Maharaja Trophy T20: ಕರ್ನಾಟಕ ಟಿ20 ಲೀಗ್​ಗೆ ಸಮಿತ್ ದ್ರಾವಿಡ್ ಎಂಟ್ರಿ

|

Updated on: Jul 27, 2024 | 8:20 AM

Maharaja Trophy T20: 2022 ರಿಂದ ಶುರುವಾದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವು ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು 2023 ರಲ್ಲಿ ಜರುಗಿದ ದ್ವಿತೀಯ ಸೀಸನ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಯಶಸ್ವಿಯಾಗಿತ್ತು. ಇದೀಗ ಮೂರನೇ ಸೀಸನ್​ ಆಯೋಜನೆಗೆ ವೇದಿಕೆ ಸಿದ್ಧವಾಗಿದೆ.

Maharaja Trophy T20: ಕರ್ನಾಟಕ ಟಿ20 ಲೀಗ್​ಗೆ ಸಮಿತ್ ದ್ರಾವಿಡ್ ಎಂಟ್ರಿ
ಸಮಿತ್-ರಾಹುಲ್ ದ್ರಾವಿಡ್
Follow us on

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಲೀಗ್​ಗೆ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಮಿತ್ ಅವರನ್ನು ಮೈಸೂರು ವಾರಿಯರ್ಸ್ ಫ್ರಾಂಚೈಸಿ ಖರೀದಿಸಿದೆ. ಆಲ್​ರೌಂಡರ್ ಆಗಿರುವ 18 ವರ್ಷದ ಸಮಿತ್ ದ್ರಾವಿಡ್ ಈ ಹಿಂದೆ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲದೆ 2023-24 ಕೂಚ್ ಬೆಹಾರ್ ಟ್ರೋಫಿ ಗೆದ್ದ ಕರ್ನಾಟಕ ಕಿರಿಯರ ತಂಡದ ಭಾಗವಾಗಿದ್ದರು.

ಇದೇ ಮೊದಲ ಬಾರಿಗೆ ಮಹಾರಾಜ ಟ್ರೋಫಿ ಟಿ20 ಲೀಗ್ ಹರಾಜಿಗೆ ಹೆಸರು ನೀಡಿದ್ದ ರಾಹುಲ್ ದ್ರಾವಿಡ್ ಪುತ್ರನನ್ನು ಮೈಸೂರು ವಾರಿಯರ್ಸ್ ಫ್ರಾಂಚೈಸಿಯು 50 ಸಾವಿರ ರೂ. ನೀಡಿ ಖರೀದಿಸಿದೆ. ಅದರಂತೆ ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಲೀಗ್​ನಲ್ಲಿ ಕರುಣ್ ನಾಯರ್ ಮುಂದಾಳತ್ವದ ಮೈಸೂರು ವಾರಿಯರ್ಸ್ ತಂಡವನ್ನು ಸಮಿತ್ ದ್ರಾವಿಡ್ ಪ್ರತಿನಿಧಿಸಲಿದ್ದಾರೆ.

ಮೈಸೂರು ವಾರಿಯರ್ಸ್ ತಂಡ: ಕರುಣ್ ನಾಯರ್ (ನಾಯಕ), ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ಕಾರ್ತಿಕ್ ಎಸ್ ಯು, ಜಗದೀಶ್ ಸುಚಿತ್, ಕೃಷ್ಣಪ್ಪ ಗೌತಮ್, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ, ಹರ್ಷಿಲ್ ಧರ್ಮಾನಿ, ಗೌತಮ್ ಮಿಶ್ರಾ, ಧನುಷ್ ಗೌಡ, ಸಮಿತ್ ದ್ರಾವಿಡ್, ದೀಪಕ್ ದೇವಾಡಿಗ, ಸುಮಿತ್ ಕುಮಾರ್, ಸ್ಮಯನ್ ಶ್ರೀವಾಸ್ತವ, ಜಾಸ್ಪರ್ ಇಜೆ , ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸರ್ಫರಾಝ್ ಅಶ್ರಫ್.

ದುಬಾರಿ ಆಟಗಾರ ಯಾರು?

ಮಹಾರಾಜ ಟ್ರೋಫಿ ಟಿ20 ಲೀಗ್​ನ ಹರಾಜಿನಲ್ಲಿ ಈ ಬಾರಿ ದುಬಾರಿ ಮೊತ್ತಕ್ಕೆ ಬಿಡ್ ಆಗಿರುವುದು ವಿಕೆಟ್ ಕೀಪರ್ ಬ್ಯಾಟರ್ ಎಲ್​ಆರ್​ ಚೇತನ್. ಕಳೆದ ಸೀಸನ್​ನಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು ಪ್ರತಿನಿಧಿಸಿದ್ದ ಚೇತನ್ ಅವರನ್ನು ಈ ಬಾರಿ 8.2 ಲಕ್ಷ ರೂ. ನೀಡಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಖರೀದಿಸಿದೆ. ಹಾಗೆಯೇ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು 7.6 ಲಕ್ಷ ರೂ.ಗೆ ಮಂಗಳೂರು ಡ್ರಾಗನ್ಸ್ ಫ್ರಾಂಚೈಸಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?

ಮಹಾರಾಜ ಟ್ರೋಫಿ ಯಾವಾಗ ಶುರು?

2024ರ ಮಹಾರಾಜ ಟ್ರೋಫಿಯ ಸೆಪ್ಟೆಂಬರ್ 15 ರಿಂದ ಶುರುವಾಗಲಿದ್ದು, ಅಕ್ಟೋಬರ್ 1 ರವರೆಗೆ ನಡೆಯಲಿದೆ. ಈ ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ.

 

Published On - 8:19 am, Sat, 27 July 24