SMAT 2021: ಅಭಿನವ್ ಮನೋಹರ ಆಟ: ರೋಚಕ ಗೆಲುವಿನೊಂದಿಗೆ ಕ್ವಾರ್ಟರ್​ ಫೈನಲ್​ಗೆ ಕರ್ನಾಟಕ

TV9 Digital Desk

| Edited By: Zahir Yusuf

Updated on: Nov 16, 2021 | 4:38 PM

syed mushtaq ali trophy 2021: ಅಂತಿಮ ಹಂತದವರೆಗೂ ಏಕಾಂಗಿಯಾಗಿ ಹೋರಾಡಿದ ಅಭಿನವ್ ಮನೋಹರ್ 6 ಸಿಕ್ಸ್ ಹಾಗೂ 2 ಬೌಂಡರಿಯೊಂದಿಗೆ 49 ಎಸೆತಗಳಲ್ಲಿ 70 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

SMAT 2021: ಅಭಿನವ್ ಮನೋಹರ ಆಟ: ರೋಚಕ ಗೆಲುವಿನೊಂದಿಗೆ ಕ್ವಾರ್ಟರ್​ ಫೈನಲ್​ಗೆ ಕರ್ನಾಟಕ
ಸಾಂದರ್ಭಿಕ ಚಿತ್ರ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy 2021) ಟೂರ್ನಿಯಲ್ಲಿ 2ನೇ ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಕರ್ನಾಟಕ ತಂಡವು ಸೌರಾಷ್ಟ್ರ ವಿರುದ್ದ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮನೀಷ್ ಪಾಂಡೆ ಬಳಗವು ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್ ಆಯ್ದುಕೊಂಡಿತು. ಕರ್ನಾಟಕ ಬೌಲರುಗಳ ಉತ್ತಮ ಬೌಲಿಂಗ್ ಪರಿಣಾಮ ಸೌರಾಷ್ಟ್ರ 10 ರನ್​ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಶೆಲ್ಡನ್ ಜಾಕ್ಸನ್ 3 ಸಿಕ್ಸ್ ಹಾಗೂ 3 ಬೌಂಡರಿಯೊಂದಿಗೆ 43 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಇನ್ನು ಅಂತಿಮ ಹಂತದಲ್ಲಿ ಚಿರಾಗ್ (13) ಸಮರ್ಥ್ ವ್ಯಾಸ್ ಬಿರುಸಿನ 17 ರನ್​ ಕಲೆಹಾಕುವ ಮೂಲಕ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 145 ಕ್ಕೆ ತಂದು ನಿಲ್ಲಿಸಿದರು. ಕರ್ನಾಟಕ ಪರ ಕೌಶಿಕ್, ಕಾರ್ಯಪ್ಪ ಹಾಗೂ ವೈಶಾಖ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಕರ್ನಾಟಕ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್​ನಲ್ಲಿ ಬಿಎಆರ್ ಶರತ್ ಶೂನ್ಯಕ್ಕೆ ಔಟಾದರೆ, ಅದರ ಬೆನ್ನಲ್ಲೇ ಮನೀಷ್ ಪಾಂಡೆ (4) ಕೂಡ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಕರುಣ್ ನಾಯರ್ ಕೂಡ ಕೇವಲ 5 ರನ್​ಗಳಿಸಿ ನಿರ್ಗಮಿಸಿದರು. ಇದಾಗ್ಯೂ ಮತ್ತೊಂದೆಡೆ ಆರಂಭಿಕ ರೋಹನ್ ಕದಮ್ ಕ್ರೀಸ್ ಕಚ್ಚಿ ನಿಂತಿದ್ದರು.

