ಖುದ್ದು ಖಾಲಿ ನಿವೇಶನದ ಗಿಡಗಂಟೆ ಸ್ವಚ್ಛಗೊಳಿಸಿದ ಸಚಿವ ಕೃಷ್ಣಭೈರೇಗೌಡ: ಖಾಲಿ ಸೈಟ್ ಸ್ವಚ್ಛಗೊಳಿಸುವ ಗಡುವು ಇಂದಿಗೆ ಮುಕ್ತಾಯ

Edited By:

Updated on: Aug 27, 2026 | 12:11 PM

ಬೆಂಗಳೂರಿನ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟೆ ಹಾಗೂ ತ್ಯಾಜ್ಯ ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ಸ್ವಚ್ಛತಾ ಅಭಿಯಾನ ಆರಂಭಿಸಿದೆ. ದೊಮ್ಮಲೂರು ಲೇಔಟ್‌ನಲ್ಲಿ ಸಚಿವ ಕೃಷ್ಣಭೈರೇಗೌಡ ಅವರ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಮಾಲೀಕರು ಸ್ವಚ್ಛಗೊಳಿಸದ ನಿವೇಶನಗಳನ್ನು ಜಿಬಿಎ ಸಿಬ್ಬಂದಿಯೇ ಸ್ವಚ್ಛಗೊಳಿಸಿ ವೆಚ್ಚವನ್ನು ಮಾಲೀಕರಿಂದಲೇ ವಸೂಲಿ ಮಾಡಲಿದೆ.

ಬೆಂಗಳೂರು, ಆಗಸ್ಟ್ 27: ನಗರದ ಖಾಲಿ ನಿವೇಶನಗಳಲ್ಲಿ ಕಸ-ತ್ಯಾಜ್ಯ ಸಂಗ್ರಹವಾಗುವುದನ್ನು ಹಾಗೂ ಗಿಡಗಂಟೆಗಳು ಬೆಳೆದು ಅನೈರ್ಮಲ್ಯ ಉಂಟಾಗುವುದನ್ನು ತಡೆಯಲು ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದಡಿ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ದೊಮ್ಮಲೂರು ಲೇಔಟ್‌ನಲ್ಲಿ ಸ್ವತಃ ಸ್ಥಳಕ್ಕೆ ತೆರಳಿ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಗಿಡಗಂಟೆಗಳಿಂದ ಆವೃತವಾಗಿದ್ದ ಖಾಲಿ ನಿವೇಶನಗಳನ್ನು ಜೆಸಿಬಿ ಹಾಗೂ ಸಿಬ್ಬಂದಿಯ ನೆರವಿನಿಂದ ಸ್ವಚ್ಛಗೊಳಿಸಲಾಯಿತು.

ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಡುವಂತೆ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಿ ಗಡುವು ನೀಡಲಾಗಿತ್ತು. ಆದರೂ ಸ್ವಚ್ಛಗೊಳಿಸದ ನಿವೇಶನಗಳ ವಿರುದ್ಧ ಇದೀಗ ಜಿಬಿಎ ಕ್ರಮ ಕೈಗೊಳ್ಳುತ್ತಿದೆ. ಮಾಲೀಕರು ನಿರ್ಲಕ್ಷ್ಯ ವಹಿಸಿದರೆ, ಪ್ರಾಧಿಕಾರವೇ ಸ್ವಚ್ಛತಾ ಕಾರ್ಯ ನಡೆಸಿ ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಮಾಲೀಕರಿಂದ ಆಸ್ತಿ ತೆರಿಗೆ ಜತೆ ವಸೂಲಿ ಮಾಡಲಿದೆ. ಸ್ವಚ್ಛತಾ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ದಂಡದ ರೂಪದಲ್ಲಿ ಸೇರಿಸುವ ವ್ಯವಸ್ಥೆ ಜಾರಿಗೆ ತರಲು ಜಿಬಿಎ ಮುಂದಾಗಿದೆ. ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹವಾಗುವುದನ್ನು ತಡೆಯುವುದರ ಜೊತೆಗೆ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವುದು ಅಭಿಯಾನದ ಉದ್ದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us