ಹಾವು… ಹಾವು… ಕಚ್ಚುತ್ತೆ: ಬಾಂಗ್ಲಾ ತಂಡವನ್ನು ಟ್ರೋಲ್ ಮಾಡಿದ ಕೊಹ್ಲಿ

| Updated By: ಝಾಹಿರ್ ಯೂಸುಫ್

Updated on: Sep 22, 2024 | 10:25 AM

India vs Bangladesh 1st Test: ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 376 ರನ್ ಕಲೆಹಾಕಿದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ 287 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಬಾಂಗ್ಲಾದೇಶ್ ತಂಡಕ್ಕೆ ದ್ವಿತೀಯ ಇನಿಂಗ್ಸ್​ನಲ್ಲಿ 515 ರನ್​ಗಳ ಗುರಿ ನೀಡಿದೆ.

ಹಾವು... ಹಾವು... ಕಚ್ಚುತ್ತೆ: ಬಾಂಗ್ಲಾ ತಂಡವನ್ನು ಟ್ರೋಲ್ ಮಾಡಿದ ಕೊಹ್ಲಿ
Virat Kohli
Follow us on

ಚೆನ್ನೈನಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಭಾರತ ತಂಡವು 376 ರನ್ ಪೇರಿಸಿತ್ತು. ಅತ್ತ ಪ್ರಥಮ ಇನಿಂಗ್ಸ್​ನಲ್ಲಿ ಕೇವಲ 149 ರನ್​ಗಳಿಗೆ ಬಾಂಗ್ಲಾ ಪಡೆ ಆಲೌಟ್ ಆಗಿದೆ. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 287 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ. ಇದೀಗ ದ್ವಿತೀಯ ಇನಿಂಗ್ಸ್​ನಲ್ಲಿ 515 ರನ್​ಗಳ ಗುರಿ ಪಡೆದಿರುವ ಬಾಂಗ್ಲಾದೇಶ್ ತಂಡವು 4 ವಿಕೆಟ್ ಕಳೆದುಕೊಂಡಿದೆ.

ಇತ್ತ ಈಗಾಗಲೇ ಸೋಲಿನ ಸುಳಿಗೆ ಸಿಲುಕಿರುವ ಬಾಂಗ್ಲಾದೇಶ್ ತಂಡವನ್ನು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲೇ ಟ್ರೋಲ್ ಮಾಡಿದ್ದಾರೆ. ಸಾಮಾನ್ಯವಾಗಿ ಬಾಂಗ್ಲಾ ಪಡೆ ಗೆದ್ದ ಬಳಿಕ ನಾಗಿಣಿ ನೃತ್ಯದೊಂದಿಗೆ ಸಂಭ್ರಮಿಸುವುದು ವಾಡಿಕೆ. ಆದರೆ ಅದು ಭಾರತದಲ್ಲಿ ಈವರೆಗೆ ಸಾಧ್ಯವಾಗಿಲ್ಲ.

ಏಕೆಂದರೆ ತವರಿನಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ್ ತಂಡ ಒಮ್ಮೆಯೂ ಗೆದ್ದಿಲ್ಲ. ಇದೀಗ ಮೊದಲ ಟೆಸ್ಟ್ ಪಂದ್ಯದಲ್ಲೂ ಬಾಂಗ್ಲಾದೇಶ್ ತಂಡಕ್ಕೆ ಸೋಲು ಬಹುತೇಕ ಖಚಿತ. ಹೀಗಾಗಿಯೇ ವಿರಾಟ್ ಕೊಹ್ಲಿ ಹಾವು ಕಚ್ಚುತ್ತೆ ಎಂದು ಮೈದಾನದಲ್ಲೇ ಬಾಂಗ್ಲಾದೇಶ್ ತಂಡದ ಕಾಲೆಳೆದಿದ್ದಾರೆ.

ಪಂದ್ಯದ ನಡುವೆ ಪ್ರೇಕ್ಷಕರತ್ತ ಮುಖ ಮಾಡಿದ ವಿರಾಟ್ ಕೊಹ್ಲಿ ನಾಗಿಣಿ ಸಿಗ್ನಲ್ ಮಾಡಿ, ಹಾವು ಕಚ್ಚುತ್ತೆ ಎಂದು ಟ್ರೋಲ್ ಮಾಡಿದ್ದಾರೆ. ಇದೀಗ ಕೊಹ್ಲಿಯ ಈ ಸಿಗ್ನಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ವಿರಾಟ್ ಕೊಹ್ಲಿ ವಿಡಿಯೋ:

ಗೆಲುವಿನ ಹಾದಿಯಲ್ಲಿ ಟೀಮ್ ಇಂಡಿಯಾ:

ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 287 ರನ್​ ಕಲೆಹಾಕಿ ಡಿಕ್ಲೇರ್ ಘೋಷಿಸಿದೆ. ಅತ್ತ ಮೊದಲ ಇನಿಂಗ್ಸ್​ನಲ್ಲಿ 227 ರನ್​ಗಳ ಹಿನ್ನಡೆ ಅನುಭವಿಸಿದ್ದ ಬಾಂಗ್ಲಾದೇಶ್ ತಂಡವು ಇದೀಗ ದ್ವಿತೀಯ ಇನಿಂಗ್ಸ್​ನಲ್ಲಿ 515 ರನ್​ಗಳ ಗುರಿ ಪಡೆದುಕೊಂಡಿದೆ. ಅದರಂತೆ ನಾಲ್ಕನೇ ದಿನದಾಟದಲ್ಲಿ ಈ ಬೃಹತ್ ಮೊತ್ತವನ್ನು ಬೆನ್ನತ್ತಿರುವ ಬಾಂಗ್ಲಾ ಪಡೆಯು 48 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿದೆ.

ಬಾಂಗ್ಲಾದೇಶ್ ತಂಡಕ್ಕೆ ಗೆಲ್ಲಲು ಇನ್ನೂ 328 ರನ್​ಗಳ ಅವಶ್ಯಕತೆಯಿದ್ದು, ಇತ್ತ ಟೀಮ್ ಇಂಡಿಯಾ 6 ವಿಕೆಟ್ ಉರುಳಿಸಿದರೆ ಗೆಲುವು ತನ್ನದಾಗಿಸಿಕೊಳ್ಳಬಹುದು. ಹೀಗಾಗಿ ನಾಲ್ಕನೇ ದಿನದಾಟದೊಂದಿಗೆ ಪಂದ್ಯ ಮುಗಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.