2021 ರ ಐಪಿಎಲ್ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ!

ತಂಡದ ರೆಗ್ಯುಲರ್ ನಾಯಕ ಶ್ರೇಯಸ್ ಆಯ್ಯರ್ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಒಂದು ದಿನದ ಪಂದ್ಯದಲ್ಲಿ ತಮ್ಮ ಎಡಭುಜದ ಮೂಳೆಯನ್ನು ಡಿಸ್​ಲೊಕೇಟ್​ ಮಾಡಿಕೊಂಡಿರುವುದರಿಂದ ಅವರು ಶಸ್ತ್ರಚಿಕಿತ್ಸೆಗೊಳಗಾಗಲಿದ್ದು ಚೇತರಿಸಿಕೊಳ್ಳಲು 5 ತಿಂಗಳು ಬೇಕಾಗಲಿದೆ ಎಂದು ವರದಿಯಾಗಿದೆ. ಅವರು ಈ ಬಾರಿಯ ಐಪಿಎಲ್​ ಸೀಸನ್​ನಿಂದ ಹೊರಗಾಗಿದ್ದು ಪಂತ್​ಗೆ ವರದಾನವಾಗಿ ಪರಿಣಮಿಸಿದೆ.

2021 ರ ಐಪಿಎಲ್ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ!
ರಿಷಭ್ ಪಂತ್
ಅರುಣ್​ ಕುಮಾರ್​ ಬೆಳ್ಳಿ

Updated on: Mar 30, 2021 | 11:15 PM

ದೆಹಲಿ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಬೌಲರ್​ಗಳನ್ನು ರಿಷಭ್ ಪಂತ್ ಚಚ್ಚಿದ್ದನ್ನು ನೋಡಿದಾಗಲೇ ಇಂಥದೊಂದು ಸಾಧ್ಯತೆಯ ಬಗ್ಗೆ ಕ್ರಿಕೆಟ್​ ಪ್ರೇಮಿ ಯೋಚಿಸಿದ್ದ. ಶ್ರೇಯಸ್ ಅಯ್ಯರ್ ಅವರಿಗೆ ಗಾಯವಾಗಲಿ ಎಂದು ಪಂತ್ ಅವರ ಕಟ್ಟಾ ಅಭಿಮಾನಿ ಸಹ ಯೋಚಿಸಿರಲಾರ. ಆದರೆ ಪಂತ್ ನಾಯಕನ ಪಟ್ಟಕ್ಕೇರಲು ಸಮಯದ ಜೊತೆ ಯೋಗವೂ ಕೂಡಿಬಂದಿದೆ. ಹೌದು, ಕೇವಲ 23-ವರ್ಷ ವಯಸ್ಸಿನ ದೆಹಲಿ ಹುಡುಗ ರಿಷಭ್ ಪಂತ್ ಅವರನ್ನು ಇಂಡಿಯನ್ ಪ್ರಿಮೀಯರ್ 2021 ಸೀಸನ್​ಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕನೆಂದು ಫ್ರಾಂಚೈಸಿಯ ಧಣಿಗಳು ಮಂಗಳವಾರದಂದು ಘೋಷಿಸಿದ್ದಾರೆ.

ತಂಡದ ರೆಗ್ಯುಲರ್ ನಾಯಕ ಶ್ರೇಯಸ್ ಆಯ್ಯರ್ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಒಂದು ದಿನದ ಪಂದ್ಯದಲ್ಲಿ ತಮ್ಮ ಎಡಭುಜದ ಮೂಳೆಯನ್ನು ಡಿಸ್​ಲೊಕೇಟ್​ ಮಾಡಿಕೊಂಡಿರುವುದರಿಂದ ಅವರು ಶಸ್ತ್ರಚಿಕಿತ್ಸೆಗೊಳಗಾಗಲಿದ್ದು ಚೇತರಿಸಿಕೊಳ್ಳಲು 5 ತಿಂಗಳು ಬೇಕಾಗಲಿದೆ ಎಂದು ವರದಿಯಾಗಿದೆ. ಅವರು ಈ ಬಾರಿಯ ಐಪಿಎಲ್​ ಸೀಸನ್​ನಿಂದ ಹೊರಗಾಗಿದ್ದು ಪಂತ್​ಗೆ ವರದಾನವಾಗಿ ಪರಿಣಮಿಸಿದೆ.

ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಅರಿಸಿರುವ ಕುರಿತು ಫ್ರಾಂಚೈಸಿಯ ಚೇರ್ಮನ್ ಮತ್ತು ಸಹ-ಮಾಲೀಕ ಕಿರಣ್ ಕುಮಾರ್ ಗಾಂಧಿಯವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಅದನ್ನು ಖಚಿತಪಡಿಸಿದ್ದಾರೆ.

‘ಶ್ರೇಯಸ್ ಅಯ್ಯರ್ ಆದಷ್ಷು ಬೇಗ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ, ಅವರ ನಾಯಕತ್ವದಲ್ಲಿ ನಮ್ಮ ಟೀಮು ಹೊಸ ದಿಗಂತವನ್ನು ತಲುಪಿದೆ. ಅವರ ಅನುಪಸ್ಥಿತಿ ಟೀಮನ್ನು ಬಹಳ ಕಾಡಲಿದೆ. ಅವರ ಸ್ಥಾನಕ್ಕೆ ನಮ್ಮ ಫ್ರಾಂಚೈಸಿಯು ಒಮ್ಮತದಿಂದ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿದೆ. ಈ ಸೀಸನ್​ನಲ್ಲಿ ಟೀಮನ್ನು ಪಂತ್ ಮುನ್ನಡೆಸಲಿದ್ದಾರೆ. ಅವರ ಮತ್ತಷ್ಟು ಬೆಳೆಯಲು ಒದಗಿ ಬಂದಿರುವ ಅವಕಾಶದ ಹಿನ್ನೆಲೆ ಸರಿಯಿಲ್ಲವಾದರೂ ಅವರು ಅದನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರೆಂಬ ನಂಬಿಕೆ ನನಗಿದೆ. ಅವರ ಹೊಸ ಜವಾಬ್ದಾರಿಗೆ ಶುಭ ಹಾರೈಕೆಗಳು’ ಎಂದು ಗಾಂಧಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಯ್ಯರ್, ‘ನನಗೆ ಗಾಯಗೊಂಡಾಗ ಡೆಲ್ಲಿ ಕ್ಯಾಪಿಟಲ್ಸ್​ಗೆ ಈ ಬಾರಿಯ ಐಪಿಎಲ್​ ಸೀಸನಲ್ಲಿ ಟೀಮನ್ನು ಮುನ್ನಡೆಸಲು ಒಬ್ಬ ನಾಯಕ ಬೇಕಾಗಿತ್ತು. ಈ ಜವಾಬ್ದಾರಿಯನ್ನು ಹೆಗಲಿಗೇರಿಸಕೊಳ್ಳಲು ಪಂತ್ ಅತ್ಯುತ್ತಮ ಆಯ್ಕೆ ಎನ್ನುವುದರಲ್ಲಿ ನನಗೆ ಅನುಮಾನವೇ ಇಲ್ಲ. ನಮ್ಮ ಅದ್ಭುತವಾದ ಟೀಮು ಇನ್ನಷ್ಟು ಪ್ರಗತಿ ಸಾಧಿಸಲು ನನ್ನ ಶುಭ ಹಾರೈಕೆಗಳು ಯಾವತ್ತಿಗೂ ಅವರೊಂದಿಗಿವೆ. ನಾನು ಟೀಮನ್ನು ಬಹಳ ಮಿಸ್​ ಮಾಡಿಕೊಳ್ಳುವೆನಾದರೂ ಮನೆಯಲ್ಲೇ ಕೂತು ಸೀಸನ್​ ಮುಗಿಯವವರೆಗೆ ಅದನ್ನು ಪ್ರತಿಕ್ಷಣ ಹುರಿದುಂಬಿಸುತ್ತಿರುತ್ತೇನೆ,’ ಎಂದು ಹೇಳಿದ್ದಾರೆ.
