ಚನ್ನಗಿರಿ ಪೊಲೀಸ್​ ಠಾಣೆ ಮೇಲೆ ದಾಳಿ: ಶಾಂತಿ ಕಾಪಾಡುವಂತೆ DYSP ಕೈಮುಗಿದರೂ ಕೇಳದ ಕಿಡಿಗೇಡಿಗಳು, ಅಸಹಾಯಕರಾದ ಪೊಲೀಸರು

| Updated By: ವಿವೇಕ ಬಿರಾದಾರ

Updated on: May 26, 2024 | 12:51 PM

ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಪೊಲೀಸ್​ ಠಾಣೆ ವ್ಯಾಪ್ತಿಯ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ (30) ಮಟ್ಕಾ ಆಡಿಸುತ್ತಿದ್ದ ಎಂದು ಶುಕ್ರವಾರ ಪೊಲೀಸರು ಠಾಣೆಗೆ ಕರೆ ತಂದಿದ್ದರು. ಪೊಲೀಸರು ಠಾಣೆಗೆ ಕರೆ ತರುತ್ತಿದ್ದಂತೆ, ಕುಸಿದು ಬಿದ್ದಿದ್ದಾನೆ. ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಾಗಿಸಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಮೃತ ಕುಟುಂಬಸ್ಥರು ಪೊಲೀಸ್​ ಠಾಣೆ ಮೇಲೆ ದಾಳಿ ಮಾಡಿದ್ದರು.

ದಾವಣಗೆರೆ ಮೇ 26: ಶುಕ್ರವಾರ (ಮೇ 26) ರಾತ್ರಿ ಚನ್ನಗಿರಿ ಪೊಲೀಸ್​ ಠಾಣೆ (Channgiri Police Station) ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ರಿಕ್ತರ ಮುಂದೆ ಪೊಲೀಸರೇ (Police) ಅಸಹಾಯಕರಾಗಿದ್ದಾರೆ. ಮೃತ ಆದಿಲ್ ಸಂಬಂಧಿಕರು ಚನ್ನಗಿರಿ ಠಾಣೆ ಮೇಲೆ ದಾಳಿ ಮಾಡುವ ಮುನ್ನ, ದಾವಣಗೆರೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (SP) ಉಮಾ ಪ್ರಶಾಂತ್ ಮತ್ತು ಉಪ ಪೊಲೀಸ್​ ವರಿಷ್ಠಾಧಿಕಾರಿ (DYSP) ಪ್ರಶಾಂತ್ ಗಲಾಟೆ ಮಾಡದಂತೆ ಉದ್ರಿಕ್ತರ ಎದುರು ಕೈ ಮುಗಿದು ಮನವಿ ಮಾಡಿದ್ದಾರೆ. ಆದರೂ ಕೂಡ ಅಧಿಕಾರಿಗಳ ಮನವಿಗೆ ಬಗ್ಗದೆ ಕಿಡಿಗೇಡಿಗಳು ಚನ್ನಗಿರಿ ಪೊಲೀಸ್​ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕಿಡಿಗೇಡಿಗಳ ಎದರು ಪೊಲೀಸರು ಅಕ್ಷರಶಃ ಅಸಹಾಯಕರಾಗಿದ್ದರು. ಕಿಡಿಗೇಡಿಗಳ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

“ಗಲಾಟೆ ಮಾಡಬೇಡಿ, ಶಾಂತಿ ಕಾಪಾಡಿ. ಪೊಲೀಸ್​ ಠಾಣೆ ನಿಮ್ಮ ಆಸ್ತಿ” ಎಂದು ಡಿವೈಎಸ್ಪಿ ಪ್ರಶಾಂತ್ ಕೈಮುಗಿದು ಮನವಿ ಮಾಡಿದರೂ, ಕಿಡಿಗೇಡಿಗಳು ಮಾತು ಕೇಳದೆ ಕಲ್ಲು ತೂರಾಟ ಮಾಡಿ, ಪೊಲೀಸ್​ ವಾಹನಗಳನ್ನು ಜಖಂ ಮಾಡಿದ್ದಾರೆ.

ಇದನ್ನೂ ಓದಿ: ಚೆನ್ನಗಿರಿ ಪೊಲೀಸ್​ ಠಾಣೆ ಲಾಕಪ್​ಡತ್​​ ಕೇಸ್​: ಆರೋಗ್ಯದಲ್ಲಿ‌ ಏರುಪೇರು ಆಗಿ ಆದಿಲ್ ಮೃತ; ಪರಮೇಶ್ವರ್​​

ಇನ್ನು ಆಸ್ಪತ್ರೆಗೆ ಭೇಟಿ ನೀಡಿದ್ದ ಎಸ್​ಪಿ ಉಮಾ ಪ್ರಶಾಂತ್ ಮೃತ ಆದಿಲ್​ ಶವ ನೋಡಿ​ ಬಳಿಕ ” ಆದಿಲ್​ ಹೇಗೆ ಮೃತಪಟ್ಟರು ಅಂತ ಆಸ್ಪತ್ರೆಯ ವೈದ್ಯರು ಎಂದು ವರದಿ ಕೊಡುತ್ತಾರೆ. ಮರಣೋತ್ತರ ಪರೀಕ್ಷೆ ಮಾಡದೆ ಏನಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ನಿಮಗೆ ವೈದ್ಯರ ಮೇಲೆ ಭರವಸೆ ಇಲ್ಲ ಅಂದರೆ ನಾವು ಎಲ್ಲಿಗೆ ಬೇಕಾದರೂ ಬರುತ್ತೇವೆ. ನಿಮ್ಮ ಡಿಮ್ಯಾಂಡ್‌ ಏನಿದೆ ಅಂತ ಹೇಳಿ. ದೂರು ಕೊಡಿ ಕ್ರಮ ಕೈಗೊಳ್ಳುತ್ತೇವೆ” ಎಂದು ಮನವಿ ಮಾಡಿಕೊಂಡರು ಕಿಡಿಗೇಡಿಗಳು ಬಗ್ಗಲಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:48 pm, Sun, 26 May 24

Follow us on