ಟಿ20 ವಿಶ್ವಕಪ್ನೊಂದಿಗೆ ಟೀಮ್ ಇಂಡಿಯಾ (Team India) ತಾಯ್ನಾಡಿಗೆ ಮರಳಿದೆ. ಬಾರ್ಬಡೋಸ್ನಿಂದ ಗುರುವಾರ ಮುಂಜಾನೆ ದೆಹಲಿಗೆ ಬಂದಿಳಿದಿರುವ ಭಾರತ ತಂಡವು ಇಂದು ಮುಂಬೈನಲ್ಲೆ ವಿಜಯಯಾತ್ರೆ ನಡೆಸಲಿದೆ. ಓಪನ್ ಬಸ್ನಲ್ಲಿ ನಡೆಯಲಿರುವ ಈ ರೋಡ್ ಶೋ ಮುಂಬೈನ ನಾರಿಮನ್ ಪಾಯಿಂಟ್ನಲ್ಲಿರುವ ಏರ್ ಇಂಡಿಯಾ ಕಟ್ಟಡದಿಂದ ಪ್ರಾರಂಭವಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಇನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಆಟಗಾರರು ವಿಜಯೋತ್ಸವ ಆಚರಿಸಲಿದ್ದು, ಈ ವೇಳೆ ಬಿಸಿಸಿಐ ಭಾರತ ತಂಡಕ್ಕೆ 125 ಕೋಟಿ ರೂ.ಗಳ ಬಹುಮಾನ ಮೊತ್ತವನ್ನು ವಿತರಿಸಲಿದೆ ಎಂದು ವರದಿಯಾಗಿದೆ.
ಭಾರತ ತಂಡವು ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ 125 ಕೋಟಿ ರೂ. ಬಹುಮಾನ ಮೊತ್ತ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಸನ್ಮಾನ ಕಾರ್ಯಕ್ರಮದಲ್ಲಿ ಈ ಮೊತ್ತವನ್ನು ವಿತರಿಸಲಿದ್ದಾರೆ.
ಟೀಮ್ ಇಂಡಿಯಾದ ವಿಜಯಯಾತ್ರೆಯು ಸಂಜೆ 5 ಗಂಟೆಯಿಂದ ಶುರುವಾಗಲಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮನವಿ ಮಾಡಿದ್ದಾರೆ.
ಈ ವಿಜಯಯಾತ್ರೆಯನ್ನು ನೇರ ಪ್ರಸಾರ ಮಾಡುವುದಾಗಿ ಸ್ಟಾರ್ ಸ್ಪೋರ್ಟ್ಸ್ ಘೋಷಿಸಿದೆ. ಹಾಗೆಯೇ ನೆಟ್ವರ್ಕ್ 18ನ ಸ್ಪೋರ್ಟ್ಸ್ 18ನಲ್ಲೂ ಈ ವಿಜಯೋತ್ಸವದ ಲೈವ್ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲೂ ಈ ವಿಜಯೋತ್ಸವದ ನೇರ ಪ್ರಸಾರ ಇರಲಿದೆ.
ಭಾರತ ತಂಡವು ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಗೆದ್ದಿದ್ದು 2013 ರಲ್ಲಿ. ಇದಾದ ಬಳಿಕ ಹಲವು ಟೂರ್ನಿಗಳಲ್ಲಿ ಫೈನಲ್ ಆಡಿದರೂ, ಟೀಮ್ ಇಂಡಿಯಾ ಪಾಲಿಗೆ ಪ್ರಶಸ್ತಿ ಮರೀಚಿಕೆಯಾಗಿತ್ತು. ಅದರಲ್ಲೂ 2023 ರ ಏಕದಿನ ವಿಶ್ವಕಪ್ನ ಫೈನಲ್ಗೆ ತಲುಪಿದ್ದ ಭಾರತ ತಂಡವು ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು.
ಆದರೆ ಈ ಬಾರಿ ಪ್ರಶಸ್ತಿ ಗೆಲ್ಲಬೇಕೆಂದು ಪಣತೊಟ್ಟಿದ್ದ ಟೀಮ್ ಇಂಡಿಯಾ ಆರಂಭದಿಂದಲೇ ಭರ್ಜರಿ ಪ್ರದರ್ಶನ ನಿಡಿದ್ದರು. ಅಲ್ಲದೆ ಸೋಲಿಲ್ಲದ ಸರದಾರನಾಗಿ ಫೈನಲ್ಗೆ ಪ್ರವೇಶಿಸಿತ್ತು. ಅಂತಿಮ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 7 ರನ್ಗಳಿಂದ ಮಣಿಸಿದ ಟೀಮ್ ಇಂಡಿಯಾ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಚಾಂಪಿಯನ್ಸ್ ಜೆರ್ಸಿ ಅನಾವರಣ
ಅಲ್ಲದೆ ಇದು ಟೀಮ್ ಇಂಡಿಯಾದ 2ನೇ ಟಿ20 ವಿಶ್ವಕಪ್ ಎಂಬುದು ವಿಶೇಷ. ಅಂದರೆ 2007 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾ ಇದೀಗ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದೆ.
Published On - 1:03 pm, Thu, 4 July 24