ಜೈ ಶ್ರೀರಾಮ್ ಎನ್ನುತ್ತಾ ಬೈಕ್ ಮೂಲಕ ಅಯೋಧ್ಯೆಯತ್ತ ಹೊರಟೇಬಿಟ್ಟರು ಧಾರವಾಡದ ಆ ನಾಲ್ಕು ಮಂದಿ!

Edited By: ಸಾಧು ಶ್ರೀನಾಥ್​

Updated on: Jan 18, 2024 | 4:12 PM

ಶ್ರೀರಾಮನ ಮಂದಿರ ಉದ್ಘಾಟನೆಯಾಗುತ್ತಿದ್ದು, ಅವರ ಭಕ್ತರಾದ ತಾವು ದರ್ಶನ ಪಡೆಯಲು ಬೈಕ್ ಮೂಲಕ ಹೋಗಲು ಯೋಜಿಸಿ ಹೊರಟಿಸಿದ್ದೇವೆ ಅಂದರು. ಈ ಪ್ರವಾಸಕ್ಕೆ ಸುಮಾರು 2 ಲಕ್ಷ ವೆಚ್ಚ ಬರಲಿದೆ, ದೇವರ ದರ್ಶನದ ಎದುರು ಹಣ ದೊಡ್ಡದಲ್ಲ ಅನ್ನೋ ಸವಾರರು, ಇದೊಂದು ಸದಾವಕಾಶ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರೋ ಶ್ರೀರಾಮ ಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಬಗೆ ಬಗೆಯ ಕಾರ್ಯಕ್ರಮಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಅನೇಕರು ಅಯೋಧ್ಯೆಗೆ ಹೋಗಲು ಕೂಡ ನಿರ್ಧರಿಸಿದ್ದಾರೆ. ಅವತ್ತು ಅಯೋಧ್ಯೆಗೆ ಬಾರದಂತೆ ರಾಮತೀರ್ಥ ಟ್ರಸ್ಟ್​ನವರು ಹೇಳುತ್ತಿದ್ದರೂ ರಾಮನ ಭಕ್ತರು ಅದನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಇಂಥ ಯುವ ಭಕ್ತರು ಇದೀಗ ಬೈಕ್ ಮೇಲೆ ಧಾರವಾಡದಿಂದ ಅಯೋಧ್ಯೆಗೆ ತೆರಳಿದ್ದಾರೆ.

ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮನ ಮಂದಿರ ಉದ್ಘಾಟನೆ ಹಾಗೂ ನಂತರದಲ್ಲಿ ಸಾರ್ವಜನಿಕರಿಗೆ ಶ್ರೀರಾಮನ ದರ್ಶನಕ್ಕೂ ಅವಕಾಶಕಲ್ಪಿಸಿರುವ ಹಿನ್ನೆಲೆಯಲ್ಲಿ ಧಾರವಾಡದಿಂದ ನಾಲ್ವರು ಯುವಕರು ತಮ್ಮ ಎರಡು ಬೈಕ್‌ಗಳ ಮೂಲಕ ಶ್ರೀರಾಮನ ದರ್ಶನದ ಸಾಹಸಕ್ಕೆ ಕೈ ಹಾಕಿದ್ದಾರೆ. ಧಾರವಾಡದ ದರ್ಶನ ಪವಾರ್, ದರ್ಶನ್ ಭಾವೆ, ಬಾಲರಾಜ ದೊಡಮನಿ ಹಾಗೂ ಲಕ್ಷ್ಮಣ ಹಂಚಿನಮನಿ ಎಂಬುವರು ಶ್ರೀರಾಮನ ಮೇಲಿನ ಭಕ್ತಿ ಮೆರೆಯಲು ತಮ್ಮ ಪ್ರಯಾಣವನ್ನು ಶುರು ಮಾಡಿದ್ದಾರೆ. ಈ ವೇಳೆ ನಗರದ ಅನೇಕ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಬೆಳಗಾವಿ ಮೂಲಕ ಬೈಕ್ ಮೇಲೆ ಅಯೋಧ್ಯಾ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಅವರ ಗೆಳೆಯರು ಅವರಿಗೆ ಶುಭ ಕೋರಿದ್ದಾರೆ.

Also Read: ಧಾರವಾಡ ಯುವಕನ ಕೈಯಲ್ಲಿ ಅರಳಿದ ರಾಮಲಲ್ಲಾ ವಿಗ್ರಹ, ಗಮನ ಸೆಳೆಯುತ್ತಿರೋ ಮಣ್ಣಿನ ಮೂರ್ತಿ ಇಲ್ಲಿದೆ

ಸುಮಾರು 1800 ಕಿ.ಮೀ. ದೂರವಿರುವ ದೂರದ ಅಯುಧ್ಯೆಗೆ ಜೈ ಶ್ರೀರಾಮ ಎಂದು ಘೋಷಣೆ ಕೂಗುವ ಮೂಲಕ ಹೊರಟಿರುವ ಯುವಕರು ಜ. 21ರಂದು ತಲುಪುವ ಯೋಜನೆ ಹೊಂದಿದ್ದಾರೆ. ರಾಯಲ್ಸ್ ಎನ್​ಫೀಲ್ಡ್ ಹಾಗೂ ಬೆನಾಲಿ ಎಂಬ ಬೈಕ್‌ ಗಳ ಮೂಲಕ ಅಯೋಧ್ಯೆಗೆ ಹೊರಟಿದ್ದಾರೆ. ಶ್ರೀರಾಮನ ಮಂದಿರ ಉದ್ಘಾಟನೆಯಾಗುತ್ತಿದ್ದು, ಅವರ ಭಕ್ತರಾದ ತಾವು ದರ್ಶನ ಪಡೆಯಲು ಬೈಕ್ ಮೂಲಕ ಹೋಗಲು ಯೋಜಿಸಿ ಹೊರಟಿಸಿದ್ದೇವೆ ಅಂದರು. ಈ ಪ್ರವಾಸಕ್ಕೆ ಸುಮಾರು 2 ಲಕ್ಷ ವೆಚ್ಚ ಬರಲಿದೆ, ದೇವರ ದರ್ಶನದ ಎದುರು ಹಣ ದೊಡ್ಡದಲ್ಲ ಅನ್ನೋ ಸವಾರರು, ಇದೊಂದು ಸದಾವಕಾಶ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಬಳಿಕ ಕೆಲ ದಿನಗಳ ಕಾಲ ಅಲ್ಲಿಯೇ ತಂಗಲಿರೋ ಈ ಯುವಕರು ಸುತ್ತಮುತ್ತಲಿನ ವಿವಿಧ ಯಾತ್ರಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಒಟ್ಟಿನಲ್ಲಿ ಅಯೋಧ್ಯೆಯಲ್ಲಿ ನಡೆಯಲಿರೋ ರಾಮಮಂದಿರ ಉದ್ಘಾಟನೆ ತಮ್ಮ ಪಾಲಿನ ದೊಡ್ಡ ಕೆಲಸ ಅಂದುಕೊಂಡಿರೋ ಅನೇಕರು ಶ್ರೀರಾಮನ ಮೇಲಿನ ತಮ್ಮ ಭಕ್ತಿಯನ್ನು ವಿವಿಧ ಬಗೆಯಲ್ಲಿ ತೋರಿಸುತ್ತಿರೋದು ವಿಶೇಷವೇ ಸರಿ.

ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More