5ನೇ ವಿಕೆಟ್​ಗೆ ಜೊತೆಗೂಡಿದ ಕದಮ್ ಹಾಗೂ ಅಭಿನವ್ ಮನೋಹರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 64 ರನ್​ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಹಂತದಲ್ಲಿ 33 ರನ್​ಗಳಿಸಿದ್ದ ರೋಹನ್ ಕದಮ್ ರನೌಟ್ ಆಗುವ ಮೂಲಕ ಹೊರನಡೆದರು. ಇದಾಗ್ಯೂ ಅಭಿನವ್ ಮನೋಹರ್ ಅಬ್ಬರ ಮುಂದುವರೆದಿತ್ತು. ಅನಿರುದ್ಧ್ ಜೋಷಿ ಜೊತೆಗೂಡಿದ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ 13 ರನ್​ಗಳಿಸಿ ಅನಿರುದ್ಧ್​ ವಿಕೆಟ್ ಒಪ್ಪಿಸಿದರೆ, ಅದರ ಬೆನ್ನಲ್ಲೇ ಜಗದೀಶ ಸುಚಿತ್ ಕೂಡ 5 ರನ್​ಗಳಿಸಿ ಜಯದೇವ್ ಉನಾದ್ಕಟ್​ ಎಸೆತಕ್ಕೆ ಬೌಲ್ಡ್ ಆದರು. ಆದರೆ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್​ನೊಂದಿಗೆ ಅರ್ಧಶತಕ ಪೂರೈಸಿದ ಅಭಿನವ್ ಮನೋಹರ್ ಅಂತಿಮ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು.

ಕೊನೆಯ 2 ಓವರ್​ಗಳಲ್ಲಿ ಕರ್ನಾಟಕ ತಂಡಕ್ಕೆ ಗೆಲ್ಲಲು 10 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ವಿಜಯಕುಮಾರ್ ವೈಶಾಖ್ (4) ವಿಕೆಟ್ ಒಪ್ಪಿಸಿ ಆತಂಕ ಮೂಡಿಸಿದರು. ಅದರಂತೆ ಅಂತಿಮ ಓವರ್​ನಲ್ಲಿ 6 ಎಸೆತಗಳಲ್ಲಿ ಕರ್ನಾಟಕಕ್ಕೆ 5 ರನ್​ಗಳು ಬೇಕಿತ್ತು. ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಅಭಿನವ್ ಮನೋಹರ್ 1 ರನ್​ ಕಲೆಹಾಕಿದರೆ, 2ನೇ ಎಸೆತದಲ್ಲಿ ಕೆಸಿ ಕಾರ್ಯಪ್ಪ (0) ವಿಕೆಟ್ ಒಪ್ಪಿಸಿದರು. ಅಂತಿಮ 2 ಎಸೆತಗಳಲ್ಲಿ 2 ರನ್ ಬೇಕಿತ್ತು. ಈ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಅಭಿನವ್ ಮನೋಹರ್ ಕರ್ನಾಟಕ ತಂಡಕ್ಕೆ 2 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು.

ಅಂತಿಮ ಹಂತದವರೆಗೂ ಏಕಾಂಗಿಯಾಗಿ ಹೋರಾಡಿದ ಅಭಿನವ್ ಮನೋಹರ್ 6 ಸಿಕ್ಸ್ ಹಾಗೂ 2 ಬೌಂಡರಿಯೊಂದಿಗೆ 49 ಎಸೆತಗಳಲ್ಲಿ 70 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಸೌರಾಷ್ಟ್ರ ಪರ ನಾಯಕ ಜಯದೇವ್ ಉನಾದ್ಕಟ್ 4 ಓವರ್​ಗಳಲ್ಲಿ 22 ರನ್​ ನೀಡಿ 4 ವಿಕೆಟ್ ಉರುಳಿಸಿ ಮಿಂಚಿದರು. ಈ ಗೆಲುವಿನೊಂದಿಗೆ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಕ್ವಾರ್ಟರ್​ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್​: ಚಾಂಪಿಯನ್​ ಪಟ್ಟಕ್ಕೇರಿದ 6 ತಂಡಗಳು

ಇದನ್ನೂ ಓದಿ:  Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!

(syed mushtaq ali trophy 2021 karnataka enter to quarter final)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada