Assembly Session; ಅಗತ್ಯ ಬಿದ್ದರೆ ಗುರುಮಠಕಲ ಸಿಪಿಐನನ್ನು ಕೆಲಸದಿಂದ ಡಿಸ್ಮಿಸ್ ಮಾಡುತ್ತೇನೆ: ಜಿ ಪರಮೇಶ್ವರ್
ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನೊಬ್ಬ ನಡೆಸಿರುವ ಪೋಕ್ಸೋ ಅಡಿಯ ಪ್ರಕರಣವನ್ನು ಬಹಳ ಹಗುರವಾಗಿ ಪರಿಗಣಸಿರುವ ಸಿಪಿಐ ಸಂಜೀವ ಕುಮಾರ್ ಗುರುಮಠಕಲ್ ನಲ್ಲಿ ಸುಮಾರು 90ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳ ಮಾಲೀಕರಿಂದ ಪ್ರತಿ ತಿಂಗಳು ತಲಾ ₹ 15,000 ವಸೂಲಿ ಮಾಡುತ್ತಾನಂತೆ. ಏನಿದು ದುರ್ವ್ಯವಹಾರ ಅಂತ ಶಾಸಕ ಪ್ರಶ್ನಿಸಿದರೆ, ಇದೇನು ನಂಗೊಬ್ಬನಿಗೆ ಸೇರುತ್ತಾ, ಯಾರ್ಯಾರ ಪಾಲಿರುತ್ತದೆ ಅಂತ ಗೊತ್ತಿಲ್ಲವೇ ಅಂತ ದಾರ್ಷ್ಟ್ಯತೆ ಪ್ರದರ್ಶಿಸುತ್ತಾನಂತೆ!
ಬೆಂಗಳೂರು: ಗುರುಮಠಕಲ ಕ್ಷೇತ್ರದ ಶಾಸಕ ಶರಣಗೌಡ ಕಂದ್ಕೂರ್ ಇಂದು ಸದನಲ್ಲಿ ಮತ್ತೊಮ್ಮೆ ಗುರುಮಠಕಲ್ ಸರ್ಕಲ್ ಇನ್ಸ್ ಪೆಕ್ಟರ್ ಸಂಜೀವ ಕುಮಾರನ ದರ್ಪ, ದಾರ್ಷ್ಟ್ಯತೆ, ಸಂವೇದನೆಹೀನತೆ ಮತ್ತು ಶಾಸಕನ ಮಾತಿಗೂ ಕಿವಿಗೊಡದ ದುರ್ವರ್ತನೆ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಮತ್ತು ಸದನದ ಗಮನಕ್ಕೆ ಮತ್ತೊಮ್ಮೆ ತಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ವಿಷಯದ ಮೇಲೆ ಒತ್ತಡ ಹೇರಿದ ಬಳಿಕ ಉತ್ತರ ನೀಡಲು ಎದ್ದು ನಿಂತ ಸಚಿವರು, ಸಂಜೀವ ಕುಮಾರನ ವರ್ತನೆಯಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ ಕಂದ್ಕೂರ್ ಗೆ, ಯಕಃಶ್ಚಿತ್ ಒಬ್ಬ ಅಧಿಕಾರಿಯ ದರ್ಪದ ವರ್ತನೆಗೆ ನೀವು ರಾಜೀನಾಮೆ ಸಲ್ಲಿಸುವ ಅಗತ್ಯ ಇಲ್ಲ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು, ಸಂಜೀವ ಕುಮಾರ್ ಗೆ ಶಿಸ್ತು ನಡಾವಳಿ ಅಡಿಯಲ್ಲಿ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಮತ್ತು ಇನ್ಸ್ ಪೆಕ್ಟರ್ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಸಹ ಕೇಳಿದ್ದೇನೆ, ನೋಟೀಸ್ ಉತ್ತರ ಸಿಕ್ಕ ಬಳಿಕ ಕ್ರಮ ಜರುಗಿಲಾಗುವುದು ಎಂದು ಹೇಳಿದರು. ಅವರನ್ನು ಸಸ್ಪೆಂಡ್ ಮಾಡಿ ಎಂದು ಜೆಡಿಎಸ್ ಇತರ ಶಾಸಕರು ಹೇಳಿದಾಗ, ವರದಿಯನ್ನು ನೋಡಿದ ಮೇಲೆ ಸಸ್ಪೆಂಡ್ ಇಲ್ಲವೇ ಕೆಲಸದಿಂದ ಡಿಸ್ಮಿಸ್ ಕೂಡ ಹಿಂಜರಿಯುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣನಿಂದ ಪಕ್ಷಕ್ಕೆ ಕಳಂಕ, ಕೂಡಲೇ ಅಮಾನತು ಮಾಡುವಂತೆ ದೇವೇಗೌಡರಿಗೆ ಶರಣಗೌಡ ಕಂದ್ಕೂರ್ ಪತ್ರ