ಲಾ ಮೂರು ವೈಟ್ ಬಾಲ್ ಫಾರ್ಮ್ಯಾಟ್‌ಗಳನ್ನು ಗೆದ್ದಾಗಿದೆ. ಆದರೆ ಕೆಂಪು ಚೆಂಡಿನ ಮಾದರಿ ಮಾತ್ರ ಇನ್ನು ಬಾಕಿ ಉಳಿದಿದೆ. ಹೀಗಾಗಿ ಅದನ್ನೂ ಪಡೆದುಕೊಳ್ಳಿ’ ಎಂದು ದ್ರಾವಿಡ್ ಹೇಳಿದ್ದಾರೆ. ದ್ರಾವಿಡ್ ಈ ಹೇಳಿಕೆ ನೀಡಿದ ಕೂಡಲೇ ಕೊಹ್ಲಿ ನಗುವಿನ ಉತ್ತರ ನೀಡಿದ್ದಾರೆ. ಭಾರತ ಎರಡು ಬಾರಿ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸೋತಿದೆ (2021 ರಲ್ಲಿ ನ್ಯೂಜಿಲೆಂಡ್‌ಗೆ ಮತ್ತು 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ). ಅಂದಹಾಗೆ 35ರ ಹರೆಯದ ಕೊಹ್ಲಿ ವಿಶ್ವಕಪ್ ಗೆದ್ದ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಫೈನಲ್‌ನಲ್ಲಿ ಡೇವಿಡ್ ಮಿಲ್ಲರ್ ಅವರ ಅದ್ಭುತ ಕ್ಯಾಚ್ ಹಿಡಿದ ಬಗ್ಗೆಯೂ ಸೂರ್ಯಕುಮಾರ್ ಯಾದವ್ ಈ ವೀಡಿಯೊದಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಈ ಸಾಧನೆಯನ್ನು ಅರ್ಥ ಮಾಡಿಕೊಳ್ಳಲು ಎರಡು ದಿನವಾದರೂ ಬೇಕು. ‘ನನಗೆ ಈಗ ಏನೂ ಅನಿಸುತ್ತಿಲ್ಲ. ಏನು ಹೇಳಬೇಕೆಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಬಾರ್ಬಡೋಸ್‌ನಲ್ಲಿ ಟೀಂ ಇಂಡಿಯಾ

ವಾಸ್ತವವಾಗಿ ಟಿ20 ವಿಶ್ವಕಪ್ ಮುಗಿದು ಎರಡು ದಿನವಾದರೂ ಟೀಂ ಇಂಡಿಯಾ ಭಾರತಕ್ಕೆ ಬಂದಿಲ್ಲ. ಬೆರಿಲ್ ಚಂಡಮಾರುತದ ಎಚ್ಚರಿಕೆಯಿಂದಾಗಿ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿರುವ ಕಾರಣ ಭಾರತ ತಂಡ ಪ್ರಸ್ತುತ ಬಾರ್ಬಡೋಸ್‌ನಲ್ಲಿದೆ. ಭಾರತ ತಂಡ ನ್ಯೂಯಾರ್ಕ್‌ನಿಂದ ದುಬೈ ಮೂಲಕ ಎಮಿರೇಟ್ಸ್ ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಈಗ ಚಾರ್ಟರ್ಡ್ ವಿಮಾನದ ಮೂಲಕ ತಂಡವನ್ನು ವಾಪಸ್ ಕರೆತರಬಹುದು ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