Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?

| Updated By: ಶ್ರೀದೇವಿ ಕಳಸದ

Updated on: Aug 05, 2022 | 1:03 PM

Maharashtra Rain : ಆಳವಾದ ಈ ನದಿಯನ್ನು ದಾಟಲು ಸೇತುವೆಯಿಲ್ಲ. ಈ ಗ್ರಾಮದ ಮಕ್ಕಳು ಶಾಲೆಗೆ ತಲುಪಲು ದಿನಂಪ್ರತಿ ಪೋಷಕರ ಸಹಾಯದೊಂದಿಗೇ ಪ್ರಯಾಣಿಸಬೇಕು. ವಿಡಿಯೋ ನೋಡಿ...

Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
ಮಕ್ಕಳನ್ನು ನದಿ ದಾಟಿಸುತ್ತಿರುವ ಪೋಷಕರು
Follow us on

Trending Video : ನಗರನಗರಗಳ ಮಧ್ಯೆ, ರಾಜ್ಯರಾಜ್ಯಗಳ ಮಧ್ಯೆ ಸಂಪರ್ಕ ಕಲ್ಪಿಸಲು ಮತ್ತು ಪ್ರಯಾಣವನ್ನು ಸುಲಭಗೊಳಿಸಲು ಎಕ್ಸ್​ಪ್ರೆಸ್ ಸೇತುವೆಗಳು, ಸುರಂಗಮಾರ್ಗಗಳು ನಿರ್ಮಾಣಗೊಳ್ಳುತ್ತಲೇ ಇವೆ. ಆದರೆ ನಮ್ಮ ದೇಶದ ಹಳ್ಳಿಗಳಲ್ಲಿರುವ ಮಕ್ಕಳು ನಿತ್ಯ ಶಾಲೆಗೆ ಪ್ರಯಾಣಿಸಲು ಸೂಕ್ತ ದಾರಿಗಳಿಲ್ಲದೆ ಪರದಾಡುವಂಥ ಪರಿಸ್ಥಿತಿಗೆ ಮುಕ್ತಿ ಯಾವಾಗಲೋ? ಮಹಾರಾಷ್ಟ್ರಾದ ನಾಸಿಕ್ ಜಿಲ್ಲೆಯ ಗ್ರಾಮೀಣ ಮಕ್ಕಳು ಸೂಕ್ತ ಸೇತುವೆ, ರಸ್ತೆ ಇಲ್ಲದೆ ದಿನವೂ ನದಿ ದಾಟಿಕೊಂಡೇ ಹೋಗಬೇಕಾದ ಅಪಾಯಕರ ಪರಿಸ್ಥಿತಿ ಇದೆ. ಎಎನ್​ಐ ಹಂಚಿಕೊಂಡ ಈ ಕೆಳಗಿನ ವಿಡಿಯೋ ಗಮನಿಸಿ. ನಾಸಿಕ್​ನ ಪೇಠ್​ ತಾಲೂಕಿನಲ್ಲಿ ಹರಿದಿರುವ ಈ ನದಿಯ ಹೆಸರು ಸುಕಿ. ಮಕ್ಕಳನ್ನು ಹೊತ್ತುಕೊಂಡು ಹೋಗುವ ಈ ಪೋಷಕರ ಎದೆಮಟ್ಟ ನೀರು ಇದೆ. ಇವರು ತಮ್ಮ ಹೆಗಲಮೇಲೆ ಹೊತ್ತುಕೊಂಡೋ ಅಥವಾ ದೊಡ್ಡದೊಡ್ಡ ಪಾತ್ರೆಗಳಲ್ಲಿ ಕೂರಿಸಿಕೊಂಡೋ ಮಕ್ಕಳಿಗೆ ನದಿ ದಾಟಿಸುತ್ತಾರೆ. ಶಾಲೆಗೆ ಹೋಗಲು ಇವರಿಗಿರುವುದು ಇದೊಂದೇ ಮಾರ್ಗ. ಈ ಕಾರಣಕ್ಕೆ  ಸಾಕಷ್ಟು ಮಕ್ಕಳು ಮತ್ತು ಪೋಷಕರು ಇಂಥ ಸಾಹಸಕ್ಕೆ ಮನಸ್ಸು ಮಾಡದೇ ತಮ್ಮಷ್ಟಕ್ಕೆ ಉಳಿಯುವಂತಾಗಿದೆ. ಹೀಗಾಗಿ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ.