ರಿಷಭ್ ಪಂತ್ ಸಹ ತನಗೆ ಸಿಕ್ಕಿರುವ ಹೊಸ ಹೊಣೆಗಾರಿಕೆ ಕುರತು ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು ಹುಟ್ಟಿ ಬೆಳೆದಿದ್ದು ದೆಹಲಿಯಲ್ಲಿ ಮತ್ತು ಆರು ವರ್ಷಗಳ ಹಿಂದೆ ನಾನು ಐಪಿಎಲ್ ಆಡಲು ಶುರುಮಾಡಿದ್ದು ಸಹ ದೆಹಲಿ ತಂಡಕ್ಕೆ. ಟೀಮನ್ನು ಲೀಡ್ ಮಾಡುವ ಕನಸು ಬಹಳ ದಿನಗಳಿಂದ ನನ್ನಲ್ಲಿ ಮನೆಮಾಡಿತ್ತು. ಅದು ಇಂದು ನೆರವೇರಿದೆ. ಹೊಸ ಜವಾಬ್ದಾರಿಯನ್ನು ವಿನಮ್ರತೆಯಿಂದ ಸ್ವೀಕರಿಸುತ್ತಾ ನನ್ನನ್ನು ಈ ಸ್ಥಾನಕ್ಕೆ ಯೋಗ್ಯನೆಂದು ಪರಿಗಣಿಸಿರುವುದಕ್ಕೆ ಟೀಮಿನ ಮಾಲೀಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅಸಾಧಾರಣ ಕೋಚಿಂಗ್ ಸ್ಟಾಫ್ ಮತ್ತು ಹಲವಾರು ದಿಗ್ಗಜ ಆಟಗಾರರು ಟೀಮಿನೊಂದಿಗಿರುವುದರಿಂದ ನನ್ನ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನ ನೀಡಲು ಕಾತುರನಾಗಿದ್ದೇನೆ,’ ಎಂದು ಪಂತ್ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಟೀಮಿನ ಹೆಡ್ ಕೋಚ್ ರಿಕ್ಕಿ ಪಾಂಟಿಂಗ್ ಅವರು, ‘ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಕಳೆದೆರಡು ಸೀಸನ್​ಗಳು ಅದ್ಭುತವಾಗಿದ್ದವು. ಫಲಿತಾಂಶಗಳನ್ನು ನೋಡಿದರೆ ಅದು ಗೊತ್ತಾಗುತ್ತದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಆಡಿದ ಸರಣಿಗಲ್ಲಿ ಅಮೋಘ ಪ್ರದರ್ಶನ ನೀಡಿದ ರಿಷಭ್ ಪಂತ್​​ಗೆ ಅತ್ಯುತ್ತಮ ಅವಕಾಶ ಲಭಿಸಿದ್ದು, ಆ ಸರಣಿಗಳಲ್ಲಿ ಅವರು ಹೆಚ್ಚಿಸಿಕೊಂಡಿರುವ ಆತ್ಮವಿಶ್ವಾಸ ಹೊಸ ಜವಾಬ್ದಾರಿಯನ್ನು ನಿಭಾಯಿಸುವಾಗ ಸಹಾಯ ಮಾಡಲಿದೆ. ಕೋಚಿಂಗ್ ಸ್ಟಾಫ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕವಾಗಿದೆ ಮತ್ತು ಕಾತುರತೆಯಿಂದ ಸೀಸನ್ ಆರಂಭಗೊಳ್ಳುವುದನ್ನು ಎದುರುನೋಡುತ್ತಿದೆ,’ ಎಂದಿದ್ದಾರೆ.

ಇದನ್ನೂ ಓದಿಹಿಂದೆ ರಿಚರ್ಡ್ಸ್​ರಂತೆ ಪಂತ್ ಸಹ ಭಾರತ ಮತ್ತು ಇಂಗ್ಲೆಂಡ್ ಟೀಮುಗಳ ನಡುವಿನ ವ್ಯತ್ಯಾಸವಾಗಿದ್ದರು: ಇಂಜಮಾಮ್-ಉಲ್-ಹಕ್

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us