
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಇದೀಗ ಐಪಿಎಲ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ‘ಸ್ಟಿಕ್ ಟು ಕ್ರಿಕೆಟ್’ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಅವರು, ಐಪಿಎಲ್ ಸಂಪೂರ್ಣವಾಗಿ ಬ್ಯಾಟರ್ಗಳ ಆಟವಾಗಿ ಬದಲಾಗಿದ್ದು, ಬೌಲರ್ಗಳಿಗೆ ಯಾವುದೇ ಗೌರವ ಇಲ್ಲದಂತಾಗಿದೆ ಎಂದು ಮುಕ್ತವಾಗಿ ಹೇಳಿಕೆ ನೀಡಿದ್ದಾರೆ.
ಪಂದ್ಯಾವಳಿಯಲ್ಲಿ ಕೇವಲ ರನ್ಗಳ ಮಳೆ ಹರಿಸುವುದನ್ನೇ ಗುರಿಯಾಗಿಸಿಕೊಂಡಿರುವುದರ ಬಗ್ಗೆ ಲಿವಿಂಗ್ಸ್ಟೋನ್ ಬೇಸರ ವ್ಯಕ್ತಪಡಿಸಿದ್ದಾರೆ. “ಬ್ಯಾಟರ್ಗಳು ಕೇವಲ 6, 6, 6 ಎಂದು ಸಿಕ್ಸರ್ಗಳನ್ನು ಹೊಡೆಯುತ್ತಿರುವುದನ್ನು ನೋಡುವುದು ಈಗ ನಿಜಕ್ಕೂ ಬೋರಿಂಗ್ ಅನಿಸುತ್ತಿದೆ. ಇದರಲ್ಲಿ ಕ್ರಿಕೆಟ್ನ ನೈಜ ಮಜಾ ಸಿಗುತ್ತಿಲ್ಲ”.
“ಪಿಚ್ಗಳು ಸಂಪೂರ್ಣವಾಗಿ ಬ್ಯಾಟಿಂಗ್ಗೆ ಪೂರಕವಾಗಿ , ಅಂದರೆ ಫ್ಲಾಟ್ ಆಗಿ ಇರುವುದರಿಂದ ಬ್ಯಾಟರ್ಗಳಿಗೆ ರನ್ ಗಳಿಸುವುದು ತುಂಬಾ ಸುಲಭವಾಗಿದೆ. ಬೌಲರ್ಗಳು ಎಷ್ಟೇ ಉತ್ತಮವಾಗಿ ಬೌಲಿಂಗ್ ಮಾಡಿದರೂ ರನ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪಂದ್ಯದಲ್ಲಿ ಕೌಶಲ್ಯಕ್ಕಿಂತ ಹೆಚ್ಚಾಗಿ ಕೇವಲ ಬಲಪ್ರಯೋಗಕ್ಕೆ ಮಾತ್ರ ಪ್ರಾಮುಖ್ಯತೆ ಸಿಗುತ್ತಿದೆ” ಎಂದು ಲಿಯಾಮ್ ಲಿವಿಂಗ್ಸ್ಟೋನ್ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ನಲ್ಲಿ ಜಾರಿಯಲ್ಲಿರುವ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವು ಬ್ಯಾಟರ್ಗಳಿಗೆ ಮತ್ತಷ್ಟು ಲಗಾಮಿಲ್ಲದ ಸ್ವಾತಂತ್ರ್ಯ ನೀಡಿದೆ ಎಂದು ಲಿಯಾಮ್ ಲಿವಿಂಗ್ಸ್ಟೋನ್ ಆರೋಪಿಸಿದ್ದಾರೆ. ಈ ನಿಯಮದಿಂದಾಗಿ ತಂಡದ ಬ್ಯಾಟಿಂಗ್ ಲೈನಪ್ ದೊಡ್ಡದಾಗುತ್ತದೆ. ಹೀಗಾಗಿ ವಿಕೆಟ್ ಉರುಳುವ ಭಯವಿಲ್ಲದೆ ಬ್ಯಾಟರ್ಗಳು