ಭದ್ರಾ ನೀರು ವಿವಾದ ತಾರಕಕ್ಕೆ: ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಕೆಂಡಾಮಂಡಲ
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭದ್ರಾ ಜಲಾಶಯದ ನೀರು ಬಿಡುಗಡೆ ಕುರಿತು ಶಾಸಕ ಬಿ.ಪಿ. ಹರೀಶ್ ವಿರುದ್ಧ ‘ಮೆಟ್ಟಲ್ಲಿ ಹೊಡೆಯಿರಿ’ ಎಂಬ ಹೇಳಿಕೆ ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹರೀಶ್, ಬ್ಲಾಕ್ ಮಾರ್ಕೆಟ್ ಮಾಡಿ ಸಂಪತ್ತು ಗಳಿಸಿದವರಿಗೆ ಸಂಸ್ಕಾರ ಎಲ್ಲಿಂದ ಬರುತ್ತದೆ ಎಂದು ಮಲ್ಲಿಕಾರ್ಜುನ್ ಕುಟುಂಬದ ಹಿನ್ನೆಲೆ ಕೆದಕಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ, ಸೆಪ್ಟೆಂಬರ್ 9: ಭದ್ರಾ ಜಲಾಶಯದ ನೀರು ಬಿಡುಗಡೆ ವಿಚಾರವಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಸಕ ಬಿ.ಪಿ. ಹರೀಶ್ ನಡುವೆ ತೀವ್ರ ವಾಕ್ಸಮರ ನಡೆದಿದೆ. ಶಾಸಕ ಬಿ.ಪಿ. ಹರೀಶ್ ವಿರುದ್ಧ ಸಚಿವ ಮಲ್ಲಿಕಾರ್ಜುನ್ ‘ಮೆಟ್ಟಲ್ಲಿ ಹೊಡೆಯಿರಿ’ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಈ ವಿವಾದ ಕೆರಳಿದೆ. ಮಲ್ಲಿಕಾರ್ಜುನ್ ಹೇಳಿಕೆಗೆ ಬಿ.ಪಿ. ಹರೀಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ್ ಹೇಳಿಕೆಗೆ ತೊರುಗೇಟು ನೀಡಿದ ಹರೀಶ್, ‘ನಾನು ನಿಮ್ಮಪ್ಪನ ರೀತಿ ಬ್ಲಾಕ್ ಮಾರ್ಕೆಟ್ ಮಾಡಿಲ್ಲ. ಕಳ್ಳತನ ಮಾಡಿದವರಿಗೆ ಸಂಸ್ಕಾರ ಎಲ್ಲಿಂದ ಬರುತ್ತದೆ’ ಎಂದು ತಿರುಗೇಟು ನೀಡಿದ್ದಾರೆ.
43 ವರ್ಷಗಳ ರಾಜಕೀಯ ಅನುಭವವನ್ನು ಉಲ್ಲೇಖಿಸಿದ ಹರೀಶ್, ತಮ್ಮ ರಾಜಕೀಯ ಜೀವನದಲ್ಲಿ ಇಂತಹ ದುಷ್ಟ ಶಕ್ತಿಗಳನ್ನು ಎದುರಿಸುವ ಶಕ್ತಿ ಇದೆ ಎಂದು ತಿಳಿಸಿದ್ದಾರೆ. ಮಂತ್ರಿ ಮಹಾಶಯನಿಗೆ ಸಂಸ್ಕಾರವಿಲ್ಲ, ಏಕೆಂದರೆ ಅವರ ತಂದೆ ಸಕ್ಕರೆ, ಸಿಮೆಂಟ್, ಅಕ್ಕಿ ಬ್ಲಾಕ್ ಮಾರ್ಕೆಟ್ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಬ್ಲಾಕ್ ಮಾರ್ಕೆಟ್ ಮಾಡಿದ ಕಳ್ಳನ ಮಕ್ಕಳಿಗೆ ಸಂಸ್ಕಾರ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
