World Theatre Day : ದಾರಿ ಬಿಡಿ! ‘ರಂಗರಥ’ ನಿಮ್ಮ ಮಕ್ಕಳಿಗಾಗಿ ಮನೆಗೇ ಬರಲಿದೆ…

|

Updated on: Mar 27, 2021 | 3:14 PM

‘ಮಕ್ಕಳಿಗೆ ಬೇಕಾಗಿರುವುದು, ಸಾಮಾಜಿಕ ಸತ್ಯ ಅಸತ್ಯಗಳನ್ನು ವಿಶ್ಲೇಷಿಸುವ, ಪ್ರೀತಿ ಮತ್ತು ಅನುಕಂಪದ ವ್ಯಕ್ತಿತ್ವವನ್ನು ಬೆಳೆಸುವ, ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ದನಿ ಎತ್ತುವ ಶಿಕ್ಷಣ. ಇವೆಲ್ಲ ಸಾಧ್ಯವಾಗುವುದೇ ರಂಗಭೂಮಿಯಲ್ಲಿ, ರಂಗಶಿಕ್ಷಣದಲ್ಲಿ. ಜಾಗತಿಕವಾಗಿ ಈಗ ಎಲ್ಲೆಡೆ, ಮಕ್ಕಳಿಗೆ ರಂಗಶಿಕ್ಷಣದ ಅವಶ್ಯಕತೆಯ ಬಗ್ಗೆ ಚರ್ಚೆ ಮತ್ತು ಅನುಷ್ಠಾನಗಳು ನಡೆದಿವೆ. ಈಗಿರುವ ಶಿಕ್ಷಣ ಪದ್ಧತಿಯ ಜೊತೆಗೆ, ಮಕ್ಕಳಿಗೆ ರಂಗಶಿಕ್ಷಣವನ್ನು ಕೊಟ್ಟರೆ ಅವರು ಪರಿಪೂರ್ಣ ವ್ಯಕ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ’ ಆಸಿಫ್ ಕ್ಷತ್ರಿಯ.

World Theatre Day : ದಾರಿ ಬಿಡಿ! ರಂಗರಥ ನಿಮ್ಮ ಮಕ್ಕಳಿಗಾಗಿ ಮನೆಗೇ ಬರಲಿದೆ...
‘ರಂಗರಥ‘ದ ಶ್ವೇತಾ ಶ್ರೀನಿವಾಸ್ ಮಕ್ಕಳೊಂದಿಗೆ
Follow us on

ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆತಲ್ಲಿ ದೊಡ್ಡವರಾದ ಮೇಲೆ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತಾರೆ. ನಿಜ. ಆದರೆ, ಈ ‘ಸರಿಯಾದ ಶಿಕ್ಷಣ’ ಎಂದರೆ ಏನು ಎಂಬ ಪ್ರಶ್ನೆಯೇ ನಮ್ಮನ್ನು ಗೊಂದಲಕ್ಕೆ ಈಡುಮಾಡುತ್ತದೆ. ಒಂದು ಕಡೆ ಮಕ್ಕಳಿಗಾಗಿ ಇರುವ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಹತ್ತು ಹಲವು ಆಯಾಮಗಳು, ಹೊಸ ನೀತಿಗಳು, ಆಧುನಿಕ ಪದ್ಧತಿಗಳು ಜಾರಿಯಲ್ಲಿದ್ದರೆ, ಮತ್ತೊಂದು ಕಡೆ ಪ್ರಸ್ತುತ ಶಿಕ್ಷಣ ಪದ್ದತಿಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವೋ ಅಥವಾ ಮುಂದೊಂದು ದಿನ ಈ (ಆರ್ಥಿಕ/ಸಾಮಾಜಿಕ) ವ್ಯವಸ್ಥೆಯನ್ನು ಹೀಗೆಯೇ ಮುನ್ನಡೆಸಿಕೊಂಡು ಹೋಗುವ ಒಂದು ಯಾಂತ್ರಿಕ ಸಾಧನವೋ ಎಂಬ ಅನುಮಾನ ಕಾಡುತ್ತದೆ. ಹೀಗೆ ಕಾಡುವಾಗಲೇ ನಾವು ನಮ್ಮ ಮಕ್ಕಳಿಗೂ ಕಲೆಯ ಬಗ್ಗೆ ಅಭಿರುಚಿ ಬೆಳೆಸಬೇಕು ಎನ್ನುವತ್ತ ಯೋಚಸಲಾರಂಭಿಸುತ್ತೇವೆ.

