
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ದರ್ಶನ್ಗೆ ಸಿಕ್ಕಿದ್ದ ಜಾಮೀನು ಕಳೆದ ವರ್ಷ ಆಗಸ್ಟ್ನಲ್ಲಿ ರದ್ದಾಗಿ ಅವರು ಮತ್ತೆ ಜೈಲು ಸೇರಿದ್ದು, ಆಗಿನಿಂದ ಈಗಿನ ವರೆಗೆ ಜೈಲಿನಲ್ಲಿದ್ದಾರೆ. ಇನ್ನೂ ಒಂದು ವರ್ಷ ಅವರು ಜಾಮೀನಿಗೆ ಅರ್ಜಿ ಸಹ ಹಾಕುವಂತಿಲ್ಲ. ಕುಟುಂಬವನ್ನು ಆಗಾಗ್ಗೆ ಭೇಟಿ ಮಾಡುತ್ತಿರುತ್ತಾರಾದರೂ ಅದು ಖಾಸಗಿ ಭೇಟಿ ಅಲ್ಲ, ಬದಲಿಗೆ ಪೊಲೀಸರ ಬೆಂಗಾವಲಿನಲ್ಲಿ ಸರಳುಗಳ ಆಚೆ-ಈಚೆ ನಿಂತು ನೋಡುವುದಷ್ಟೆ ಆಗಿತ್ತು. ಆದರೆ ಇಂದು (ಮೇ 19) ದರ್ಶನ್ ಸುಮಾರು ಹತ್ತು ತಿಂಗಳ ಬಳಿಕ ತಮ್ಮ ಕುಟುಂಬವನ್ನು ಮುಖಾ-ಮುಖಿ ಭೇಟಿ ಆಗಿದ್ದಾರೆ.
ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ವಿವಾಹ ವಾರ್ಷಿಕೋತ್ಸವ ಇಂದು (ಮೇ 19). ಹಾಗಾಗಿ ವಿಜಯಲಕ್ಷ್ಮಿ ಅವರು ಡಿಜಿಪಿ ಅಲೋಕ್ ಕುಮಾರ್ ಅವರನ್ನು ಭೇಟಿಯಾಗಿ, ತಮಗೆ ದರ್ಶನ್ ಅವರ ಮುಖಾಮುಖಿ ಭೇಟಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದರು. ನಟ ದರ್ಶನ್ ಸಹ ತಮ್ಮ ಕುಟುಂಬವನ್ನು ಮುಖಾ-ಮುಖಿ ಭೇಟಿಗೆ ಅವಕಾಶ ಕೊಡಬೇಕು ಎಂದು ಜೈಲಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಜೈಲಧಿಕಾರಿಗಳು ಮುಖಾ-ಮುಖಿ ಭೇಟಿಗೆ ಅವಕಾಶ ನೀಡಿದ್ದು, ಅರ್ಧ ಗಂಟೆ ಕಾಲಾವಕಾಶವನ್ನು ನೀಡಿದ್ದಾರೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಸುಳ್ಳು ಸಾಕ್ಷ್ಯ ಆರೋಪಕ್ಕೆ ಎಸ್ಪಿಪಿ ಪ್ರಸನ್ನ ತಿರುಗೇಟು
ದರ್ಶನ್ ಇರುವ ಜೈಲು ಕೊಠಡಿಯಲ್ಲಿಯೇ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಅವರು ದರ್ಶನ್ ಅನ್ನು ಭೇಟಿ ಆಗಿದ್ದಾರೆ. ಸುಮಾರು ಅರ್ಧ ಗಂಟೆ ಸಮಯವನ್ನು ನಟ ದರ್ಶನ್ ಅವರು ಕುಟುಂಬದ ಜೊತೆಗೆ ಕಳೆದಿದ್ದಾರೆ. ಜಾಮೀನು ರದ್ದಾಗುವ ಮುಂಚೆ ಕುಟುಂಬದ ಜೊತೆಗಿದ್ದ ದರ್ಶನ್ ಈಗ ಹತ್ತು ತಿಂಗಳ ಬಳಿಕ ಮೊದಲ ಬಾರಿಗೆ ಮಗ ಹಾಗೂ ಪತ್ನಿಯ ತಬ್ಬಿ ಮಾತನಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Tue, 19 May 26