ಸಿದ್ದರಾಮಯ್ಯ ಸ್ಟ್ರಾಂಗ್ ಇದ್ರೆ ಕಾಂಗ್ರೆಸ್ ಪಕ್ಷವೂ ಸ್ಟ್ರಾಂಗ್, ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
‘ಸಿದ್ದರಾಮಯ್ಯ ಸ್ಟ್ರಾಂಗ್ ಆಗಿದ್ದರೆ ಕಾಂಗ್ರೆಸ್ ಪಕ್ಷವೂ ಸ್ಟ್ರಾಂಗ್ ಆಗಿರುತ್ತದೆ, ವೀಕ್ ಆದರೆ ಪಕ್ಷವೂ ವೀಕ್ ಆಗುತ್ತದೆ’ ಎಂದು ಕೆಎನ್ ರಾಜಣ್ಣ ತುಮಕೂರಿನ ಮಧುಗಿರಿಯಲ್ಲಿ ಹೇಳಿದ್ದಾರೆ. ಅಹಿಂದ, ಜಾತಿ ಆಧಾರಿತ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರನ್ನು ನೋಡಿ ವಕ್ಕಲಿಗರು ವೋಟ್ ಹಾಕುತ್ತಾರೆಯೇ ಅಥವಾ ದೇವೇಗೌಡರನ್ನೇ ನಂಬುತ್ತಾರೆಯೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.
ತುಮಕೂರು, ಸೆಪ್ಟೆಂಬರ್ 18: ತುಮಕೂರಿನ ಮಧುಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಸಿದ್ದರಾಮಯ್ಯ ಬಲವಾಗಿದ್ದರೆ ಕಾಂಗ್ರೆಸ್ ಪಕ್ಷವೂ ಬಲವಾಗಿರುತ್ತದೆ. ಅವರು ದುರ್ಬಲರಾದರೆ ಪಕ್ಷವೂ ದುರ್ಬಲಗೊಳ್ಳುತ್ತದೆ ಎಂದು ರಾಜಣ್ಣ ಪ್ರತಿಪಾದಿಸಿದ್ದಾರೆ. ಸಿದ್ದರಾಮಯ್ಯನವರು ಅಹಿಂದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಮತಗಳನ್ನು ತಂದುಕೊಡುತ್ತಾರೆ. ಇದೇ ರೀತಿ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಜಾತಿ ಆಧಾರದ ಮೇಲೆ ಬಿಜೆಪಿಗೆ, ಹಾಗೂ ಹೆಚ್ಡಿ ದೇವೇಗೌಡರು ಜೆಡಿಎಸ್ ಪಕ್ಷಕ್ಕೆ ತಮ್ಮ ಜಾತಿಯ ಮತಗಳನ್ನು ತರುತ್ತಾರೆ ಎಂದು ರಾಜಣ್ಣ ವಿಶ್ಲೇಷಿಸಿದ್ದಾರೆ. ರಾಜ್ಯದಲ್ಲಿ ಈ ಮೂವರು ನಾಯಕರೇ ಜಾತಿ ಆಧಾರದ ಮೇಲೆ ಮತಗಳನ್ನು ಸೆಳೆಯುವವರು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಸಿಎಂ ಡಿಕೆ ಶಿವಕುಮಾರ್ ಅವರನ್ನು ನೋಡಿ ವಕ್ಕಲಿಗ ಸಮುದಾಯದವರು ಮತ ಹಾಕುತ್ತಾರೆಯೇ ಎಂಬ ಪ್ರಶ್ನೆಯನ್ನೂ ರಾಜಣ್ಣ ಮುಂದಿಟ್ಟಿದ್ದಾರೆ. ದೇವೇಗೌಡರನ್ನೇ ನೋಡಿ ವಕ್ಕಲಿಗರು ಮತ ಹಾಕುತ್ತಾರೆ. ಈಗೇನೋ ಮುಖ್ಯಮಂತ್ರಿಯಾಗುವವರು ನಮ್ಮವರು ಎಂಬ ಭಾವನೆಯಿಂದ ವೊಕ್ಕಲಿಗರ ಶೇ 5 ಹೆಚ್ಚುವರಿ ಮತ ತರಬಹುದು. ಆದರೆ ಗೆಲ್ಲುವಷ್ಟು ಮತ ಸಿಗುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
