India vs England: ಕೊನೆಯ ಮೂರು ಟಿ20 ಮ್ಯಾಚ್​ಗಳಿಗೆ ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧ

India vs England: ಗುಜರಾತ್ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ ಕ್ರಿಕೆಟ್ ಸಂಸ್ಥೆಯು (Gujarat Cricket Association - GCA) ಈ ನಿರ್ಧಾರಕ್ಕೆ ಬಂದಿದೆ ಎಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

India vs England: ಕೊನೆಯ ಮೂರು ಟಿ20 ಮ್ಯಾಚ್​ಗಳಿಗೆ ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧ
ಟೀಮ್ ಇಂಡಿಯಾ

Updated on: Mar 15, 2021 | 11:08 PM

ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್​ ನಡುವಣ ಕೊನೆಯ ಮೂರು ಟಿ20ಐಎಸ್ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಗುಜರಾತ್ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ ಕ್ರಿಕೆಟ್ ಸಂಸ್ಥೆಯು (Gujarat Cricket Association – GCA) ಈ ನಿರ್ಧಾರಕ್ಕೆ ಬಂದಿದೆ ಎಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಭಾರತ-ಇಂಗ್ಲೆಂಡ್ ನಡುವಣ ಬಾಕಿ ಟಿ20 ಅಂತರರಾಷ್ಟ್ರೀಯ ಪಂದ್ಯಗಳು ಪ್ರೇಕ್ಷಕರ ಅನುಪಸ್ಥಿತಿಯಲ್ಲಿಯೇ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಟಿಕೆಟ್ ಖರೀದಿಸಿದ್ದವರಿಗೆ ಹಣವನ್ನು ಮರಳಿಸಲಾಗುವುದು’ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆ ಹೇಳಿದೆ.

ಉತ್ತಮ ಪ್ರದರ್ಶನದ ನಿರೀಕ್ಷೆ
ಪ್ರವಾಸಿ ಇಂಗ್ಲೆಂಡ್ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಅಧಿಕಾರಯುತ ಜಯ ಸಾಧಿಸಿ ಆತ್ಮವಿಶ್ವಾಸದ ಮೂಟೆಯನ್ನು ಹೆಗಲಿಗೇರಿಸಿಕೊಂಡಿರುವ ಟೀಮ್ ಇಂಡಿಯಾ ನಾಳೆಯೂ ಅದೇ ಮೈದಾನದಲ್ಲಿ ನಡೆಯುವ ಮೂರನೇ ಪಂದ್ಯದಲ್ಲೂ ನಿರ್ಭೀತಿಯ ಆಟ ಮುಂದುವರಿಸುವುದು ಶತಃಸಿದ್ಧ. ಮೊದಲ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ 7 ವಿಕೆಟ್​ಗಳ ಸೋಲುಂಡ ಅತಿಥೇಯರು ರವಿವಾರ ನಡೆದ 2ನೇ ಪಂದ್ಯದಲ್ಲಿ ಅದ್ಭುತ ಆಲ್​ರೌಂಡ್ ಆಟದ ಪ್ರದರ್ಶನ ನೀಡಿ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದರು. ಪದಾರ್ಪಣೆಯ ಪಂದ್ಯದಲ್ಲೇ 32 ಎಸೆತಗಳಲ್ಲಿ 56 ರನ್ ಬಾರಿಸಿದ ಪಂದ್ಯದ ವ್ಯಕ್ತಿ ಇಶಾನ್ ಕಿಷನ್ ಕ್ರಿಕೆಟ್​ ಪ್ರೇಮಿಗಳ ಕಣ್ಮಣಿಯಾದರು. ಬ್ಯಾಟಿಂಗ್​ನೆಡೆಗೆ ಅವರು ತೋರಿದ ಧೋರಣೆ ಪ್ರೇಕ್ಷಕರ ಮೈನವಿರೇಳಿಸಿದ್ದು ಸುಳ್ಳಲ್ಲ. ಮೊದಲ ಓವರ್​ನಲ್ಲಿ ಜೊತೆಗಾರನನ್ನು (ಕೆ.ಎಲ್.ರಾಹುಲ್) ಕಳೆದುಕೊಂಡರೂ ಧೃತಿಗೆಡದ ಕೇವಲ 22ರ ಪ್ರಾಯದ ಕಿಷನ್ ತಾನೆದುರಿಸಿದ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡಲು ಆರಂಭಿಸಿದರು.

ನಾಯಕ ವಿರಾಟ್​ ಕೊಹ್ಲಿ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಮಾಸ್ಟರ್ ಚೇಸರ್ ಎಂದು ಕರೆಸಿಕೊಳ್ಳುತ್ತಾರೆ. ರವಿವಾರದಂದು ತನ್ನ ಖ್ಯಾತಿಗೆ ತಕ್ಕ ಆಡವಾಡಿದ ಅವರು ಭಾರತ ಗುರಿಮುಟ್ಟುವವರೆಗೆ ಕ್ರಿಸ್​ನಲ್ಲಿ ಉಳಿದಿದ್ದು ಅವರ ಮತ್ತು ಟೀಮಿನ ಸ್ಥೈರ್ಯವನ್ನು ಹೆಚ್ಚಿಸಿದೆ. ಅವರ ಫಾರ್ಮ್ ಬಗ್ಗೆ ಸಂಶಯವಿರಲಿಲ್ಲ, ಆದರೆ ಅವರ ಬ್ಯಾಟ್​ ಎಂದಿನಂತೆ ಆರ್ಭಟಿಸುವುದು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಟೆಸ್ಟ್​ ಪಂದ್ಯಗಳಲ್ಲೂ ಅವರಿಂದ ಕಳಾಹೀನ ಪ್ರದರ್ಶನಗಳು ಬಂದಿದ್ದವು. ಭಾರತದ ಬೌಲರ್​ಗಳು ಇಂಗ್ಲೆಂಡ್​ನ ಬಲಿಷ್ಠ ಬ್ಯಾಟಿಂಗನ್ನು ಕೇವಲ 164 ರನ್​ಗಳಿಗೆ ನಿಯಂತ್ರಿಸಿದ್ದು ಉಲ್ಲೇಖನೀಯ ಸಾಧನೆ. ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಎರಡನೇ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲ್ ಮಾಡಿದ್ದು ಭಾರತಕ್ಕೆ ಒಬ್ಬ ಹೆಚ್ಚುವರಿ ಬ್ಯಾಟ್ಸ್​ಮನ್​ ಆಡಿಸಲು ನೆರವಾಗುತ್ತಿದೆ. ನಾಳೆಯ ಪಂದ್ಯದಲ್ಲೂ ಬೌಲರ್​ಗಳು ಅದೇ ಶಿಸ್ತು ಕಾಯ್ದುಕೊಳ್ಳವುದು ಅತ್ಯವಶ್ಯಕವಾಗಿದೆ.

ಇದನ್ನೂ ಓದಿ: India vs England: ಮೂರನೇ ಪಂದ್ಯದಲ್ಲಿ ಎರಡೂ ತಂಡಗಳಿಂದ ಸ್ಫೋಟಕ ಪ್ರದರ್ಶನ ನಿರೀಕ್ಷೆ

Published On - 11:05 pm, Mon, 15 March 21