Fact Check: ಜೈಪುರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದು ನಿಜಕ್ಕೂ ಮುಸ್ಲಿಮರೇ?: ಇಲ್ಲಿದೆ ಸತ್ಯಾಂಶ

| Updated By: ಅಕ್ಷತಾ ವರ್ಕಾಡಿ

Updated on: Oct 20, 2024 | 4:48 PM

ಜೈಪುರದಲ್ಲಿ ಕೆಲವು ಮುಸ್ಲಿಮರು ಆರ್‌ಎಸ್‌ಎಸ್ ಸ್ವಯಂಸೇವಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ಘಟನೆಯ ಆರೋಪಿಗಳು ಮುಸ್ಲಿಮರಲ್ಲ, ಬದಲಾಗಿ ಪೊಲೀಸರಿಂದ ಬಂಧಿಸಲ್ಪಟ್ಟವರು ಹಿಂದೂಗಳಾಗಿದ್ದಾರೆ.

Fact Check: ಜೈಪುರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದು ನಿಜಕ್ಕೂ ಮುಸ್ಲಿಮರೇ?: ಇಲ್ಲಿದೆ ಸತ್ಯಾಂಶ
Follow us on

ಜೈಪುರದಲ್ಲಿ ಕೆಲವು ಮುಸ್ಲಿಮರು ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಹೇಳಿಕೆಯ ಪ್ರಕಾರ, ಜೈಪುರದ ಕರ್ನಿ ವಿಹಾರ್ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಸೇರಿದ್ದ ಸುಮಾರು 10 ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಮುಸ್ಲಿಮರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ದೇಶದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರೇ ಸುರಕ್ಷಿತವಾಗಿಲ್ಲದಿರುವಾಗ ಸಾಮಾನ್ಯ ಹಿಂದೂಗಳ ಸ್ಥಿತಿ ಏನಾಗಬಹುದು ಎಂದು ಅನೇಕರು ಪ್ರಶ್ನಿಸಿದ್ದಾರೆ.

ಅರುಣ್ ಕುಮಾರ್ ಹಿಂದೂ ಎಂಬ ಎಕ್ಸ್ ಬಳಕೆದಾರರೊಬ್ಬರು ದಾಳಿಯ ಫೋಟೋವನ್ನು ಹಂಚಿಕೊಂಡು, ‘ಜೈಪುರದಲ್ಲಿ RSS ಸ್ವಯಂಸೇವಕರ ಮೇಲೆ ಜಿಹಾದಿ ದಾಳಿ, ಜಿಹಾದಿಗಳು ಖೀರ್ ವಿತರಣಾ ಕಾರ್ಯಕ್ರಮಕ್ಕೆ ಪ್ರವೇಶಿಸಿ ಸ್ವಯಂಸೇವಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಕೆಲವರು ಇದಕ್ಕೆ ಕಾರಣ ಹುಡುಕುತ್ತಿದ್ದಾರೆ, ಆದರೆ ಜಿಹಾದಿಗಳಿಗೆ ಯಾವುದೇ ಕಾರಣ ಬೇಕಾಗಿಲ್ಲ, ಅವರು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ನಾವು ಎಚ್ಚರವಾಗಲೇ ಬೇಕು ಹಿಂದೂಗಳೆ,’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಚಾರ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆಯ ಆರೋಪಿಗಳು ಮುಸ್ಲಿಮರಲ್ಲ, ಬದಲಾಗಿ ಪೊಲೀಸರಿಂದ ಬಂಧಿಸಲ್ಪಟ್ಟವರು ಹಿಂದೂಗಳಾಗಿದ್ದಾರೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್​ನಲ್ಲಿ ಆರ್​ಎಸ್​ಎಸ್​ ಜೈಪುರ ಅಟ್ಯಾಕ್ ಎಂಬ ಕೀವರ್ಸ್ ಬಳಸಿ ಸರ್ಚ್ ಮಾಡಿದ್ದೇವೆ. ಆಗ ಅಕ್ಟೋಬರ್ 18 ರಂದು ಎಸಿಪಿ ಕುನ್ವರ್ ರಾಷ್ಟ್ರದೀಪ್ ಹೇಳಿಕೆಯ ವೀಡಿಯೊವನ್ನು ಸುದ್ದಿ ಸಂಸ್ಥೆ ANI ಹಂಚಿಕೊಂಡಿರುವುದು ಸಿಕ್ಕಿದೆ. ಜೈಪುರದ ದೇವಸ್ಥಾನದಲ್ಲಿ ಜಾಗರಣ ಮತ್ತು ಪ್ರಸಾದ ವಿತರಣಾ ಕಾರ್ಯಕ್ರಮದ ವೇಳೆ ದಾಳಿ ನಡೆಸಿದ ಆರೋಪಿ ನಸೀಬ್ ಚೌಧರಿ ಮತ್ತು ಆತನ ಪುತ್ರನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಹಿಂದೂಗಳು ಎಂದು ಅವರು ಖಚಿತ ಪಡಿಸಿದ್ದಾರೆ.

