IND vs SL, Asia Cup: ತಮ್ಮ ಆಟಗಾರರನ್ನು ಬಿಟ್ಟುಕೊಡದ ಸೂರ್ಯಕುಮಾರ್: ಶ್ರೀಲಂಕಾ ವಿರುದ್ಧದ ಗೆಲುವಿನ ನಂತರ ಏನು ಹೇಳಿದ್ರು?
Suryakumar Yadav Post Match presentation, IND vs SL Asia Cup: 2025 ರ ಏಷ್ಯಾ ಕಪ್ನ ಕೊನೆಯ ಸೂಪರ್ ಫೋರ್ ಪಂದ್ಯವನ್ನು ಸೂಪರ್ ಓವರ್ ಮೂಲಕ ನಿರ್ಧರಿಸಲಾಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಲ ತಪ್ಪು ಮಾಡಿದ್ದರೂ ಸೂರ್ಯಕುಮಾರ್ ಅದನ್ನು ಬೊಟ್ಟು ಮಾಡದೆ ತಮ್ಮ ಆಟಗಾರರ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ.

ಬೆಂಗಳೂರು (ಸೆ. 27): 2025 ರ ಏಷ್ಯಾಕಪ್ ಫೈನಲ್ಗೆ ಮುನ್ನ, ಟೀಮ್ ಇಂಡಿಯಾ (Team India) ಶ್ರೀಲಂಕಾ ವಿರುದ್ಧದ ಕಠಿಣ ಸೂಪರ್ ಫೋರ್ ಪಂದ್ಯವನ್ನು ಎದುರಿಸಿತು. ಇದು ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಸೂಪರ್ ಓವರ್ ಆಗಿತ್ತು. ಎರಡೂ ತಂಡಗಳು ತಮ್ಮ ತಮ್ಮ ಇನ್ನಿಂಗ್ಸ್ಗಳಲ್ಲಿ 202 ರನ್ ಗಳಿಸಿ, ಸ್ಕೋರ್ಗಳು ಸಮಬಲ ಸಾಧಿಸಿದವು. ಆದಾಗ್ಯೂ, ಟೀಮ್ ಇಂಡಿಯಾ ಸೂಪರ್ ಓವರ್ ಗೆದ್ದು ಗೆಲುವಿನ ಓಟವನ್ನು ಮುಂದುವರಿಸಿತು. ಭಾರತ ತಂಡ ಪಂದ್ಯವನ್ನು ಗೆದ್ದಿತು, ಆದರೆ ಫೈನಲ್ಗೆ ಮೊದಲು ಹಲವಾರು ನ್ಯೂನತೆಗಳು ಬಹಿರಂಗಗೊಂಡವು. ಪಂದ್ಯದ ನಂತರ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಏನು ಹೇಳಿದರು ಎಂಬುದನ್ನು ನೋಡೋಣ.
ಶ್ರೀಲಂಕಾ ವಿರುದ್ಧದ ಸೂಪರ್ ಓವರ್ ಗೆಲುವಿನ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, “ಈ ಪಂದ್ಯವು ನಮಗೆ ಫೈನಲ್ನಂತೆ ಭಾಸವಾಯಿತು. ಮೊದಲ ಇನ್ನಿಂಗ್ಸ್ ನಂತರ, ಹುಡುಗರು ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಧೈರ್ಯವನ್ನು ತೋರಿಸಿದರು. ಕೊನೆಯ ಎಸೆತದವರೆಗೂ ನಾವು ಭರವಸೆಯನ್ನು ಬಿಟ್ಟುಕೊಡಲಿಲ್ಲ” ಎಂದು ಹೇಳಿದರು
ಅಭಿಷೇಕ್ ಮತ್ತು ಸಂಜು ಬಗ್ಗೆ ಸೂರ್ಯಕುಮಾರ್ ಹೇಳಿದ್ದೇನು?
