‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
ಹಿಂಡಲಗಾ ಜೈಲಿನ ಅಧಿಕಾರಿಗಳು ವೇಶ್ಯಾವಾಟಿಕೆ ಮತ್ತು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಮಾಜಿ ಕೈದಿ ಸುರೇಶ್ ಅಲಿಯಾಸ್ ಸಾಯಿ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಹಣ ಪಡೆದು ಮೊಬೈಲ್, ಗಾಂಜಾ, ಸಿಮ್, ಮದ್ಯ ಹಾಗೂ ಐಷಾರಾಮಿ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದಿರುವ ಕೈದಿ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳನ್ನು ತನ್ನ ಬಳಿ ಇರುವುದಾಗಿ ಹೇಳಿಕೊಂಡಿದ್ದಾನೆ.
ಬೆಳಗಾವಿ, ಆಗಸ್ಟ್ 20: ಬೆಳಗಾವಿಯ ಹಿಂಡಲಗಾ ಜೈಲಿನ ಅಧಿಕಾರಿಗಳ ವಿರುದ್ಧ ಮಾಜಿ ಕೈದಿಯೊಬ್ಬ ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದ್ದಾನೆ. ತುಮಕೂರಿನ ಸುರೇಶ್ ಅಲಿಯಾಸ್ ಸಾಯಿ ಕುಮಾರ್ ಎಂಬಾತ, ಜೈಲಿನೊಳಗೆ ಅಧಿಕಾರಿಗಳೇ ವೇಶ್ಯಾವಾಟಿಕೆ, ಮೊಬೈಲ್, ಗಾಂಜಾ ಮತ್ತು ಮದ್ಯದ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾನೆ. ಹಣ ನೀಡಿದರೆ ಜೈಲಿನೊಳಗೆ ಐಷಾರಾಮಿ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ. ಈ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳು ತನ್ನ ಬಳಿ ಇದೆ ಎಂದು ಸುರೇಶ್ ಅಲಿಯಾಸ್ ಸಾಯಿ ಕುಮಾರ್ ಹೇಳಿದ್ದಾನೆ.
ಜೈಲಿನೊಳಗೆ ನಡೆಯುತ್ತಿದ್ದ ಗಾಂಜಾ ಮತ್ತು ಮೊಬೈಲ್ ಬಳಕೆಯ ಬಗ್ಗೆ ಸುರೇಶ್ ಈ ಹಿಂದೆ ಕೂಡ ಹಲವು ಬಾರಿ ಮಾಧ್ಯಮಗಳ ಮೂಲಕ ಧ್ವನಿ ಎತ್ತಿದ್ದ. ಜೈಲಿನೊಳಗೆ ಕೈದಿಗಳು ಪ್ರವೇಶಿಸುವಾಗ ಕಠಿಣ ತಪಾಸಣೆ ನಡೆಸಿದರೂ, ಮೊಬೈಲ್ ಫೋನ್ಗಳು ಹೇಗೆ ಲಭ್ಯವಾಗುತ್ತವೆ ಎಂಬುದು ಪ್ರಶ್ನಾರ್ಹ. ಜೈಲು ಅಧಿಕಾರಿಗಳೇ ಈ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಮತ್ತು ಹಣಕ್ಕಾಗಿ ಇಂತಹ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

