Viral: ಪಾರ್ಕ್‌ನಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ; ವಿಡಿಯೋ ವೈರಲ್‌

| Updated By: ಅಕ್ಷತಾ ವರ್ಕಾಡಿ

Updated on: Oct 06, 2024 | 3:10 PM

ಇಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಪಾರ್ಕ್‌ ಹತ್ತಿರ ಮೂತ್ರ ವಿಸರ್ಜಿಸಬೇಡಿ ಎಂದು ತಿಳಿ ಹೇಳಿದ್ದಕ್ಕಾಗಿ ಯುವಕನೊಬ್ಬ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹೌದು ಆ ವ್ಯಕ್ತಿ ಅಂಗಡಿಯ ಬಳಿ ಮಲಗಿದ್ದ ವೇಳೆ ದೊಣ್ಣೆ ಹಿಡಿದುಕೊಂಡು ಬಂದ ಯುವಕ ನೀನ್ಯಾರು ನನ್ನ ತಡೆಯೋಕೇ ಎಂದು ಹೇಳಿ ಅಮಾಯಕ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಸಿಸಿ ಟಿವಿ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral: ಪಾರ್ಕ್‌ನಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆದ  ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ; ವಿಡಿಯೋ ವೈರಲ್‌
Follow us on

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ಹೇಳಿದ್ರೂ ಕೂಡಾ ಕೆಲವರು ಶೌಚಾಲಯವನ್ನು ಬಳಸದೆ ಪಾರ್ಕ್‌ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಪಾರ್ಕ್‌ ಒಂದರಲ್ಲಿ ಮೂತ್ರ ವಿಸರ್ಜನೆ ಮಾಡಲು ಮುಂದಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆಲ್ಲಾ ಮಾಡೋದು ತಪ್ಪು ಎಂದು ಬುದ್ಧಿವಾದ ಹೇಳಿ ವ್ಯಕ್ತಿಯೊಬ್ಬರು ಆ ಯುವಕ ಮೂತ್ರ ವಿಸರ್ಜನೆ ಮಾಡುವುದನ್ನು ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ಮರುದಿನ ಬಂದು ಬುದ್ಧಿವಾದ ಹೇಳಿದ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ಅಮಾನವೀಯ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಸ್ವಚ್ಛತೆಯ ಉದ್ದೇಶದಿಂದ ಪಾರ್ಕ್‌ನಲ್ಲಿ ಮೂತ್ರ ಮಾಡಬೇಡ ಎಂದು ಹೇಳಿದ ವ್ಯಕ್ತಿಯೊಬ್ಬರಿಗೆ ಯುವಕನೊಬ್ಬ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಇಲ್ಲಿನ ಮಾಡೆಲ್‌ ಟೌನ್‌ನ ಉದ್ಯಾನವನದಲ್ಲಿ ಆರ್ಯನ್‌ ಎಂಬ ಯುವಕ ಮೂತ್ರ ವಿಸರ್ಜನೆ ಮಾಡಲು ಮುಂದಾಗಿದ್ದು, ಇದನ್ನು ರಾಂಫಾಲ್‌ ಎಂಬವರು ತಡೆದಿದ್ದಾರೆ. ಬಳಿಕ ಈ ಇಬ್ಬರ ನಡುವೆಯೂ ವಾಗ್ವಾದ ಏರ್ಪಟ್ಟಿದೆ. ಇದೇ ಕೋಪದಲ್ಲಿದ್ದ ಆ ಯುವಕ ಮರುದಿನ ತನ್ನ ಸ್ನೇಹಿತರೊಂದಿಗೆ ಬಂದು ರಾಂಫಾಲ್‌ ಫುಟ್‌ಬಾತ್‌ನಲ್ಲಿ ಮಲಗಿದ್ದ ಸಂದರ್ಭದಲ್ಲಿ ಅವರಿಗೆ ಹಿಗ್ಗಾಮುಗ್ಗ ಥಳಿಸಿ ಅಲ್ಲಿಂದ ಓಡಿ ಹೋಗಿದ್ದಾನೆ. ಈ ದೃಶ್ಯ ಅಲ್ಲೇ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ವೈರಲ್‌ ಆಗುತ್ತಿದ್ದಂತೆ ಪೊಲೀಸರು ಆರ್ಯನ್‌ನನ್ನು ಬಂಧಿಸಿದ್ದಾರೆ. ಸದ್ಯ ಆ ಯುವಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ndtvindia ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕೈಯಲ್ಲಿ ದೊಣ್ಣೆ ಹಿಡಿದು ಬಂದ ಯುವಕನೊಬ್ಬ ಫುಟ್‌ಬಾತ್‌ನಲ್ಲಿ ಮಲಗಿದ್ದ ವ್ಯಕ್ತಿಗೆ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸುವ ದೃಶ್ಯವನ್ನು ಕಾಣಬಹುದು. ಪಾರ್ಕ್‌ನಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆದರೂ ಎಂಬ ಕಾರಣಕ್ಕೆ ಆ ಯುವಕ ಸಿಟ್ಟಿನಿಂದ ಅಮಾಯಕ ವ್ಯಕ್ತಿಗೆ ಮನ ಬಂದಂತೆ ಥಳಿಸಿದ್ದಾನೆ.

ಇದನ್ನೂ ಓದಿ: ವಧುವಿನ ದೃಷ್ಟಿ ತೆಗೆದು ಮದುವೆ ಮಂಟಪಕ್ಕೆ ಕೈ ಹಿಡಿದು ಕರೆದ್ಯೊಯ್ದ ವರ

ಅಕ್ಟೋಬರ್‌ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಮ್ಮ ಸಮಾಜದಲ್ಲಿ ಇಂತಹ ಗೂಂಡಾಗಳು ಇದ್ದರೆ ಸಮಾಜದ ಏಳಿಗೆ ಎಂದಿಗೂ ಸಾಧ್ಯವಿಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಡ ವ್ಯಕ್ತಿ ಬುದ್ಧಿಪಾದ ಹೇಳಿದ್ದೇ ತಪ್ಪಾಯಿತೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Sun, 6 October 24