AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್

RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್

ಝಾಹಿರ್ ಯೂಸುಫ್
|

Updated on: May 04, 2025 | 9:58 AM

IPL 2025 RCB vs CSK: ಐಪಿಎಲ್​ನ 52ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡ ಸೋಲನುಭವಿಸಿದೆ. ಈ ಸೋಲಿಗೆ ಮುಖ್ಯ ಕಾರಣ ಸಿಎಸ್​ಕೆ ಬ್ಯಾಟರ್​ಗಳು ಮಾಡಿಕೊಂಡ ಎಡವಟ್ಟು. ಅಂದರೆ ಡೆವಾಲ್ಡ್ ಬ್ರೆವಿಸ್ ಎಲ್​ಬಿಡಬ್ಲ್ಯೂ ಆಗಿದ್ದರೂ, ಡಿಆರ್​ಎಸ್ ತೆಗೆದುಕೊಳ್ಳದೇ ರನ್​ ಕದಿಯಲು ಓಡಿದ್ದು, ಸಿಎಸ್​ಕೆ ಪಾಲಿಗೆ ಮುಳುವಾಯಿತು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 52ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡ 20 ಓವರ್​ಗಳಲ್ಲಿ 213 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 16.2 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ 22 ಎಸೆತಗಳಲ್ಲಿ ಸಿಎಸ್​ಕೆ ತಂಡಕ್ಕೆ ಕೇವಲ 42 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ಕಣಕ್ಕಿಳಿದ ಡೆವಾಲ್ಡ್ ಬ್ರೆವಿಸ್ ಲುಂಗಿ ಎನ್​ಗಿಡಿ ಎಸೆತದಲ್ಲಿ ಎಲ್​ಬಿ ಆಗಿದ್ದರು. ಆರ್​ಸಿಬಿ ಆಟಗಾರರ ಮನವಿಗೆ ಅಂಪೈರ್ ಎಲ್​ಬಿಡಬ್ಲ್ಯೂ ಔಟ್ ನೀಡಿದರು. ಆದರೆ ನಿಯಮ ಗೊತ್ತಿಲ್ಲದೆ ಬ್ಯಾಟರ್​ಗಳು ರನ್ ಕದಿಯಲು ಓಡಿದ್ದು ಸಿಎಸ್​ಕೆ ಪಾಲಿಗೆ ದುಬಾರಿಯಾಯಿತು.

ಐಪಿಎಲ್​ ನಿಯಮದ ಪ್ರಕಾರ, ಎಲ್​ಬಿಡಬ್ಲ್ಯೂ ಆದರೆ 15 ಸೆಕೆಂಡ್​ಗಳ ಒಳಗೆ ಡಿಆರ್​ಎಸ್​ಗೆ ಮನವಿ ಸಲ್ಲಿಸಬೇಕು. ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ, ಮನವಿಯನ್ನು ತಿರಸ್ಕರಿಸಲಾಗುತ್ತದೆ.

ಆದರೆ ಈ ನಿಯಮದ ಬಗ್ಗೆ ಅರಿವಿಲ್ಲದೆ, ಡೆವಾಲ್ಡ್ ಬ್ರೆವಿಸ್ ಹಾಗೂ ರವೀಂದ್ರ ಜಡೇಜಾ 2 ರನ್ ಓಡಿದ್ದಾರೆ. ಅದರಲ್ಲೂ ಒಂದು ರನ್ ಕಲೆಹಾಕಿದ ಬಳಿಕ ಡಿಆರ್​ಎಸ್​ಗೆ ಮನವಿ ಸಲ್ಲಿಸಿದ್ದರೂ ಬ್ರೆವಿಸ್​ ಅವರಿಗೆ ರಿವ್ಯೂ ಲಭಿಸುತ್ತಿತ್ತು.

ಇದರ ಪರಿಕಲ್ಪನೆಯೇ ಇಲ್ಲದೆ, ರವೀಂದ್ರ ಜಡೇಜಾ ಡೆವಾಲ್ಡ್ ಬ್ರೆವಿಸ್ ಅವರನ್ನು 2ನೇ ರನ್​ಗಾಗಿ ಕರೆದಿದ್ದಾರೆ. ಇತ್ತ ಕಡೆಯಿಂದ ಸ್ಟ್ರೈಕ್​ನತ್ತ ಓಡಿದ ಬ್ರೆವಿಸ್ ಆ ಬಳಿಕ ಜಡೇಜಾ ಜೊತೆ ಚರ್ಚಿಸಿ ಡಿಆರ್​ಎಸ್​ಗೆ ಮನವಿ ಸಲ್ಲಿಸಿದ್ದಾರೆ.

