Viral Video: ಕಾಶ್ಮೀರಿ ಪಂಡಿತ್​ ಕುಟುಂಬಕ್ಕೆ ಮನೆ ಕಟ್ಟಲು ಬಿಡದೆ ಹಿಂಸೆ ನೀಡಿದ ಸ್ಥಳೀಯ ಮುಸ್ಲಿಮರು

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 07, 2024 | 5:36 PM

ಚುನಾವಣಾ ಫಲಿತಾಂಶ ಹೊರ ಬಿದ್ದ ಕೇವಲ 24 ಗಂಟೆಯ ಒಳಗೆ ಕಾಶ್ಮೀರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇಲ್ಲಿ ಮನೆ ಕಟ್ಟಲು ಮುಂದಾದಂತಹ  ಕಾಶ್ಮೀರಿ ಪಂಡಿತರ ಕುಟುಂಬದ ಮೇಲೆ ಇಲ್ಲಿನ ಸ್ಥಳೀಯ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಈ ಸ್ಥಳವನ್ನು ಬಿಟ್ಟು ಹೋಗುವಂತೆ ಬೆದರಿಕೆಯನ್ನು ಹಾಕಿದ್ದಾರೆ.  ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ. 

Viral Video: ಕಾಶ್ಮೀರಿ ಪಂಡಿತ್​ ಕುಟುಂಬಕ್ಕೆ ಮನೆ ಕಟ್ಟಲು ಬಿಡದೆ ಹಿಂಸೆ ನೀಡಿದ ಸ್ಥಳೀಯ ಮುಸ್ಲಿಮರು
Follow us on

ಶತಮಾನಗಳಿಂದಲೂ ಕಾಶ್ಮೀರಿ ಪಂಡಿತರ ಮೇಲೆ ಅವ್ಯಾಹತವಾಗಿ ಹಲ್ಲೆಗಳು ನಡೆಯುತ್ತಿವೆ. ಕಾಶ್ಮೀರದಲ್ಲಿ ಪ್ರತಿನಿತ್ಯ ಹಿಂದೂಗಳನ್ನು, ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಅದೆಷ್ಟೋ  ಹಿಂಸಾಚಾರಗಳು ನಡೆದಿವೆ. ಹೀಗೆ ವಿವಿಧ ಕಾರಣಗಳಿಂದ ಹಲವಾರು ಸಂಖ್ಯೆಯ ಕಾಶ್ಮೀರಿ ಪಂಡಿತ ಕುಟುಂಬಗಳು ಜಮ್ಮು ಮತ್ತು ಕಾಶ್ಮೀರದಿಂದ ವಲಸೆ ಹೋಗಿವೆ. ಇದೀಗ ಅದೇ ರೀತಿಯ ಆಘಾತಕಾರಿ ವಿಡಿಯೋವೊಂದು ವೈರಲ್‌ ಆಗಿದ್ದು, ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮರಳಿದ ನಂತರ ಇಲ್ಲಿ  ಮನೆಯನ್ನು ಕಟ್ಟಲು ಮುಂದಾದಂತಹ ಕಾಶ್ಮೀರಿ ಪಂಡಿತ ಕುಟುಂಬದ ಮೇಲೆ ಅಲ್ಲಿನ ಸ್ಥಳೀಯ ನಿವಾಸಿಗಳು ಹಲ್ಲೆ ನಡೆಸಿದ್ದಾರೆ.

ಈ ಘಟನೆ ಜಮ್ಮು ಮತ್ತು ಕಾಶ್ಮೀರದ  ಅನಂತನಾಗ್‌ ಪ್ರದೇಶದಲ್ಲಿ  ನಡೆದಿದ್ದು, ಇಲ್ಲಿನ ಸ್ಥಳೀಯ ಮುಸ್ಲಿಮರು ಕಾಶ್ಮೀರಿ ಪಂಡಿತ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ.  ಕಾಶ್ಮೀರಿ ಕಣಿವೆಯಲ್ಲಿ ಶಾಂತಿ ಮರಳಿದ ನಂತರ ಇಲ್ಲಿ ಪುನರ್ವಸತಿಗೆ ಯೋಜಿಸುತ್ತಿದ್ದ ಕಾಶ್ಮೀರಿ ಪಂಡಿತ ಕುಟುಂಬದ ಮೇಲೆ ದಾಳಿ ನಡೆದಿದೆ. ಮನೆ ಕಟ್ಟದಂತೆ  ಎಲ್ಲಾ ವಸ್ತುಗಳನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೆ, ನೆರೆಹೊರೆಯ ಮುಸ್ಲಿಮರು ಕಾಶ್ಮೀರಿ ಪಂಡಿತ ಕುಟುಂಬವು ಕಣಿವೆಯನ್ನು ತೊರೆದು ಹೋಗುವಂತೆ ಬೆದರಿಕೆ ಹಾಕಿದೆ.

