ಕಾಂಗ್ರೆಸ್​ನಲ್ಲಿ ಮಹತ್ವದ ಬೆಳವಣಿಗೆ: ಉಸ್ತುವಾರಿ ಬೆಂಗಳೂರಿಗೆ ದೌಡು, ಸಚಿವ ಸಂಪುಟಕ್ಕೆ ಸರ್ಜರಿ?

|

Updated on: Aug 04, 2024 | 3:20 PM

ಹಗರಣ ಆರೋಪದಲ್ಲಿ ಸಿಲುಕಿಕೊಂಡು ಸಿದ್ದರಾಮಯ್ಯ ಸರ್ಕಾರ ಸಿಲುಕಿ ಒದ್ದಾಡುತ್ತಿದೆ. ಇದರ ಮಧ್ಯೆ ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಹೌದು...ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆದಿರುವ ವಿದ್ಯಮಾನಗಳ ನಡುವೆಯೇ ಸಂಪುಟಕ್ಕೆ ಪುಟ್ಟದೊಂದು ಸರ್ಜರಿಯಾಗುವ ಸಾಧ್ಯತೆಗಳು ಮೂಡಿವೆ. ಇದಕ್ಕೆ ಪೂರಕವೆಂಬಂತೆ ಹೈಕಮಾಂಡ್ ನಾಯಕರು​ ಸಚಿವರ ಜೊತೆ ಸಭೆ ಮಾಡಲು ಬೆಂಗಳೂರಿಗೆ ದೌಡಾಯಿಸಿದ್ದಾರೆ.

ಬೆಂಗಳೂರು, (ಆ.04): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆದಿರುವ ವಿದ್ಯಮಾನಗಳ ನಡುವೆಯೇ ಸಂಪುಟ ಪುನಾರಚನೆ ಸುದ್ದಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ರಾಜ್ಯದ ಸಚಿವರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಪಡೆದುಕೊಂಡಿರುವ ಆಂತರಿಕ ವರದಿ. ಖಾಸಗಿ ಸಂಸ್ಥೆಯೊಂದರಿಂದ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಸಚಿವರ ಕಾರ್ಯವೈಖರಿ ಹಾಗೂ ಸಾಧನೆ ಕುರಿತು ವರದಿಯನ್ನು ಪಡೆದಿದೆ. ಈ ವರದಿಯ ಪ್ರಕಾರ ಸುಮಾರು 10 ಸಚಿವರು ನಿರೀಕ್ಷಿತ ಸಾಧನೆ ತೋರಿಲ್ಲ. ಇದರಿಂದ ಸಾರ್ವಜನಿಕ ವಲಯದಲ್ಲಿ ರಾಜ್ಯ ಸಚಿವ ಸಂಪುಟದ ಇಮೇಜ್ ಉತ್ತಮವಾಗಿಲ್ಲ. ಇದನ್ನು ಸರಿಪಡಿಸಿಕೊಳ್ಳಲು ಸಾಧನೆ ತೋರದ ಸಚಿವರ ಪೈಕಿ ಕನಿಷ್ಠ 4-5 ಸಚಿವರ ಬದಲಾವಣೆ ಮಾಡಬೇಕು ಎಂದು ಶಿಫಾರಸು ಮಾಡಿದೆ. ಇದರ ಆಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಒಂದೆರಡು ತಿಂಗಳೊಳಗೆ ಸಂಪುಟಕ್ಕೆ ಪುಟ್ಟ ಸರ್ಜರಿ ಮಾಡುವಂತೆ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡುವ ಸಾಧ್ಯತೆಯಿದ್ದು, ಈಗಾಗಲೇ ಇಂತಹದೊಂದು ಸುಳಿವನ್ನು ರಾಜ್ಯ ನಾಯಕತ್ವಕ್ಕೆ ನೀಡಲಾಗಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಇದರ ಮಧ್ಯೆ ಕೆಸಿ ವೇಣುಗೋಪಾಲ್ ಹಾಗೂ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಚಿವರ ಸಭೆ ಮಾಡಲು ಇಂದು (ಆಗಸ್ಟ್ 04) ಬೆಂಗಳೂರಿಗೆ ದೌಡಾಯಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಣದೀಪ್ ಸುರ್ಜೇವಾಲ ಅವರನ್ನು ಸ್ವಾಗತಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ಸ್ವಾಗತಿಸಿದ್ದಾರೆ.

ಸಚಿವರ ಜೊತೆ ವೇಣುಗೋಪಾಲ್, ಸುರ್ಜೇವಾಲ ಸಭೆ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಜೆಂಡಾ ಏನೆಂದು ಗೊತ್ತಿಲ್ಲ, ಆದ್ರೆ ಎಲ್ಲ ಸಚಿವರನ್ನು ಕರೆದಿದ್ದಾರೆ. ಡಿಸಿಎಂ ನೇತೃತ್ವದಲ್ಲಿ ಶೋಕಾಸ್ ನೋಟಿಸ್ ಹಿಂಪಡೆಯಿರಿ ಎಂದು ಮನವಿ ಮಾಡಲಾಗಿತ್ತು. ಈ ಬೆಳವಣಿಗೆಯ ಬಗ್ಗೆ ಚರ್ಚೆ ಮಾಡುವುದಕ್ಕೆ ಬರುತ್ತಿರಬಹುದು. ಮುಂದೆ ಯಾವ ಕಾರ್ಯಕ್ರಮ ರೂಪಿಸಬಹುದು ಎಂದು ಚರ್ಚಿಸಬಹುದು. ಇಲ್ಲ ಮಧುಸೂದನ್ ಮಿಸ್ತ್ರಿ ಅವರ ವರದಿಯ ಅಂಶವೂ ಇರಬಹುದು . ಖಾತೆ ಬದಲಾವಣೆ ಹಾಗೂ ಪುನಾರಚನೆ ಹೈಕಮಾಂಡ್ ಮಾಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Follow us on