ದಾಳಿಕೋರರು ದೇವಸ್ಥಾನದ ಬಳಿ ವಾಸಿಸುತ್ತಿದ್ದರು. ಕಾರ್ಯಕ್ರಮದ ವೇಳೆ ಗದ್ದಲದಿಂದ ಕುಪಿತಗೊಂಡು ಈ ಕೃತ್ಯ ಎಸಗಿದ್ದಾರೆ. ಈ ವೇಳೆ 6 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟಾರೆಯಾಗಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವರಲ್ಲಿ ನಸೀಬ್ ಸಿಂಗ್ ಚೌಧರಿ, ಅವರ ಪತ್ನಿ ನಿರ್ಮಲಾ ಚೌಧರಿ ಮತ್ತು ಅವರ ಪುತ್ರ ಭೀಷಮ್ ಸಿಂಗ್ ಚೌಧರಿ ಸೇರಿದ್ದಾರೆ. ಇವರೆಲ್ಲರೂ ಹಿಂದೂಗಳು, ಇದರಲ್ಲಿ ಯಾವುದೇ ಕೋಮುಕೋನವಿಲ್ಲ ಎಂದು ಹೇಳಿದ್ದಾರೆ.

ಹಾಗೆಯೆ ನ್ಯೂಸ್9 ಕೂಡ ಈ ಕುರಿತು ಅಕ್ಟೋಬರ್ 18, 2024 ರಂದು ‘ರಾಜಸ್ಥಾನ: ಜೈಪುರದಲ್ಲಿ 10 ಆರ್​ಎಸ್​ಎಸ್​ ವ್ಯಕ್ತಿಗಳ ಮೇಲೆ ದಾಳಿ; 6 ಜನ ಆಸ್ಪತ್ರೆಗೆ ದಾಖಲು’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದೆ. ವರದಿಯ ಪ್ರಕಾರ, ಶರದ್ ಪೂರ್ಣಿಮೆ ನಿಮಿತ್ತ ಗುರುವಾರ ರಾತ್ರಿ ದೇವಸ್ಥಾನದಲ್ಲಿ ಜಾಗರಣ ಕಾರ್ಯಕ್ರಮ ನಡೆಯುತ್ತಿತ್ತು. ಭಕ್ತಾದಿಗಳಿಗೆ ಪ್ರಸಾದ ಮಾಡುತ್ತಿದ್ದಾಗ ಅಕ್ಕಪಕ್ಕದ ಇಬ್ಬರು ವ್ಯಕ್ತಿಗಳು ತಡರಾತ್ರಿ ಕಾರ್ಯಕ್ರಮ ನಡೆಸಲು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಷಯದ ಬಗ್ಗೆ ಗಲಾಟೆ ನಡೆದಿದೆ. ಆರೋಪಿಗಳು ಇತರರನ್ನು ಕರೆದು ಜನರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದರು. ಇದರಲ್ಲಿ 10 ಆರ್‌ಎಸ್‌ಎಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಆರೋಪಿ ನಸೀಬ್ ಚೌಧರಿ ಮತ್ತು ಆತನ ಮಗನನ್ನು ವಶಕ್ಕೆ ಪಡೆಯಲಾಗಿ ಎಂದು ಪೊಲೀಸರು ತಿಳಿಸಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ನ್ಯೂಸ್9 ವರದಿಯಲ್ಲಿದೆ.

ಮತ್ತಷ್ಟು ಓದಿ: Viral Video : ಅಬ್ಬಬ್ಬಾ! ಈ ಪೋರನ ಸ್ಟಂಟಿಂಗ್ ಟ್ಯಾಲೆಂಟ್ ನೋಡಿ, ವಿಡಿಯೋ ವೈರಲ್

ನ್ಯೂಸ್ 9 ಪ್ರಕಟಿಸಿರುವ ಸಂಪೂರ್ಣ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ:

ಹೀಗಾಗಿ ಜೈಪುರದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು ಮುಸ್ಲಿಂ ವ್ಯಕ್ತಿಗಳು ಅಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ದಾಳಿಕೋರರು ದೇವಸ್ಥಾನದ ಬಳಿ ವಾಸಿಸುತ್ತಿದ್ದರು. ಕಾರ್ಯಕ್ರಮದ ವೇಳೆ ಗದ್ದಲದಿಂದ ಕುಪಿತಗೊಂಡ ಇವರು ಈ ಕೃತ್ಯ ಎಸಗಿದ್ದಾರೆ. ಇವರು ಹಿಂದೂಗಳೇ ಆಗಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:47 pm, Sun, 20 October 24