
ಇದೇ ಜೂನ್ 6 ರಿಂದ ಅಫ್ಘಾನಿಸ್ತಾನ ಹಾಗೂ ಭಾರತದ ನಡುವೆ ಟೆಸ್ಟ್ ಹಾಗೂ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿ ಮುಗಿದ ಬಳಿಕ ಜೂನ್ 26 ರಿಂದ ಐರ್ಲೆಂಡ್ ವಿರುದ್ಧ ಮತ್ತು ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಬೇಕಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು (Team India) ಯಾರು ಮುನ್ನಡೆಸುತ್ತಾರೆ ಎಂಬುದು ಇದುವರೆಗೆ ಖಚಿತವಾಗಿಲ್ಲ. ಏಕೆಂದರೆ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದಿಂದ ಕೈಬಿಡುವ ಬಗ್ಗೆ ಬಿಸಿಸಿಐ ಚಿಂತಿಸುತ್ತಿದೆ. ಹೀಗಾಗಿ ಅವರ ಸ್ಥಾನದಲ್ಲಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಆದರೆ ಅದಕ್ಕೂ ಮುನ್ನ ನಾಯಕನ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ (Shreyas Iyer) ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ.
ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ಮುಂದಿನ ಟಿ20 ನಾಯಕರಾಗಲಿದ್ದು, ಈ ಬಗ್ಗೆ ಗುರುವಾರ ಅಧಿಕೃತ ಘೋಷಣೆ ಹೊರಬೀಳಬಹುದು ಎಂದು ವರದಿಯಾಗಿದೆ. ವರದಿಯ ಪ್ರಕಾರ, ಗುರುವಾರ ನಡೆಯಲಿರುವ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ನ ಆನ್ಲೈನ್ ಸಭೆಯಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಟಿ20 ನಾಯಕರನ್ನಾಗಿ ನೇಮಿಸುವ ಸಾಧತ್ಯೆಗಳಿವೆ.
ಇನ್ನೊಂದು ವರದಿಯ ಪ್ರಕಾರ, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್ ಅವರನ್ನು ಟಿ20 ನಾಯಕರನ್ನಾಗಿ ನೇಮಿಸುವ ಇರಾದೆಯಲ್ಲಿದ್ದರು. ಆದರೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಇದಕ್ಕೆ ಒಪ್ಪಲಿಲ್ಲ ಎಂಬ ವರದಿಗಳಿವೆ. ಪರಸ್ಪರ ಒಪ್ಪಿಗೆಯ ಮೇರೆಗೆ, ಶ್ರೇಯಸ್ ಅಯ್ಯರ್ ಅವರನ್ನು ಭಾರತದ ಮುಂದಿನ ಟಿ20 ನಾಯಕನನ್ನಾಗಿ ನೇಮಿಸಲಾಗುತ್ತಿದೆ. ಹೀಗಾಗಿ ಅಯ್ಯರ್ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಎರಡೂ ಪ್ರವಾಸಗಳಿಗೆ ತಂಡದ ಆಯ್ಕೆ ಸಭೆಗಳು ಜೂನ್ 6 ರ ಶನಿವಾರ ನಡೆಯಲಿದ್ದು, ಶ್ರೇಯಸ್ ಅಯ್ಯರ್ ಹಾಜರಿರುವ ನಿರೀಕ್ಷೆಯಿದೆ.
ಶ್ರೇಯಸ್ ಅಯ್ಯರ್ ಐಪಿಎಲ್ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದು, 2018 ರಿಂದ ಐಪಿಎಲ್ನ ಭಾಗವಾಗಿರುವ ಅಯ್ಯರ್ 101 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ನಾಯಕನಾಗಿ 55 ಪಂದ್ಯಗಳನ್ನು ಗೆದ್ದಿರುವ ಅಯ್ಯರ್ 54.45 ರ ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ಹಾಗೆಯೇ ಅಯ್ಯರ್ ನಾಯಕತ್ವದಲ್ಲಿ, ತಂಡವು 41 ಪಂದ್ಯಗಳನ್ನು ಸೋತಿದೆ, ಎರಡು ಪಂದ್ಯಗಳು ಟೈ ಆಗಿದ್ದರೆ, ಮೂರು ಪಂದ್ಯಗಳು ಡ್ರಾದೊಂದಿಗೆ ಕೊನೆಗೊಂಡಿವೆ. ಶ್ರೇಯಸ್ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಮುನ್ನಡೆಸಿದ್ದಾರೆ. ಹಾಗೆಯೇ ಅಯ್ಯರ್ ಅವರ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024 ಪ್ರಶಸ್ತಿಯನ್ನು ಗೆದ್ದಿತು. ಇದಾದ ಬಳಿಕ 2025 ರ ಐಪಿಎಲ್ನಲ್ಲಿ ಅಯ್ಯರ್ ಪಂಜಾಬ್ ತಂಡವನ್ನು ಫೈನಲ್ಗೇರಿಸಿದ್ದರು.
PBKS vs RCB: ಸತತ 5ನೇ ಪಂದ್ಯದಲ್ಲೂ ಫೇಲ್; ಆರ್ಸಿಬಿ ವಿರುದ್ಧ ಯಶಸ್ಸಿನ ಹುಡುಕಾಟದಲ್ಲಿ ಶ್ರೇಯಸ್
ಮಾಧ್ಯಮ ವರದಿಗಳ ಪ್ರಕಾರ, ತಿಲಕ್ ವರ್ಮಾಗೆ ಉಪನಾಯತ್ವ ನೀಡುವುದು ಕೂಡ ಖಚಿತವಾಗಿದೆ. ಹೀಗಾಗಿ ತಿಲಕ್ ವರ್ಮಾ, ಅಕ್ಷರ್ ಪಟೇಲ್ ಬದಲಿಗೆ ತಂಡದ ಉಪನಾಯಕರಾಗಲಿದ್ದಾರೆ.
Published On - 7:18 pm, Thu, 4 June 26