ಅಷ್ಟರಲ್ಲಾಗಲೇ ಟೈಮರ್ 25 ಸೆಕೆಂಡ್​ಗಳನ್ನು ದಾಟಿತ್ತು. ಅಂದರೆ 15 ಸೆಕೆಂಡ್​ಗಳಲ್ಲಿ ತೆಗೆದುಕೊಳ್ಳಬೇಕಾದ ರಿವ್ಯೂ ಅನ್ನು ಬ್ರೆವಿಸ್ 25 ಸೆಕೆಂಡ್​ಗಳ ಬಳಿಕ ತೆಗೆದುಕೊಂಡಿದ್ದಾರೆ. ಹೀಗಾಗಿ ಅಂಪೈರ್ ಮನವಿಯನ್ನು ತಿರಸ್ಕರಿಸಿದರು.

ಇದರಿಂದಾಗಿ ಡೆವಾಲ್ಡ್ ಬ್ರೆವಿಸ್ ಮೇಲ್ಮನವಿ ಇಲ್ಲದೆ ಪೆವಿಲಿಯನ್​ಗೆ ಹಿಂತಿರುಗಬೇಕಾಯಿತು. ಕುತೂಹಲಕಾರಿ ವಿಷಯ ಎಂದರೆ ಅದು ನಾಟೌಟ್ ಆಗಿತ್ತು. ಅಂದರೆ ರಿಪ್ಲೇ ವಿಡಿಯೋದಲ್ಲಿ ಡೆವಾಲ್ಡ್ ಬ್ರೆವಿಸ್ ಕಾಲಿಗೆ ತಾಗಿದ ಚೆಂಡು ವಿಕೆಟ್​ನಿಂದ ದೂರ ಸಾಗುತ್ತಿರುವುದು ಕಂಡು ಬಂದಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಅಂಪೈರ್ ಔಟ್ ಎಂದು ತೀರ್ಪು ನೀಡಿದ ಬಳಿಕ ಓಡಿದ ರನ್​ಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದು. ಅಲ್ಲದೆ ಡಿಆರ್​ಎಸ್​ ತೆಗೆದುಕೊಳ್ಳುವ ಮುನ್ನ ಓಡಿದ ರನ್​ಗಳನ್ನು ನೀಡಲಾಗುವುದಿಲ್ಲ.

ಈ ಸಾಮಾನ್ಯ ನಿಯಮಗಳು ಕೂಡ ರವೀಂದ್ರ ಜಡೇಜಾ ಹಾಗೂ ಡೆವಾಲ್ಡ್ ಬ್ರೆವಿಸ್​ಗೆ ಗೊತ್ತಿರಲಿಲ್ಲ. ಪರಿಣಾಮ ಡಿಆರ್​ಎಸ್​ ತೆಗೆದುಕೊಳ್ಳದೇ ರನ್​ಗಾಗಿ ಓಡಿದ್ದಾರೆ.

ಹೀಗೆ ರನ್​ಗಳಿಸಲು ಓಡಿದ್ದರ ಪರಿಣಾಮ ಡೆವಾಲ್ಡ್ ಬ್ರೆವಿಸ್ ಡಿಆರ್​ಎಸ್ ಅವಕಾಶವನ್ನು ತಪ್ಪಿಸಿಕೊಂಡರು. ಅಲ್ಲದೆ ನಾಟೌಟ್ ಆಗಿದ್ದರೂ, ರಿವ್ಯೂ ಅವಕಾಶವಿಲ್ಲದೆ ಬ್ರೆವಿಸ್ ಪೆವಿಲಿಯನ್​​ ಸೇರಬೇಕಾಯಿತು.

ಒಂದು ವೇಳೆ  ಅತ್ಯುತ್ತಮ ಫಾರ್ಮ್​ನಲ್ಲಿದ್ದ ಬ್ರೆವಿಸ್ ಕಡೆಯಿಂದ ಒಂದೆರಡು ಬಿಗ್ ಹಿಟ್ ಮೂಡಿಬಂದಿದ್ದರೆ ಸಿಎಸ್​ಕೆ ತಂಡವು ಗೆಲ್ಲುವ ಅವಕಾಶವಿರುತ್ತಿತ್ತು. ಆದರೆ ಡಿಆರ್​ಎಸ್​ ನಿಯಮ ಗೊತ್ತಿಲ್ಲದೆ ಸಿಎಸ್​ಕೆ ಬ್ಯಾಟರ್​ಗಳು ಮಾಡಿದ ಪ್ರಮಾದದಿಂದಾಗಿ ಚೆನ್ಣೈ ಸೂಪರ್ ಕಿಂಗ್ಸ್ ತಂಡವು 2 ರನ್​ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.