ವರದಿಯ ಪ್ರಕಾರ, ಅನಂತ್‌ನಾಗ್‌ ನಗರದ ವೆರಿನಾಗ್‌ ಪ್ರದೇಶದಲ್ಲಿ ಸಂಜಯ್‌ ವಾಲಿ ಎಂಬ ಕಾಶ್ಮೀರಿ ಪಂಡಿತರೊಬ್ಬರು,  1990 ರ ಹತ್ಯಾಕಾಂಡದ ನಂತರ ಮತ್ತೆ ಧೈರ್ಯ ಮಾಡಿ ತಮ್ಮ ಜಮೀನಿನಲ್ಲಿ ಮನೆ ಕಟ್ಟಲು ಪ್ರಾರಂಭಿಸಿದರು.  ಅವರ ಜಮೀನಿನ ಅಕ್ಕಪಕ್ಕದಲ್ಲಿ ಮುಸ್ಲಿಂ ಕುಟುಂಬಗಳು ವಾಸವಿದ್ದು, ಸಂಜಯ್‌ ವಾಲಿ ಅವರು ಮನೆಯನ್ನು ನಿರ್ಮಿಸದಂತೆ ಅವರುಗಳು ತಡೆದಿದ್ದಾರೆ. ಜೊತೆಗೆ ಮಾನಸಿಕ ಹಿಂಸೆಯನ್ನು ಸಹ ನೀಡಿದ್ದಾರೆ.  ಬಳಿಕ ಜೂ 4, 2024 ರಂದು ಲೋಕಸಭೆ  ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಸಂಜಯ್‌  ಅವರ ಕುಟುಂಬದ ಮೇಲೆ ನೆರೆಹೊರೆಯ ಮುಸ್ಲಿಮರ ಮೇಲೆ ದಾಳಿ ನಡೆಸುವುದರ ಜೊತೆಗೆ  ಕೆಲವರು ಬಂದು ಇವರ ಮನೆಯವರ ಜೊತೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ.  ಮನೆ ಕಟ್ಟಲು ತಂದಂತಹ  ಸಾಮಾಗ್ರಿಗಳನ್ನೆಲ್ಲಾ ಧ್ವಂಸಗೊಳಿಸಿ ಸಂಜಯ್‌ಗೂ ಬೆದರಿಕೆ ಹಾಕಲಾಯಿತು.

ಇದನ್ನೂ ಓದಿ: ಹಿಂದೂಗಳ ಪ್ರಾಬಲ್ಯವಿದ್ದ ಸಿಯಾಲ್ಕೋಟ್‌ ಪಾಕ್​​​​ ತೆಕ್ಕೆಗೆ ಬೀಳಲು ಹಿಂದುಗಳೇ ಕಾರಣ, ಮತದಾನ ಎಷ್ಟು ಮುಖ್ಯ ನೋಡಿ 

ಈ ಕುರಿತ ವಿಡಿಯೋವನ್ನು  ಡಾ. ಸುಷ್ಮಾ (@shallakaul) ಎಂಬವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ  ಕಾಶ್ಮೀರಿ ಪಂಡಿತದ ಕುಟುಂಬದ ಮೇಲೆ ಸ್ಥಳೀಯ ಮುಸ್ಲಿಮರು ಹಲ್ಲೆ ನಡೆಸುತ್ತಿರುವ, ಜಗಳವಾಡುತ್ತಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕಾಶ್ಮೀರದಲ್ಲಿ ಹಿಂದೂಗಳಿಗೆ ಬದುಕುವ ಹಕ್ಕಿಲ್ಲವೇ ಎಂದು ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Fri, 7 June 24