ಚಿಕ್ಕಮಗಳೂರಿನಲ್ಲಿ ಮುಂದುವರಿದ ಕಾಡಾನೆಗಳ ಉಪಟಳ: ಮನೆಯ ಮುಂದೆಯೇ ಬೀಡುಬಿಟ್ಟ ಕಾಡಾನೆ ಹಿಂಡು
ಚಿಕ್ಕಮಗಳೂರು ಹಾಸನ ಜಿಲ್ಲೆಯ ಗಡಿಭಾಗವಾಗಿರುವ ಚಿಕನಹಳ್ಳಿ ಗ್ರಾಮದ ಕಾಫಿ ತೋಟದ ಮೂಲಕ ಕಾಡಾನೆಗಳು ಊರಿಗೆ ಎಂಟ್ರಿ ಕೊಡುತ್ತಿದ್ದು, ಜನರು ಭೀತಿಗೊಳಗಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳು ಮನೆ ಮುಂದೆಯೇ ಬೀಡುಬಿಟ್ಟಿದ್ದು, ಜನರು ಹೊರಬರಲೂ ಹೆದರುವಂಥ ವಾತಾವರಣ ಸೃಷ್ಟಿಯಾಗಿದೆ.
ಚಿಕ್ಕಮಗಳೂರು, ಜುಲೈ 23: ಕಾಫಿನಾಡಿನಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಹಾಸನ-ಚಿಕ್ಕಮಗಳೂರು ಗಡಿ ಗ್ರಾಮದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದೆ. ಹಾಸನದ ಚಿಕನಹಳ್ಳಿ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಭಾಗಕ್ಕೆ ಕಾಡಾನೆಗಳು ಸಂಚಾರ ಮಾಡುತ್ತಿದ್ದು, ಮನೆಯ ಮುಂಭಾಗದಲ್ಲೇ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಅಲ್ಲದೆ, ಕಾಫಿತೋಟದಲ್ಲಿಯೂ ಸಂಚರಿಸುತ್ತಿವೆ. ಗೋಣಿಬೀಡು ಹೋಬಳಿಯ ಹತ್ತಾರು ಗ್ರಾಮದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾರ್ ಬೈಲು, ಬಾರದಹಳ್ಳಿ, ಮಾಕೋನಹಳ್ಳಿ, ಹಳಸೆ, ಕಲ್ಲುಗುಡ್ಡ, ಚಟ್ಟನಹಳ್ಳಿ ಭಾಗದಲ್ಲಿ ಸಂಚಾರ ಮಾಡುತ್ತಿದ್ದು, ಜನರು ಆತಂಕಿತರಾಗಿದ್ದಾರೆ.

