ಓರಿಯನ್ ಮಾಲ್​ನಲ್ಲಿರುವ ಈ ಆನೆ ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿದೆ

| Updated By: ಶ್ರೀದೇವಿ ಕಳಸದ

Updated on: Nov 29, 2022 | 2:31 PM

Baadal Nanjundaswamy : ಗ್ರಾಹಕರಲ್ಲಿ ಶಕ್ತಿ, ಆರೋಗ್ಯ, ಸಂತೋಷ ಮತ್ತು ಅದೃಷ್ಟವನ್ನು ಸಾಂಕೇತಿಸುವ ನಿಟ್ಟಿನಲ್ಲಿ ಈ ಕಲಾಕೃತಿ ಚಿತ್ರಿತಗೊಂಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಬಾದಲ್​ ನಂಜುಂಡಸ್ವಾಮಿ ಅವರು ಈ ತ್ರಿಡಿ ಆನೆಯನ್ನು ಚಿತ್ರಿಸಿದ್ದಾರೆ.

ಓರಿಯನ್ ಮಾಲ್​ನಲ್ಲಿರುವ ಈ ಆನೆ ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿದೆ
ಕಲಾವಿದ ಬಾದಲ್ ನಂಜುಂಡಸ್ವಾಮಿ ತಮ್ಮ ಕಲಾಕೃತಿಗಳೊಂದಿಗೆ
Follow us on

Viral Video : ಮೈಸೂರಿನ ಯುವಕಲಾವಿದ ಬಾದಲ್​ ನಂಜುಂಡಸ್ವಾಮಿ ಬಣ್ಣಕುಂಚಗಳ ವ್ಯಾಮೋಹವಿರುವ ಪ್ರತಿಯೊಬ್ಬರಿಗೂ ಪರಿಚಿತರು. ಅದರಲ್ಲೂ ಬಿಬಿಎಂಪಿ ಅಧಿಕಾರಿಗಳಿಗಂತೂ ಕೇಳುವುದೇ ಬೇಡ! ಸುಮಾರು ಹತ್ತು ವರ್ಷಗಳಿಂದ ಸ್ಟ್ರೀಟ್​ ಆರ್ಟ್​ ಮೂಲಕ ವ್ಯವಸ್ಥೆಯ ಓರೆಕೋರೆಗಳನ್ನು ಗುರುತಿಸುತ್ತ ಬಂದಿರುವ ಇವರು ನಮ್ಮ ನಡುವಿನ ಅಪರೂಪದ, ಪ್ರತಿಭಾನ್ವಿತ ಕಲಾವಿದರು. ಬೆಂಗಳೂರು ಮತ್ತು ಮೈಸೂರಿನ ಹದಗೆಟ್ಟ ರಸ್ತೆಗಳನ್ನು, ರಸ್ತೆಗುಂಡಿಗಳನ್ನು ಕೇಂದ್ರೀಕರಿಸಿಕೊಂಡು ಕಲೆಯ ಮೂಲಕ ವ್ಯವಸ್ಥೆಯ ಚುಕ್ಕಾಣಿ ಹಿಡಿದವರ ಗಮನ ಸೆಳೆದ ಇವರ ಸೃಜನಶೀಲತೆ ಅಗಾಧ. ಬಾದಲ್​ ಒಂದು ಹಂತದಲ್ಲಿ ಎಷ್ಟು ಜನಪ್ರಿಯರಾದರೆಂದರೆ, ಯಾರೇ ಎಲ್ಲೇ ರಸ್ತೆಗುಂಡಿಗಳನ್ನು ನೋಡಿದರೂ ಮೊದಲು ಬಾದಲ್​ ಅವರಿಗೆ ತಿಳಿಸಬೇಕು ಎನ್ನುವಷ್ಟು! ಹಾಗಿದ್ದರೆ ಬಾದಲ್​ ಈಗ ಹೇಗೆ ಸುದ್ದಿಯಲ್ಲಿದ್ದಾರೆ? ಈ ವಿಡಿಯೋ ನೋಡಿ.

ಇತ್ತೀಚೆಗೆ ಬೆಂಗಳೂರಿನ ಓರಿಯನ್​ ಮಾಲ್​ನಲ್ಲಿ ಬಾದಲ್​ ಸೃಷ್ಟಿಸಿದ ತ್ರೀಡಿ ಆನೆ ಬೆಂಗಳೂರಿಗರನ್ನು ಬಹುವಾಗಿ ಸೆಳೆಯುತ್ತಿದೆ. ಗೋಡೆಯೊಡೆದುಕೊಂಡು ಇನ್ನೇನು ಆನೆ ಬಂದೇ ಬಿಡುವುದೇ ಎಂಬಂಥ ನೈಜ ಮತ್ತು ಮಾಂತ್ರಿಕತೆಯನ್ನು ಬಾದಲ್ ಇಲ್ಲಿ​ ಕಟ್ಟಿಕೊಟ್ಟಿದ್ದಾರೆ.

ಬೆಂಗಳೂರಿನ ಓರಿಯನ್ ಮಾಲ್​ನಲ್ಲಿರುವ ಈ ಆನೆಯ ಕಲಾಕೃತಿಯ ಬಳಿ ಯಾರೂ ಹೋಗಿ ಫೋಟೋ ತೆಗೆಸಿಕೊಳ್ಳಬಹುದು. ‘ಈ ಸ್ಥಳದಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಕಡಿಮೆ ಬೆಳಕಿದ್ದರೆ ಒಳ್ಳೆಯದು’ ಎಂದು ಸಲಹೆಯನ್ನೂ ನೀಡಿದ್ದಾರೆ ಬಾದಲ್​.

ರಂಗಕಲಾವಿದರು, ಕಥೆಗಾರರು, ಕಲಾನಿರ್ದೇಶಕರು ಆಗಿರುವ ಬಾದಲ್​ ಈಗಾಗಲೇ ತಮ್ಮ ಚಿತ್ರಕಲೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವಂಥವರು. ಇವರ ಅದ್ಭುತ ಕಲೆಗಾರಿಕೆಗೆ ಮತ್ತಷ್ಟು ಅಂತಾರಾಷ್ಟ್ರೀಯ ಮನ್ನಣೆ ಸಿಗಬೇಕೆಂದು ನೆಟ್ಟಿಗರು ಹಾರೈಸಿದ್ದಾರೆ. ಇವರ ಸೃಜನಶೀಲತೆಗೆ ಇವರೇ ಸಾಟಿ ಎಂದು ಶ್ಲಾಘಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬಾದಲ್​ ಅವರ ಆರ್ಟ್​ಮ್ಯಾಜಿಕ್​ ಎತ್ತ ಸಾಗಬಹುದು ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಓರಿಯನ್​ ಮಾಲ್​ಗೆ ಭೇಟಿ ಕೊಟ್ಟಾಗ ಮರೆಯದಿರಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 2:13 pm, Tue, 29 November 22