
ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೊಶ್ಚೆಟ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆಗಿನ ತಮ್ಮ ಎರಡು ವರ್ಷಗಳ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕಡೆಯಿಂದ ಸಿಕ್ಕ ಭರ್ಜರಿ ಆಫರ್ ಎನ್ನಲಾಗಿದೆ.
ಟೀಮ್ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿರುವ ರಯಾನ್ ಟೆನ್ ಡೊಶ್ಚೆಟ್ ಮುಂಬರುವ IPL 2027 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಪ್ರಮುಖ ಕೋಚಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ರಯಾನ್ ಟೆನ್ ಡೊಶ್ಚೆಟ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ‘ಬಲಗೈ ಬಂಟ’ (Right-ಆಗಿದ್ದರು.
2011–2017ರ ನಡುವೆ ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದಾಗ, ರಯಾನ್ ಟೆನ್ ಡೊಶ್ಚೆಟ್ ಆ ತಂಡದ ಪ್ರಮುಖ ಆಟಗಾರರಾಗಿದ್ದರು. ಗಂಭೀರ್ ನಾಯಕತ್ವದಲ್ಲಿ ತಂಡ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಾಗ ಇಬ್ಬರ ನಡುವೆ ಬಲವಾದ ಸ್ನೇಹ ಬೆಳೆಯಿತು.
2024 ರಲ್ಲಿ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ಮರಳಿದಾಗ, ಟೆನ್ ಡೊಶ್ಚೆಟ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಿದ್ದರು. ಇದೇ ಅವಧಿಯಲ್ಲಿ ಕೆಕೆಆರ್ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇನ್ನು ಗೌತಮ್ ಗಂಭೀರ್ ಅವರು ಭಾರತ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಾಗ, ಬಿಸಿಸಿಐ ಮುಂದೆ ತಮಗೆ ಸಹಾಯಕ ತರಬೇತುದಾರರಾಗಿ ರಯಾನ್ ಟೆನ್ ಡೊಶ್ಚೆಟ್ ಮತ್ತು ಅಭಿಷೇಕ್ ನಾಯರ್ ಅವರೇ ಬೇಕು ಎಂದು ಪಟ್ಟುಹಿಡಿದು ಕರೆತಂದಿದ್ದರು.
ಗಂಭೀರ್ ಅವರ ಯೋಜನೆಗಳನ್ನು ಮೈದಾನದಲ್ಲಿ ಜಾರಿಗೆ ತರುತ್ತಿದ್ದ ಅತ್ಯಂತ ಆಪ್ತರು ಇವರೇ ಆಗಿದ್ದರು. ಇದೀಗ ರಯಾನ್ ಟೆನ್ ಡೊಶ್ಚೆಟ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿ ಐಪಿಎಲ್ನತ್ತ ಮುಖ ಮಾಡಿದ್ದಾರೆ.
ಸ್ಥಾನದ ಗೊಂದಲ: ಜುಲೈ 2024 ರಲ್ಲಿ ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾದ ಜವಾಬ್ದಾರಿ ವಹಿಸಿಕೊಂಡಾಗ ರಯಾನ್ ಅವರನ್ನು ಪ್ರಮುಖವಾಗಿ ‘ಫೀಲ್ಡಿಂಗ್ ಕೋಚ್’ ಹುದ್ದೆಗಾಗಿ ಆಯ್ಕೆ ಮಾಡಿದ್ದರು. ಆದರೆ, ಹಿರಿಯ ಆಟಗಾರರ ಶಿಫಾರಸಿನ ಮೇರೆಗೆ ಟಿ. ದಿಲೀಪ್ ಅವರನ್ನೇ ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಸಲಾಯಿತು.