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಮಾಡಿದರು. ಈ ಕುರಿತು ಮಾತನಾಡಿದ ಸೂರ್ಯ, “ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭವನ್ನು ಪಡೆಯುವುದು ಮತ್ತು ಸಂಜು ಮತ್ತು ತಿಲಕ್ ಅವರಂತಹ ಆಟಗಾರರು ಆ ಆವೇಗವನ್ನು ಮುಂದುವರಿಸುವುದನ್ನು ನೋಡುವುದು ಒಳ್ಳೆಯದು. ಮತ್ತು ಸಂಜು ಅವರಂತಹ ಆಟಗಾರ, ಯಾರು ಓಪನಿಂಗ್ ಮಾಡುವುದಿಲ್ಲವೋ, ಅವರು ಆ ಜವಾಬ್ದಾರಿಯನ್ನು ವಹಿಸಿಕೊಂಡರು. ತಿಲಕ್ ತಂಡಕ್ಕಾಗಿ ಒಳ್ಳೆಯ ಉದ್ದೇಶವನ್ನು ತೋರಿಸಿದ್ದಾರೆ. ಇದು ತಂಡಕ್ಕೆ ಒಳ್ಳೆಯ ವಿಷಯ” ಎಂದು ಅವರು ಹೇಳಿದರು.
Asia cup 2025 IND vs SL Highlights: ನಿಸ್ಸಾಂಕ ಶತಕ ವ್ಯರ್ಥ; ಸೂಪರ್ ಓವರ್ನಲ್ಲಿ ಗೆದ್ದ ಭಾರತ
ಅರ್ಷ್ದೀಪ್ ಸಿಂಗ್ ಬೌಲಿಂಗ್ ಬಗ್ಗೆ ಸೂರ್ಯಕುಮಾರ್ ಏನು ಹೇಳಿದರು?
ಅರ್ಷ್ದೀಪ್ ಸಿಂಗ್ ಬೌಲಿಂಗ್ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, “ಕಳೆದ 2-3 ವರ್ಷಗಳಲ್ಲಿ ಅರ್ಷ್ದೀಪ್ ನಮಗಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಯೋಜನೆಯನ್ನು ನಂಬಿ ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಲು ನಾನು ಅವರಿಗೆ ಹೇಳಿದೆ. ಅವರು ಹಲವು ಬಾರಿ ಅಂತಹ ಪರಿಸ್ಥಿತಿ ಎದುರಿಸಿದ್ದಾರೆ. ಭಾರತ ಮತ್ತು ಅವರ ಐಪಿಎಲ್ ತಂಡಕ್ಕಾಗಿ ಈರೀತಿಯ ಸಂದರ್ಭದಲ್ಲಿ ಅವರು ಬೌಲಿಂಗ್ ಮಾಡಿದ್ದಾರೆ. ಸೂಪರ್ ಓವರ್ ಬೌಲಿಂಗ್ ಮಾಡಲು ಅರ್ಷ್ದೀಪ್ ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ.” ಎಂದು ಹೊಗಳಿದ್ದಾರೆ.
ಆಟಗಾರರ ಗಾಯಗಳ ಬಗ್ಗೆ ಮಾತನಾಡಿದ ಅವರು, “ಇಂದಿನ ಪಂದ್ಯದಲ್ಲಿ ಅಭಿಷೇಕ್ ಮತ್ತು ಹಾರ್ದಿಕ್ ಪಾಂಡ್ಯ ಸೆಳೆತದಿಂದ ಬಳಲುತ್ತಿದ್ದರು. ನಾಳೆ (ಇಂದು) ನಮ್ಮ ಚೇತರಿಕೆಯ ದಿನವಾಗಿರುತ್ತದೆ ಮತ್ತು ನಾವು ಇಂದು ಬಂದ ರೀತಿಯಲ್ಲಿಯೇ ಫೈನಲ್ನಲ್ಲಿ ಕೂಡ ಮೈದಾನಕ್ಕೆ ಬರುತ್ತೇವೆ. ಪ್ರತಿಯೊಬ್ಬರೂ ಗುಂಪು ಹಂತದಿಂದ ಅವರು ಬಯಸಿದ್ದನ್ನು ಪಡೆದರು ಮತ್ತು ಫೈನಲ್ ತಲುಪಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ” ಎಂಬುದು ಸೂರ್ಯ ಮಾತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