ಈಗಂತೂ ಮಕ್ಕಳು ಬೆಳೆದು ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು, ಕಂಪ್ಯೂಟರ್ ತಜ್ಞರಾಗಬೇಕು ಹೀಗೆ ಇನ್ನೊಂದು ಮತ್ತೊಂದು ಎಂಬ ಕನಸು ಬಿಟ್ಟರೆ ಪಾಲಕರಿಗೆ ಮತ್ತೇನು ತೋಚುವುದೇ ಇಲ್ಲ. ಈ ತರಹದ ಕನಸುಗಳನ್ನು ನಮ್ಮ ವ್ಯವಸ್ಥೆಯೇ ಬಿತ್ತುತ್ತದೆ. ಹೀಗಾಗಿ, ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ಪರಕೀಯತೆಯ ಮನೋಭಾವ,  ಭ್ರಷ್ಟಾಚಾರ, ಧರ್ಮಾಂಧತೆ ಮತ್ತು ಅಪರಾಧಗಳನ್ನು ಅವಲೋಕಿಸಿದರೆ ಅವುಗಳಲ್ಲಿ ಭಾಗಿಯಾದವರಲ್ಲಿ ಸಾಕಷ್ಟು ಜನ ‘ವಿದ್ಯಾವಂತರು’ ಎನಿಸಿಕೊಂಡವರೇ.

ಹಾಗಾದರೆ, ಅಂತಹ ‘ವಿದ್ಯಾವಂತರಿಗೆ’ ವಿದ್ಯೆ ನಾಟಿಲ್ಲವೇ ? ಸಮಸ್ಯೆ ಇರುವುದು ಇಲ್ಲೇ. ಈಗಿನ ಶಿಕ್ಷಣ ಪದ್ಧತಿಯಲ್ಲಿ ಸಾಮಾನ್ಯವಾಗಿ ಎಲ್ಲೂ, ಶೋಷಣೆ, ಮೂಢನಂಬಿಕೆ, ಲೈಂಗಿಕ ಅಸಮಾನತೆಗಳ ಬಗ್ಗೆ ವಿಚಾರ ವಿಮರ್ಶೆಗಳಿಲ್ಲ. ದೇವರು, ಧರ್ಮ, ಜಾತಿ ಎಂಬ ಮಕ್ಕಳ ತರ್ಕಕ್ಕೆ ನಿಲುಕದ ವಿಷಯಗಳ ಪ್ರಸ್ತಾಪಕ್ಕೆ ಕಡಿವಾಣವಿಲ್ಲ. ಸೌಹಾರ್ದತೆ, ಅರಾಜಕತೆ ಮತ್ತು ಲಂಚಗುಳಿತನದ ವಿರುದ್ದ ದನಿ ಎತ್ತಲು ಪ್ರೇರೇಪಿಸುವ ಪಠ್ಯಗಳಿಲ್ಲ.

