Sachin Tendulkar
Image Credit source: IPL/RCB
ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಟಿ20 ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ಬ್ಯಾಟರ್ಗಳ ಆಟವಾಗಿ ಬದಲಾಗಿದೆ. ಈ ಬದಲಾವಣೆಯೊಂದಿಗೆ ಬೌಲರ್ಗಳು ಕೇವಲ ರನ್ ನೀಡಲು ಸೀಮತವಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಈ ಅಸಮತೋಲನವನ್ನು ಸರಿಪಡಿಸಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೂರು ನಿಯಮಗಳ ಬದಲಾವಣೆಗೆ ಸಲಹೆ ನೀಡಿದ್ದಾರೆ. ಆ ನಿಯಮಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
- ಇಂಪ್ಯಾಕ್ಟ್ ಪ್ಲೇಯರ್ ನಿಯಮ: ಐಪಿಎಲ್ನಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತೆಗೆದು ಹಾಕಬೇಕು ಎಂದು ಸಚಿನ್ ಸಲಹೆ ನೀಡಿದ್ದಾರೆ. ಈ ನಿಯಮದಿಂದಾಗಿ ಎಲ್ಲಾ ತಂಡಗಳು 8 ಅಥವಾ 9ನೇ ಕ್ರಮಾಂಕದವರೆಗೆ ಬ್ಯಾಟರ್ಗಳನ್ನು ಕಣಕ್ಕಿಳಿಸುತ್ತಿದೆ. ಇದರಿಂದ ಆಲ್ರೌಂಡರ್ಗಳ ಪ್ರಾಮುಖ್ಯತೆ ಕುಸಿದಿದ್ದು, ಹೀಗಾಗಿ ಈ ನಿಯಮ ತೆಗೆದು ಹಾಕಿ 11 ಆಟಗಾರರ ತಂಡವನ್ನು ಕಣಕ್ಕಿಸುವುದು ಸೂಕ್ತ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
- 5 ಓವರ್ಗಳ ಅವಕಾಶ: ಟಿ20 ಕ್ರಿಕೆಟ್ನಲ್ಲಿ ಒಬ್ಬ ಬೌಲರ್ಗಳಿಗೆ 4 ಓವರ್ಗಳನ್ನು ಮಾತ್ರ ಬೌಲ್ ಮಾಡಲು ಅವಕಾಶವಿದೆ. ಆದರೆ ಈ ನಿಯಮವನ್ನು ಬದಲಿಸಿ ಒಬ್ಬ ಬೌಲರ್ಗೆ 5 ಓವರ್ಗಳನ್ನು ಎಸೆಯತಲು ಅವಕಾಶ ನೀಡಬೇಕೆಂದು ಸಚಿನ್ ಆಗ್ರಹಿಸಿದ್ದಾರೆ. ಇದರಿಂದ ಅತ್ಯುತ್ತಮವಾಗಿ ಬೌಲಿಂಗ್ ಮಾಡಿರುವ ಬೌಲರ್ ಆ ಪಂದ್ಯದಲ್ಲಿ ಹೆಚ್ಚಿನ ಪ್ರಭಾವ ಬೀರಲು ಸಹಕಾರಿಯಾಗಲಿದೆ. ಅಲ್ಲದೆ ಹೀಗೆ ಯಶಸ್ವಿಯಾದ ಬೌಲರ್ ಮೂಲಕ ಬ್ಯಾಟರ್ಗಳ ರನ್ ವೇಗಕ್ಕೆ ಕಡಿವಾಣ ಹಾಕಬಹುದು ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.
- 4 + 2 ಪವರ್ಪ್ಲೇ: ಟಿ20 ಕ್ರಿಕೆಟ್ನಲ್ಲಿ ಮೊದಲ 6 ಓವರ್ಗಳು ಪವರ್ಪ್ಲೇ ಆಗಿದೆ. ಈ ವೇಳೆ ಕೇವಲ ಇಬ್ಬರು ಫೀಲ್ಡರ್ಗಳಿಗೆ ಮಾತ್ರ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡಲು ಅವಕಾಶ ನೀಡಲಾಗುತ್ತಿದೆ. ಈ ನಿಯಮದಲ್ಲೂ ಬದಲಾವಣೆ ತರುವುದು ಅತ್ಯವಶ್ಯಕ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಪ್ರಸ್ತುತ ಇರುವ ನಿಯಮದ ಬದಲಿಗೆ 4 ಓವರ್ ಬ್ಯಾಟಿಂಗ್ ಪವರ್ಪ್ಲೇ, 2 ಓವರ್ ಬೌಲಿಂಗ್ ಪವರ್ಪ್ಲೇ ಮಾಡಬೇಕೆಂದು ಸಚಿನ್ ಸಲಹೆ ನೀಡಿದ್ದಾರೆ. ಅಂದರೆ ಬೌಲಿಂಗ್ ಪವರ್ಪ್ಲೇ ವೇಳೆ ಬೌಂಡರಿ ಲೈನ್ ಬಳಿ ಮೂವರು ಆಟಗಾರರಿಗೆ ಫೀಲ್ಡಿಂಗ್ ನಿಲ್ಲಲು ಅವಕಾಶ ನೀಡಬೇಕು. ಅಲ್ಲದೆ ಈ ಎರಡು ಓವರ್ ಪವರ್ಪ್ಲೇ ಅನ್ನು ಬೌಲಿಂಗ್ ತಂಡವು ಮೊದಲ 6 ಓವರ್ಗಳಲ್ಲಿ ಯಾವಾಗ ಬೇಕಾದರೂ ಬಳಸಲು ಅವಕಾಶ ಕಲ್ಪಿಸಬೇಕು. ಇದರಿಂದ ರನ್ ವೇಗಕ್ಕೆ ಕಡಿವಾಣ ಹಾಕುವುದರ ಜೊತೆಗೆ, ನಾಯಕರಿಗೆ ಹೊಸ ತಂತ್ರ ರೂಪಿಸಲು ಸಹಕಾರಿಯಾಗಲಿದೆ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಈ ನಿಯಮಗಳನ್ನು ಜಾರಿಗೊಳಿಸಿದರೆ, ಟಿ20 ಕ್ರಿಕೆಟ್ನಲ್ಲಿ ಸಮತೋಲನವನ್ನು ತರಬಹುದು. ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಸಮಾನ ಪೈಪೋಟಿ ಇದ್ದರೆ ಮಾತ್ರ ಕ್ರಿಕೆಟ್ ನೋಡಲು ಮಜಾ ಇರಲಿದೆ. ಹೀಗಾಗಿ ಟಿ20 ಹಾಗೂ ಐಪಿಎಲ್ನಲ್ಲಿ ಈ ನಿಯಮಗಳನ್ನು ಜಾರಿಗೊಳಿಸುವುದು ಉತ್ತಮ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಇದನ್ನೂ ಓದಿ: IPL 2026: ಆರೆಂಜ್ ಕ್ಯಾಪ್ ರೇಸ್ನಿಂದ ವಿರಾಟ್ ಕೊಹ್ಲಿ ಔಟ್!
ಬೌಲರ್ಗಳ ಹಿತರಕ್ಷಣೆಯನ್ನು ಮುಂದಿಟ್ಟು ಸಚಿನ್ ನೀಡಿರುವ ಈ ಸಲಹೆಗಳನ್ನು ಬಿಸಿಸಿಐ ಮತ್ತು ಐಸಿಸಿ ಮುಂಬರುವ ದಿನಗಳಲ್ಲಿ ಜಾರಿಗೆ ತರಲಿದೆಯಾ ಕಾದು ನೋಡಬೇಕಿದೆ.