ಮುಂಬೈ ಟಿ20 ಲೀಗ್ ಫೈನಲ್​ನಲ್ಲಿ ಆಟಗಾರರ ನಡುವೆ ನೂಕಾಟ, ತಳ್ಳಾಟ, ಕಿತ್ತಾಟ!

ARCS Andheri vs MSC Maratha Royals, Final: ಮುಂಬೈ ಟಿ20 ಲೀಗ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮರಾಠ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 154 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಎಆರ್‌ಸಿಎಸ್ ಅಂಧೇರಿ ತಂಡ 20 ಓವರ್​ಗಳಲ್ಲಿ 146 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಮರಾಠ ರಾಯಲ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಮುಂಬೈ ಟಿ20 ಲೀಗ್ ಫೈನಲ್​ನಲ್ಲಿ ಆಟಗಾರರ ನಡುವೆ ನೂಕಾಟ, ತಳ್ಳಾಟ, ಕಿತ್ತಾಟ!
T20 Mumbai 2026
Image Credit source: T20 Mumbai

Updated on: Jun 14, 2026 | 12:09 PM

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ಮುಂಬೈ ಲೀಗ್ 2026ರ ಫೈನಲ್ ಪಂದ್ಯದಲ್ಲಿ ಎಆರ್‌ಸಿಎಸ್ ಅಂಧೇರಿ (ARCS Andheri) ತಂಡವನ್ನು 8 ರನ್‌ಗಳಿಂದ ಸೋಲಿಸಿ ಎಂಎಸ್‌ಸಿ ಮರಾಠ ರಾಯಲ್ಸ್ (MSC Maratha Royals) ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಜೂನ್ 13, 2026 ರಂದು ನಡೆದ ಈ ರೋಚಕ ಪಂದ್ಯವು ಆಟಗಾರರ ನಡುವಿನ ಜಗಳ, ಹಾಗೂ ಮರಾಠ ರಾಯಲ್ಸ್‌ನ ಅದ್ಭುತ ಆಟಕ್ಕೆ ಸಾಕ್ಷಿಯಾಯಿತು.

ಕಿತ್ತಾಡಿಕೊಂಡ ಆಟಗಾರರು:

ಎಆರ್‌ಸಿಎಸ್ ಅಂಧೇರಿ ತಂಡದ ರನ್ ಚೇಸಿಂಗ್‌ನ 19ನೇ ಓವರ್‌ನಲ್ಲಿ ಮೈದಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಅಂಧೇರಿ ತಂಡದ ಬ್ಯಾಟರ್ ಗೌರವ್ ಜಾಧವ್ ಅವರು ಮರಾಠ ರಾಯಲ್ಸ್ ಬೌಲರ್ ಇರ್ಫಾನ್ ಉಮೈರ್ ಅವರಿಗೆ ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ, ಮುಂದಿನ ಎಸೆತದಲ್ಲೇ ಉಮೈರ್ ಅವರು ಗೌರವ್ ಅವರನ್ನು ಎಲ್‌ಬಿಡಬ್ಲ್ಯೂ ಮಾಡಿ ಔಟ್ ಮಾಡಿದರು.

ವಿಕೆಟ್ ಕಳೆದುಕೊಂಡು ನಿರಾಸೆಯಿಂದ ಹೊರನಡೆಯುತ್ತಿದ್ದ ಗೌರವ್ ಹಾಗೂ ಮರಾಠ ರಾಯಲ್ಸ್ ವೇಗಿ ತುಷಾರ್ ದೇಶಪಾಂಡೆ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ಗಲಾಟೆ ಅಷ್ಟಕ್ಕೇ ನಿಲ್ಲದೆ ಡಗೌಟ್ ವರೆಗೂ ತಲುಪಿತು.

ಮರಾಠ ರಾಯಲ್ಸ್ ಆಟಗಾರರೊಬ್ಬರು ಅಂಧೇರಿ ಡಗೌಟ್ ಬಳಿ ತೆರಳಿದಾಗ, ಅಂಧೇರಿ ತಂಡದ ನಾಯಕ ಶಿವಂ ದುಬೆ ಸೇರಿದಂತೆ ಉಭಯ ತಂಡಗಳ ಆಟಗಾರರ ನಡುವೆ ವಾಗ್ವಾದ ನಡೆದು, ನೂಕಾಟ ತಳ್ಳಾಟ ನಡೆಯಿತು,

ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಆನ್-ಫೀಲ್ಡ್ ಅಂಪೈರ್‌ಗಳು ಮತ್ತು ಉಭಯ ತಂಡಗಳ ಸಹಾಯಕ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಆಟಗಾರರನ್ನು ಸಮಾಧಾನಪಡಿಸಿದರು.

ಮರಾಠಾ ರಾಯಲ್ಸ್ ಚಾಂಪಿಯನ್ಸ್:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮರಾಠ ರಾಯಲ್ಸ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ, ಚಿನ್ಮಯ್ ಸುತಾರ್ (61 ರನ್, 52 ಎಸೆತ) ಮತ್ತು ನಾಯಕ ಸಿದ್ದೇಶ್ ಲಾಡ್ (33 ರನ್) ಅವರ ಜವಾಬ್ದಾರಿಯುತ ಆಟದಿಂದಾಗಿ ತಂಡ 20 ಓವರ್‌ಗಳಲ್ಲಿ 154/5 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

155 ರನ್‌ಗಳ ಗುರಿ ಬೆನ್ನಟ್ಟಿದ ಎಆರ್‌ಸಿಎಸ್ ಅಂಧೇರಿ ತಂಡಕ್ಕೆ ದಿವ್ಯಾಂಶ್ ಸಕ್ಸೇನಾ (51 ರನ್) ಮತ್ತು ಶಿವಂ ದುಬೆ ಆಸರೆಯಾಗಿದ್ದರು. ಆದರೆ ತುಷಾರ್ ದೇಶಪಾಂಡೆ ಅವರು ದುಬೆ ಅವರ ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: 1921ರ ದಂಗೆ, ಬಿಟಿಷರ ಬಾಲ್ ಬಾಯ್ಸ್, ಕೇರಳಂ ಫುಟ್​​ಬಾಲ್ ಕ್ರೇಝ್!

ಅಂತಿಮ ಓವರ್‌ನಲ್ಲಿ ರೋಹನ್ ರಾಜೆ ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ ಅಂಧೇರಿ ತಂಡವನ್ನು 146/8 ರನ್‌ಗಳಿಗೆ ನಿಯಂತ್ರಿಸಿ, ಮರಾಠ ರಾಯಲ್ಸ್ ತಂಡಕ್ಕೆ 8 ರನ್‌ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಮರಾಠ ರಾಯಲ್ಸ್ ತಂಡವು ಮುಂಬೈ ಟಿ20 ಲೀಗ್​ನಲ್ಲಿ ಎರಡನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us