Ranji Trophy: 74 ವರ್ಷಗಳ ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್​ಗೇರಿದ ಕೇರಳ

Ranji Trophy Semifinals: ರಣಜಿ ಟ್ರೋಫಿಯ ಸೆಮಿಫೈನಲ್‌ನಲ್ಲಿ ಕೇರಳ ತಂಡ ಗುಜರಾತ್ ಅನ್ನು ಸೋಲಿಸಿ ಐತಿಹಾಸಿಕವಾಗಿ ಮೊದಲ ಬಾರಿಗೆ ಫೈನಲ್ ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ರನ್‌ಗಳ ಮುನ್ನಡೆ ಸಾಧಿಸಿದ ಕೇರಳ, ಅಂತಿಮ ದಿನದ ನಿಯಮಗಳ ಪ್ರಕಾರ ಫೈನಲ್‌ಗೆ ಅರ್ಹತೆ ಪಡೆಯಿತು. ಅಜರುದ್ದೀನ್ ಅವರ ಅದ್ಭುತ ಬ್ಯಾಟಿಂಗ್ ಮತ್ತು ಕೇರಳ ಬೌಲರ್‌ಗಳ ಸೂಕ್ಷ್ಮ ಕಾರ್ಯತಂತ್ರ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.

Ranji Trophy: 74 ವರ್ಷಗಳ ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್​ಗೇರಿದ ಕೇರಳ
ಕೇರಳ ತಂಡ

Updated on: Feb 21, 2025 | 5:38 PM

ದೇಶೀ ಟೂರ್ನಿ ರಣಜಿ ಟ್ರೋಫಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ನಾಲ್ಕು ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ ವಿದರ್ಭ ತಂಡ ಫೈನಲ್​ಗೇರುವಲ್ಲಿ ಯಶಸ್ವಿಯಾದರೆ, ಇತ್ತ ಗುಜರಾತ್ ತಂಡವನ್ನು ರೋಚಕ ರೀತಿಯಲ್ಲಿ ಮಣಿಸಿದ ಕೇರಳ ತಂಡ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ತಲುಪಿದೆ. ಈ ಪಂದ್ಯಾವಳಿಯ 74 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇರಳ ತಂಡ ಈ ಸಾಧನೆ ಮಾಡಿದೆ. ಅಚ್ಚರಿಯ ಸಂಗತಿಯೆಂದರೆ ಉಭಯ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಕೇರಳ ತಂಡ ಪಡೆದುಕೊಂಡ 2 ರನ್​ಗಳ ಮುನ್ನಡೆಯೇ ಫೈನಲ್​ಗೇರುವಲ್ಲಿ ನಿರ್ಣಾಯಕ ಪಾತ್ರವಹಿಸಿತು.

ಇತಿಹಾಸ ಸೃಷ್ಟಿಸಿದ ಕೇರಳ

ಕೇರಳ ಮತ್ತು ಗುಜರಾತ್ ನಡುವಿನ ಸೆಮಿಫೈನಲ್ ಪಂದ್ಯ ಫೆಬ್ರವರಿ 17 ರಂದು ಪ್ರಾರಂಭವಾಯಿತು. ಈ ಪಂದ್ಯದ ಮೊದಲ ದಿನದಂದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೇರಳ 187 ಓವರ್‌ಗಳಲ್ಲಿ 457 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಇದಕ್ಕೆ ಪ್ರತಿಯಾಗಿ ಗುಜರಾತ್ ಕೂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 174 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 455 ರನ್ ಗಳಿಸಿತು. ಈಗ ಗುಜರಾತ್‌ಗೆ ಸಮಬಲ ಸಾಧಿಸಲು 2 ರನ್‌ಗಳು ಮತ್ತು ಮುನ್ನಡೆ ಸಾಧಿಸಲು 2 ರನ್‌ಗಳು ಬೇಕಾಗಿದ್ದವು. ಆದರೆ ಒಂದೇ ಒಂದು ವಿಕೆಟ್ ಉಳಿದಿತ್ತು. ಆದರೆ ಅದೃಷ್ಟ ಮಾತ್ರ ಕೇರಳ ಪರ ವಾಲಿತು.

ವಾಸ್ತವವಾಗಿ 175 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಗುಜರಾತ್ ಬ್ಯಾಟ್ಸ್‌ಮನ್ ನಾಗಸ್ವಲ್ಲಾ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಶಾರ್ಟ್ ಲೆಗ್‌ನಲ್ಲಿ ನಿಂತ್ತಿದ್ದ ಫೀಲ್ಡರ್ ಸಲ್ಮಾನ್ ನಿಜರ್ ಅವರ ಹೆಲ್ಮೆಟ್‌ಗೆ ತಗುಲಿ ಮೊದಲ ಸ್ಲಿಪ್‌ನ ಹಿಂದೆ ಪುಟಿದೆದ್ದಿತು. ಅಲ್ಲೇ ಇದ್ದ ಸಚಿನ್ ಬೇಬಿ ಸುಲಭವಾಗಿ ಕ್ಯಾಚ್ ಹಿಡಿದರು. ಈ ರೀತಿಯಾಗಿ ಕೇರಳ ಕೊನೆಯ ವಿಕೆಟ್‌ ಉರುಳಿಸುವುದರೊಂದಿಗೆ 2 ರನ್‌ಗಳ ಮುನ್ನಡೆಯನ್ನು ಪಡೆಯಿತು. ಆದಾಗ್ಯೂ, ಇನ್ನೂ ಎರಡು ಇನ್ನಿಂಗ್ಸ್ ಆಟ ಉಳಿದಿದೆ. ಆದರೆ ಫೆಬ್ರವರಿ 21 ಈ ಪಂದ್ಯದ ಕೊನೆಯ ದಿನವಾಗಿದ್ದು, ನಿಯಮಗಳ ಪ್ರಕಾರ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವ ತಂಡ ಅಂದರೆ ಕೇರಳ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಅಜರುದ್ದೀನ್ ಅಮೋಘ ಬ್ಯಾಟಿಂಗ್

ಕೇರಳ ಫೈನಲ್​ಗೇರುವಲ್ಲಿ ಅಜರುದ್ದೀನ್ ಪಾತ್ರ ಅಪಾರವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 341 ಎಸೆತಗಳಲ್ಲಿ 177 ರನ್ ಗಳಿಸಿದರು. ಇದರರ್ಥ ಅವರು ರನ್ ಗಳಿಸುವುದರ ಜೊತೆಗೆ, ಕ್ರೀಸ್‌ನಲ್ಲಿಯೂ ಸಮಯ ಕಳೆದರು. ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡ ಕೇವಲ 86 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಲ್ಕನೇ ವಿಕೆಟ್​ ಕೂಡ 157 ರನ್‌ಗಳಿಗೆ ಪತನಗೊಂಡಿತು. ಇದಾದ ನಂತರ, ಅಜರುದ್ದೀನ್ ತಂಡದ ನಾಯಕ ಸಚಿನ್ ಬೇಬಿ ಜೊತೆಗೂಡಿ 49 ರನ್‌ಗಳ ಜೊತೆಯಾಟವಾಡಿದರು. ಆದರೆ 205 ರನ್ ಗಳಿದ್ದಾಗ ಸಚಿನ್ 69 ರನ್ ಗಳಿಸಿ ಔಟಾದರು.

ಇದಾದ ನಂತರ, ಅಜರುದ್ದೀನ್ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೊಂದಿಗೆ ಸೇರಿ ಸ್ಕೋರ್ ಅನ್ನು 457 ರನ್‌ಗಳಿಗೆ ಕೊಂಡೊಯ್ದರು. ಬೌಲಿಂಗ್‌ನಲ್ಲಿ ಆದಿತ್ಯ ಸರ್ವತೆ ಮತ್ತು ಜಲಜ್ ಸಕ್ಸೇನಾ ತಲಾ 4 ವಿಕೆಟ್ ಪಡೆದರು. ಎನ್. ಬಾಸಿಲ್ ಮತ್ತು ನಿಧಿಶ್ ತಲಾ 1 ವಿಕೆಟ್ ಪಡೆದರು. ಗುಜರಾತ್ ಪರ ಪ್ರಿಯಾಂಕ್ ಪಾಂಚಾಲ್ 148 ರನ್ ಗಳಿಸಿದರಾದರೂ ಮೊದಲ ಇನ್ನಿಂಗ್ಸ್‌ನಲ್ಲಿ ತಮ್ಮ ತಂಡಕ್ಕೆ ಮುನ್ನಡೆ ನೀಡಲು ಸಾಧ್ಯವಾಗಲಿಲ್ಲ.

Published On - 5:23 pm, Fri, 21 February 25