ಕಳೆದ ವರ್ಷ ನಡೆದ ರಂಗಶಿಬಿರ

‘ಮಕ್ಕಳಿಗೆ ಬೇಕಾಗಿರುವುದು, ಸಾಮಾಜಿಕ ಸತ್ಯ ಅಸತ್ಯಗಳನ್ನು ವಿಶ್ಲೇಷಿಸುವ, ಪ್ರೀತಿ ಮತ್ತು ಅನುಕಂಪದ ವ್ಯಕ್ತಿತ್ವವನ್ನು ಬೆಳೆಸುವ, ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ದನಿ ಎತ್ತುವ ಶಿಕ್ಷಣ. ಇವೆಲ್ಲ ಸಾಧ್ಯವಾಗುವುದೇ ರಂಗಭೂಮಿಯಲ್ಲಿ, ರಂಗಶಿಕ್ಷಣದಲ್ಲಿ. ಜಾಗತಿಕವಾಗಿ ಈಗ ಎಲ್ಲೆಡೆ, ಮಕ್ಕಳಿಗೆ ರಂಗಶಿಕ್ಷಣದ ಅವಶ್ಯಕತೆಯ ಬಗ್ಗೆ ಚರ್ಚೆ ಮತ್ತು ಅನುಷ್ಠಾನಗಳು ನಡೆದಿವೆ. ಈಗಿರುವ ಶಿಕ್ಷಣ ಪದ್ಧತಿಯ ಜೊತೆಗೆ, ಮಕ್ಕಳಿಗೆ ರಂಗಶಿಕ್ಷಣವನ್ನು ಕೊಟ್ಟರೆ ಅವರು ಪರಿಪೂರ್ಣ ವ್ಯಕ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ’ ಎನ್ನುತ್ತಾರೆ ಸಂಸ್ಥಾಪಕ ಆಸಿಫ್ ಕ್ಷತ್ರಿಯ. ಏಕೆಂದರೆ, ರಂಗಶಿಕ್ಷಣ, ಮಾನವ ಸಂವೇದನೆಗಳಿಗೆ ಸಂಬಂಧಿಸಿದ್ದು. ರಂಗಶಿಕ್ಷಣಕ್ಕೆ ಒಳಪಟ್ಟ ಮಕ್ಕಳು ತಮ್ಮ ಸಾಂಪ್ರದಾಯಿಕ ಶಿಕ್ಷಣದಲ್ಲಿ ಸಫಲತೆಯ ಸೋಪಾನಗಳನ್ನು ಏರುತ್ತಾರೆ. ಅವರಲ್ಲಿ ಸಮಸ್ಯೆಗಳನ್ನು ಗುರುತಿಸುವ ಮತ್ತು ಅವುಗಳನ್ನು ಪರಿಹರಿಸಿಕೊಳ್ಳುವ ಕ್ಷಮತೆ ಅಧಿಕವಾಗುತ್ತದೆ. ಇವುಗಳಲ್ಲದೆ, ರಂಗಶಿಕ್ಷಣವು ಮಕ್ಕಳಲ್ಲಿ ಸ್ವಾವಲಂಬತನ, ಕಲ್ಪನಾ ಶಕ್ತಿ, ಕರುಣೆ, ಸಹಿಷ್ಣುತೆ, ಸಹಕಾರ, ವಾಕ್ಚಾತುರ್ಯ, ಪಾರದರ್ಶಕತೆ, ನಂಬಿಕೆ, ಸೃಜನಶೀಲತೆ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ಜವಾಬ್ದಾರಿ, ತಾಳ್ಮೆ ಇತ್ಯಾದಿ ಸದ್ಗುಣಗಳನ್ನು ಬಿತ್ತುತ್ತದೆ.

ಈ ಹಿನ್ನೆಲೆಯಲ್ಲಿ ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆಯು, ಮಕ್ಕಳ ರಂಗಶಿಕ್ಷಣಕ್ಕೆ ಆದ್ಯತೆ ನೀಡಿ ಕಾಲಕಾಲಕ್ಕೂ ಮಕ್ಕಳಿಗಾಗಿಯೇ ಹಲವು ತೆರನಾದ ಸೃಜನಾತ್ಮಕ ರಂಗತರಬೇತಿ ಶಿಬಿರಗಳನ್ನು, ಕಾರ್ಯಾಗಾರಗಳನ್ನು ಆಯೋಜಿಸಲು ರೂಪುರೇಷೆಗಳನ್ನು ಸಿದ್ಧಗೊಳಿಸುತ್ತಿದೆ. ಬದಲಾವಣೆಯೊಂದಿಗೆ ಬದುಕಬೇಕಾದ ಇಂದಿನ ಅನಿವಾರ್ಯ ಪರಿಸ್ಥಿತಿಯಲ್ಲಿ ರಂಗರಥ ಸಂಸ್ಥೆಯು ಆನ್ಲೈನ್‍ನಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಶೀಘ್ರದಲ್ಲೇ ಪ್ರಾರಂಭಿಸುತ್ತಿದೆ. ಆಸಕ್ತರು ಸಂಪರ್ಕಿಸಬಹುದು.

ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ  ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್, ಸಂಸ್ಥಾಪಕ ನಿರ್ದೇಶಕರು. ಸಂಪರ್ಕ : 8050157443  ಹೆಚ್ಚಿನ ಮಾಹಿತಿಗೆ:  https:www.rangaratha.com 

ಇದನ್ನೂ ಓದಿ : World Theatre Day ; ಕೇಳ್ರಪ್ಪೋ ಕೇಳ್ರಿ ಹೊಸಾ ನಾಟಕ ಬಂದೇತಿ : ‘ಬಲ’ವಂತದ ಆತ್ಮಭರ್ಜರಿ

Published On - 2:57 pm, Sat, 27 March 21