ಇದರಿಂದಾಗಿ ರಯಾನ್ ಟೆನ್ ಡೊಶ್ಚೆಟ್ ಅವರು ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡೂ ವಿಭಾಗಗಳನ್ನು ನಿಭಾಯಿಸುವ ಸಾಮಾನ್ಯ ಸಹಾಯಕ ಕೋಚ್ ಪಾತ್ರಕ್ಕೆ ಸೀಮಿತವಾಗಬೇಕಾಯಿತು. ಹೀಗಾಗಿ ಅವರು ಈ ಹಿಂದೆಯೇ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ನಿರಂತರ ಪ್ರಯಾಣದ ಒತ್ತಡ: ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವರ್ಷಪೂರ್ತಿ ಇರುವ ನಿರಂತರ ಪ್ರಯಾಣದ ವೇಳಾಪಟ್ಟಿಯಿಂದ ಬಿಡುಗಡೆ ಪಡೆದು, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ರಯಾನ್ ಬಯಸಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ (IPL) ಕೇವಲ ಎರಡು ತಿಂಗಳ ಅವಧಿಯದ್ದಾಗಿರುವುದರಿಂದ ಇದು ಅವರಿಗೆ ಹೆಚ್ಚು ಅನುಕೂಲಕರವಾಗಿದೆ.
2024 ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಸಪೋರ್ಟ್ ಸ್ಟಾಫ್ ಆಗಿ ಸೇರಿದ್ದ ರಯಾನ್ ಟೆನ್ ಡೊಶ್ಚೆಟ್ ಅವರ ಅವಧಿಯಲ್ಲಿ ಭಾರತ ಮಿಶ್ರ ಫಲಿತಾಂಶಗಳನ್ನು ಕಂಡಿದೆ.
ಇವರ ಮಾರ್ಗದರ್ಶನದಲ್ಲಿ ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿ, 2025ರ ಏಷ್ಯಾ ಕಪ್ ಗೆದ್ದುಕೊಂಡಿದ್ದಲ್ಲದೆ, 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಮತ್ತೊಂದೆಡೆ ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ವೈಟ್-ಬಾಲ್ ಸರಣಿಯಲ್ಲಿ ಭಾರತ ಸೋಲನುಭವಿಸಿತು. ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಸೋತಿದ್ದು ಮತ್ತು ತಾಯ್ನಾಡಿನಲ್ಲಿ ನ್ಯೂಝಿಲೆಂಡ್ ಹಾಗೂ ಸೌತ್ ಆಫ್ರಿಕಾ ವಿರುದ್ಧ ವೈಟ್ವಾಶ್ ಮುಖಭಂಗ ಅನುಭವಿಸಿದ್ದು ಕೋಚಿಂಗ್ ಬಳಗದ ಮೇಲೆ ಒತ್ತಡ ತಂದಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ರಯಾನ್ ಟೆನ್ ಡೊಶ್ಚೆಟ್ ಅವರಿಗೆ ದಶಕಕ್ಕೂ ಮೀರಿದ ಸುದೀರ್ಘ ಸಂಬಂಧವಿದೆ. ಅದು ಆಟಗಾರನಾಗಿ ಹಾಗೂ ಕೋಚ್ ಆಗಿ ಎಂಬುದು ವಿಶೇಷ.
ಇದನ್ನೂ ಓದಿ: CWG 2026: ಐದನೇ ದಿನ ಭಾರತಕ್ಕೆ ಮತ್ತೆರಡು ಬೆಳ್ಳಿ ಪದಕ!
ಇದೀಗ ಐಪಿಎಲ್ 2027 ಕ್ಕೂ ಮುನ್ನ ರಯಾನ್ ಟೆನ್ ಡೊಶ್ಚೆಟ್ ಕೆಕೆಆರ್ ತಂಡದಲ್ಲಿ ತಮ್ಮ ಹಳೆಯ ಕೋಚಿಂಗ್ ಜೊತೆಗಾರರಾದ ಅಭಿಷೇಕ್ ನಾಯರ್ ಅವರೊಂದಿಗೆ ಮತ್ತೆ ಕೈಜೋಡಿಸಲಿರುವುದು ವಿಶೇಷ.