ಮೊದಲ ಎಸೆತದಿಂದಲೇ ಮನಬಂದಂತೆ ಬ್ಯಾಟ್ ಬೀಸುತ್ತಿದ್ದಾರೆ. ಇದು ಕ್ರಿಕೆಟ್ನ ಮೂಲ ಆಟದ ಸಮತೋಲನವನ್ನು ಕೆಡಿಸಿದೆ ಎಂದು ಲಿವಿಂಗ್ಸ್ಟೋನ್ ಅಭಿಪ್ರಾಯಪಟ್ಟಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡವು ಒಂದೇ ಪಿಚ್ನಲ್ಲಿ ಸತತವಾಗಿ 5 ರಿಂದ 6 ಪಂದ್ಯಗಳನ್ನು ಆಡಬೇಕಾಗಿ ಬಂದಿದ್ದನ್ನು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ. ಪಿಚ್ಗಳನ್ನು ಪದೇ ಪದೇ ಮರುಬಳಕೆ ಮಾಡುವುದರಿಂದ ಅವು ಸಂಪೂರ್ಣವಾಗಿ ಜೀವಹೀನವಾಗಿ, ಕೇವಲ ಬ್ಯಾಟಿಂಗ್ ಸ್ನೇಹಿಯಾಗಿ ಬದಲಾಗುತ್ತಿವೆ. ಅಂದರೆ ಇಲ್ಲಿ ಗುಣಮಟ್ಟಕ್ಕೆ ಯಾವುದೇ ಬೆಲೆ ಇಲ್ಲ ಎಂದು ಲಿಯಾಮ್ ಲಿವಿಂಗ್ಸ್ಟೋನ್ ಲೀಗ್ನ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯವೊಂದನ್ನು ಉದಾಹರಿಸಿದ ಅವರು, ಎದುರಾಳಿ ತಂಡ ನೀಡಿದ್ದ 230ಕ್ಕೂ ಅಧಿಕ ರನ್ಗಳ ಬೃಹತ್ ಗುರಿಯನ್ನು ತಮ್ಮ ತಂಡ ಕೇವಲ 18 ಓವರ್ಗಳಲ್ಲೇ ಬೆನ್ನಟ್ಟಿದ್ದನ್ನು ನೆನಪಿಸಿಕೊಂಡರು. ಟಿ20 ಕ್ರಿಕೆಟ್ನಲ್ಲಿ 230 ರನ್ಗಳು ಕೂಡ ಸುರಕ್ಷಿತವಲ್ಲ ಎಂದರೆ ಬೌಲರ್ಗಳ ಪರಿಸ್ಥಿತಿ ಏನಾಗಬೇಡ ಎಂದು ಲಿಯಾಮ್ ಲಿವಿಂಗ್ಸ್ಟೋನ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!
ಲಿಯಾಮ್ ಲಿವಿಂಗ್ಸ್ಟೋನ್ ಅವರ ಈ ಕಟು ವಿಮರ್ಶೆಯು ಜಾಗತಿಕ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕ್ರಿಕೆಟ್ ಕೇವಲ ಬ್ಯಾಟರ್ಗಳ ರನ್ ಗಳಿಸುವ ಯಂತ್ರವಾಗಿ ಬದಲಾಗಬಾರದು ಮತ್ತು ಬೌಲರ್ಗಳಿಗೂ ಸಮಾನ ಅವಕಾಶ ಸಿಗಬೇಕು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬರಲಾರಂಭಿಸಿದೆ. ಹೀಗಾಗಿ ಮುಂದಿನ ಸೀಸನ್ನಲ್ಲಾದರೂ ಬಿಸಿಸಿಐ ಸಮತೋಲಿತ ಪಿಚ್ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.