ಅರ್ಧಶತಕ ಪೂರೈಸುವ ಮುನ್ನವೇ ಯುವ ಕ್ರಿಕೆಟಿಗನ ಬದುಕಿನ ಇನ್ನಿಂಗ್ಸ್ ಮುಗಿಸಿದ ಹೃದಯಾಘಾತ; ವಿಡಿಯೋ

Tragic Cricket Match: ಪಂಜಾಬ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಯುವ ಕ್ರಿಕೆಟ್ ಆಟಗಾರನೊಬ್ಬ ಬಲಿಷ್ಠ ಸಿಕ್ಸರ್ ಬಾರಿಸಿದ ನಂತರ ಕುಸಿದು ಬಿದ್ದು ಮೃತಪಟ್ಟಿದ್ದಾನೆ. 49 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಹರ್ಜೀತ್ ಸಿಂಗ್ ಎಂಬ ಆಟಗಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ರೀತಿಯ ಘಟನೆ ಮುಂಬೈನಲ್ಲೂ ಕಳೆದ ವರ್ಷ ನಡೆದಿತ್ತು.

ಅರ್ಧಶತಕ ಪೂರೈಸುವ ಮುನ್ನವೇ ಯುವ ಕ್ರಿಕೆಟಿಗನ ಬದುಕಿನ ಇನ್ನಿಂಗ್ಸ್ ಮುಗಿಸಿದ ಹೃದಯಾಘಾತ; ವಿಡಿಯೋ
Cricketer Death

Updated on: Jun 29, 2025 | 4:31 PM

ಕ್ರಿಕೆಟ್ ಆಡುವ ವೇಳೆ ಯುವಕನೊಬ್ಬ ಕ್ರಿಕೆಟ್ (Cricket) ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಜೂನ್ 29ರ ಭಾನುವಾರದಂದು ಪಂಜಾಬ್​ನಲ್ಲಿ ನಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಯುವಕನೊಬ್ಬ ಬಲವಾದ ಸಿಕ್ಸರ್ ಬಾರಿಸಿದ್ದಾನೆ. ಇದಾದ ನಂತರ ನಾನ್ ಸ್ಟ್ರೈಕ್​ ಆಟಗಾರನ ಬಳಿಗೆ ಬಂದಿದ್ದ ಆತ ಕ್ರೀಸ್‌ನಲ್ಲೇ ಕುಸಿದು ಬಿದ್ದಿದ್ದಾನೆ. ಆ ಕ್ಷಣದಲ್ಲಿ ಏನಾಗುತ್ತಿದೆ ಎಂಬುದು ಸಹ ಆಟಗಾರನಿಗೂ ಅರಿಯದಾಗಿದೆ. ಕೂಡಲೇ ಆತ ಕುಸಿದು ಬಿದ್ದಿದ್ದ ಆಟಗಾರನನ್ನು ಮೇಲೆತ್ತಲ್ಲು ಪ್ರಯತ್ನಿಸಿದ್ದಾನೆ. ಇತ್ತ ಮೈದಾನದಲ್ಲಿದ್ದ ಇತರ ಆಟಗಾರರು ಕೂಡ ಆತನ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಹೃದಯಾಘಾತದಿಂದ (Heart attack) ಆ ಯುವ ಕ್ರಿಕೆಟಿಗನ ಪ್ರಾಣ ಪಕ್ಷಿ ಹಾರಿಹೋಗಿದೆ.

