ತನ್ನ ಬೈಕ್​ ತಾನೇ ಸುಟ್ಟುಹಾಕಿದ ಹೈದರಾಬಾದಿನ ಈ ವ್ಯಕ್ತಿ

Wrong Side : ಸಂಚಾರ ನಿಯಮವನ್ನು ಉಲ್ಲಂಘಿಸಿದವನೂ ಇವನೇ. ಪೊಲೀಸರೊಂದಿಗೆ ಜಗಳಕ್ಕಿಳಿದವನೂ ಇವನೇ. ಇದರಿಂದ ಹತಾಶೆಗೊಂಡು ತನ್ನ ಬೈಕಿಗೆ ತಾನೇ ಬೆಂಕಿ ಹಚ್ಚಿದವನೂ ಇವನೇ. 

ತನ್ನ ಬೈಕ್​ ತಾನೇ ಸುಟ್ಟುಹಾಕಿದ ಹೈದರಾಬಾದಿನ ಈ ವ್ಯಕ್ತಿ
ಉರಿಯುತ್ತಿರುವ ಬೈಕ್
Updated By: ಶ್ರೀದೇವಿ ಕಳಸದ

Updated on: Oct 04, 2022 | 11:34 AM

Viral Video : ಕೆಲವರಿಗೆ ಹತಾಶೆಯ ಮೂಲ ಮತ್ತು ಕಾರಣ ಬೇರೆಯೇ ಇರುತ್ತದೆ. ಆದರೆ ಅದನ್ನು ಇನ್ನೆಲ್ಲೋ ತೀರಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಅದರ ಪರಿಣಾಮದ ಬಾಧ್ಯತೆ ಮಾತ್ರ ಇನ್ನೊಬ್ಬರ ಮೇಲೂ ಆಗಬಹುದು ಅಥವಾ ಸ್ವತಃ ಅವರ ಮೇಲೆಯೇ ಆಗಬಹುದು. ಸಮಸ್ಯೆಗಳು ಎಲ್ಲರಿಗೂ ಇರುತ್ತವೆ ಆದರೆ ವಿವೇಚನೆ ಎನ್ನುವುದನ್ನು ಕಳೆದುಕೊಳ್ಳಬಾರದಲ್ಲ? ಇಲ್ಲೊಬ್ಬ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ  ಸವಾರನನ್ನು ಪೊಲೀಸರು ತಡೆದಿದ್ದಾರೆ. ಅದಕ್ಕೆ ಹತಾಶೆಗೊಂಡ ಸವಾರ ತನ್ನ ಬೈಕಿಗೆ ತಾನೇ ಬೆಂಕಿ ಹಚ್ಚಿದ್ದಾನೆ. ಸೋಮವಾರದಂದು ಹೈದರಾಬಾದಿನಲ್ಲಿ ನಡೆದ ಈ ಘಟನೆ ಇದೀಗ ವೈರಲ್ ಆಗಿದೆ. ಅಂದು ಸಂಜೆ ಅಮೀರಪೇಟ್‌ನ ಮೈತ್ರಿವನಂನಲ್ಲಿ ಈ ಸವಾರ ರಾಂಗ್ ಸೈಡಿನಲ್ಲಿ ಪ್ರಯಾಣಿಸುತ್ತಿದ್ದ. ಅದಕ್ಕಾಗಿ ಪೊಲೀಸರು ರಸ್ತೆಯಲ್ಲಿ ಇವನನ್ನು ತಡೆದಿದ್ದಾರೆ. ಆಗ ಹೀಗೆ ಅತಿರೇಕದಿಂದ ವರ್ತಿಸಿದ್ದಾನೆ.

ಅಮೀರ್‌ಪೇಟ್‌ನಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿರುವ ಈತನನ್ನು ಎಸ್. ಅಶೋಕ್ ಎಂದು ಗುರುತಿಸಲಾಗಿದೆ. ರಾಂಗ್​ ಸೈಡ್ ಬಂದಿದ್ದಕ್ಕೆ ಪೊಲೀಸರು ತಡೆದಿದ್ದಾರೆ. ಆಗ ಕೋಪೋದ್ರಿಕ್ತನಾಗಿ ಅವರೊಂದಿಗೆ ಜಗಳಕ್ಕಿಳಿದಿದ್ದಾನೆ. ನಂತರ ತನ್ನ ಅಂಗಡಿಗೆ ಹೋಗಿ ಪೆಟ್ರೋಲ್​ ಕ್ಯಾನ್​ ತಂದು ತನ್ನ ಬೈಕಿಗೆ ಸುರಿದು ಬೆಂಕಿಹಚ್ಚಿದ್ದಾನೆ. ಇವನ ಈ ಅಸಹಜ ನಡೆವಳಿಕೆಯಿಂದಾಗಿ ಸಂಚಾರಿ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದಾಗ, ಅವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಟ್ರಾಫಿಕ್ ಪೊಲೀಸ್ ಅಧಿಕಾರಿ, ‘ನಿತ್ಯವೂ ಈ ಸವಾರ ಸಂಚಾರ ನಿಯಮವನ್ನು ಉಲ್ಲಂಘಿಸುತ್ತಲೇ ಇರುತ್ತಾನೆ. ಪ್ರಯಾಣಿಕರಿಗೆ ಅಭಿಮುಖವಾಗಿ ಚಲಿಸಿ ಸಂಚಾರಕ್ಕೆ, ಸವಾರರಿಗೆ ವ್ಯತ್ಯಯ ಉಂಟುಮಾಡುತ್ತಲೇ ಇರುತ್ತಾನೆ. ಇವನ ಈ ನಡೆವಳಿಕೆಯಿಂದ ಇವನಿಗೂ ರಸ್ತೆ ಮೇಲಿರುವವರಿಗೂ ಇದು ಅಪಾಯವೇ’ ಎಂದಿದ್ಧಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:26 am, Tue, 4 October 22