‘ಆಳವಾದ ಈ ನದಿಯನ್ನು ದಾಟಲು ಬಹಳ ಕಷ್ಟವಾಗುತ್ತದೆ. ಹೆಗಲ ಮೇಲೆ ಬೆಳೆದ ಮಕ್ಕಳನ್ನು ಕೂರಿಸಿಕೊಂಡು ಹೋಗುವುದು ಅಥವಾ ದೊಡ್ಡ ಪಾತ್ರೆಗಳಲ್ಲಿ ಸಾಗಿಸುವುದು ಎಷ್ಟು ಸುರಕ್ಷಿತ? ಸೇತುವೆ ನಿರ್ಮಿಸಿ ಕೊಡಬೇಕೆಂದು ಸರ್ಕಾರಕ್ಕೆ ಈ ಮೂಲಕ ಕೋರುತ್ತಿದ್ದೇವೆ’ ಎನ್ನುತ್ತಾರೆ ಸ್ಥಳೀಯ ಪೋಷಕರೊಬ್ಬರು.

ಇದನ್ನೂ ಓದಿ
Karnataka Rains: ರಾಜ್ಯಾದ್ಯಂತ ಇಂದು ಮತ್ತು ನಾಳೆ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ; ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ
Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇನ್ನೂ ಮೂರು ದಿನ ಮಳೆ; ನೆರೆ ರಾಜ್ಯಗಳಲ್ಲೂ ಮಳೆಗಿಲ್ಲ ವಿರಾಮ
Karnataka Rain Update: ಕರ್ನಾಟಕದಲ್ಲಿ ಮುಂದುವರೆದ ಮಳೆ: ಮುಂದಿನ 24 ಗಂಟೆ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ
Karnataka Rain: ಕರ್ನಾಟಕದ 7 ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್; ಬೆಂಗಳೂರಿಗೆ ಹಳದಿ ಅಲರ್ಟ್ ಘೋಷಣೆ

ಅನೇಕ ಪೋಷಕರು ತಮ್ಮ ಮಕ್ಕಳನ್ನು ಪ್ರತಿದಿನ ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ನದಿ ದಾಟಿಸುತ್ತಿದ್ದಾರೆ. ಆದರೆ ಉಳಿದ ಪೋಷಕರು, ನದಿ ದಾಟಿಸುವಾಗ ಅನಾಹುತ ಸಂಭವಿಸಿದರೆ? ಎಂದು ದೂರವೇ ಉಳಿಯುತ್ತಿದ್ದಾರೆ.

‘ಮಳೆಗಾಲದಲ್ಲಿ ಇಂಥ ಸ್ಥಿತಿ ಉಂಟಾಗಲು ಹಿನ್ನೀರನ್ನು ನದಿಗೆ ಬಿಡುವುದೇ ಕಾರಣ. ತಿಂಗಳುಗಟ್ಟಲೆ ತುಂಬಿ ಹರಿಯುವ ನದಿಯಿಂದಾಗಿ ಮಕ್ಕಳು ಶಾಲೆಯಿಂದ ದೂರವಾಗುತ್ತಾರೆ. ಇದು ಪ್ರತೀ ವರ್ಷವೂ ಪುನರಾವರ್ತಿಸುತ್ತದೆ’ ಎನ್ನುತ್ತಾರೆ ಇನ್ನೊಬ್ಬ ಪೋಷಕರು.

ಪ್ರತೀ ಚುನಾವಣೆಯಲ್ಲಿಯೂ ಜನಪ್ರತಿನಿಧಿಗಳು ಮತ ಕೇಳಲು ಬಂದಾಗ ಸೇತುವೆ ನಿರ್ಮಿಸಿ ಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ ಮನವಿಯನ್ನೂ ಸಲ್ಲಿಸುತ್ತಾರೆ. ಆದರೆ ಯಾರೊಬ್ಬರೂ ಈ ಬಗ್ಗೆ ಗಮನ ಹರಿಸದೇ ಇರುವುದು ಗ್ರಾಮಸ್ಥರನ್ನು ಬೇಸರಕ್ಕೆ ತಳ್ಳಿದೆ.  ಎಷ್ಟೋ ವರ್ಷಗಳಿಂದ ಇಲ್ಲಿಯ ಬದುಕು ಹೀಗೆಯೇ ಸಾಗುತ್ತಿದೆ.

ಮತ್ತಷ್ಟು ಮಳೆ ಸುದ್ದಿಗಾಗಿ ಕ್ಲಿಕ್ ಮಾಡಿ

Published On - 12:51 pm, Fri, 5 August 22