ಇಡೀ ಘಟನೆಯ ವಿವರ ಇಲ್ಲಿದೆ

ಜೂನ್ 29 ರ ಭಾನುವಾರ ಬೆಳಿಗ್ಗೆ, ಪಂಜಾಬ್​ನ ಗುರುಹರ್ ಸಹಾಯ್ ಪ್ರದೇಶದ ಡಿಎವಿ ಶಾಲೆಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ಸಮಯದಲ್ಲಿ, ಹರ್ಜೀತ್ ಸಿಂಗ್ ಬ್ಯಾಟಿಂಗ್ ಮಾಡುತ್ತಿದ್ದರು. ಬೌಲರ್ ಎಸೆದ ವೇಗದ ಚೆಂಡನ್ನು ಬೌಂಡರಿಯಿಂದಾಚೆಗೆ ಬೃಹತ್ ಸಿಕ್ಸರ್ ಬಾರಿಸಿದರು. ಇದರ ನಂತರ, ನಾನ್ ಸ್ಟ್ರೈಕರ್ ಬಳಿಗೆ ಹೆಜ್ಜೆ ಹಾಕಿದ್ದಾನೆ. ಆದರೆ ಆ ವೇಳೆಗೆ ಆತನಿಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆತ ಕ್ರೀಸ್‌ನಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ನಾನ್-ಸ್ಟ್ರೈಕ್‌ನಲ್ಲಿ ನಿಂತಿದ್ದ ಸಹ ಆಟಗಾರ ಆತನನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ.

ಇದಾದ ನಂತರ, ಮೈದಾನದಲ್ಲಿದ್ದ ಇತರ ಆಟಗಾರರು ಕೂಡ ಹರ್ಜೀತ್ ಬಳಿಗೆ ಬಂದು ಅವರನ್ನು ಮೇಲೆತ್ತಲು ಪ್ರಯತ್ನಿಸಿದ್ದಾರೆ, ಆದರೆ ಆ ಹೊತ್ತಿಗೆ ಹರ್ಜೀತ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ಕೆಲವು ಆಟಗಾರರು ಅವನಿಗೆ ಸಿಪಿಆರ್ ನೀಡಲು ಪ್ರಯತ್ನಿಸಿದರಾದರೂ ಅವನನ್ನು ಬದುಕಿಸಲು ಸಾಧ್ಯವಾಗಿಲ್ಲ. ಇದೀಗ ಈ ಹೃದಯವಿದ್ರಾವಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೃದಯಾಘಾತಕ್ಕೂ ಮುನ್ನ ಹರ್ಜೀತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು 49 ರನ್ ಕಲೆಹಾಕಿದ್ದರು. ಅದರೆ ಅವರ ಅರ್ಧಶತಕವನ್ನು ಪೂರೈಸುವ ಮುನ್ನವೇ ಹೃದಯಾಘಾತವೆಂಬ ಮಾರಿ ಅವರ ಇಹಲೋಕ ಯಾತ್ರಗೆ ಫುಲ್​ಸ್ಟಾಪ್ ಹಾಕಿದೆ.

ಮುಂಬೈನಲ್ಲೂ ಇದೇ ರೀತಿಯ ಘಟನೆ

ಕಳೆದ ವರ್ಷ ಜೂನ್‌ನಲ್ಲಿ ಮುಂಬೈನಲ್ಲಿ ನಡೆದ ಪಂದ್ಯವೊಂದರಲ್ಲಿ ಸಿಕ್ಸರ್ ಬಾರಿಸಿದ ನಂತರ ಬ್ಯಾಟ್ಸ್‌ಮನ್ ಹೃದಯಾಘಾತದಿಂದ ಸಾವನ್ನಪ್ಪಿದರು. ಮುಂಬೈನ ಕಾಶ್ಮೀರ ಪ್ರದೇಶದಲ್ಲಿ ಬಾಕ್ಸ್ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ, ಒಬ್ಬ ಯುವಕ ಬೃಹತ್ ಸಿಕ್ಸರ್ ಬಾರಿಸಿದ. ಇದರ ನಂತರ, ಆತ ತಕ್ಷಣವೇ ನೆಲಕ್ಕೆ ಕುಸಿದು ಬಿದ್ದಿದ್ದ. ಅಲ್ಲಿ ಏನಾಗುತ್ತಿದೆ ಎಂದು ಇತರ ಆಟಗಾರರರು ಅರ್ಥಮಾಡಿಕೊಳ್ಳುವ ಹೊತ್ತಿಗೆ, ಅವನ ಪ್ರಾಣ ಪಕ್ಷಿಯೂ ಹಾರಿಹೋಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Sun, 29 June 25