ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ: ಏನೆಲ್ಲ ಚರ್ಚೆ?

ಹರೀಶ್ ಜಿ.ಆರ್​. Edited By:

Updated on: May 27, 2026 | 3:57 PM

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತ ಎನ್ನಲಾಗುತ್ತಿದೆಯಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕುರಿತು ಇನ್ನೂ ಮೌನ ಮುರಿದಿಲ್ಲ. ಈ ನಡುವೆ ತಮ್ಮ ಆಪ್ತ ವರ್ಗದ 30ಕ್ಕೂ ಹೆಚ್ಚು ಶಾಸಕರೊಂದಿಗೆ ಅವರು ಸಭೆ ನಡೆಸಿರೋದು ಭಾರಿ ಕುತೂಹಲ ಮೂಡಿಸಿದೆ. ಈ ವೇಳೆ ಹೈಕಮಾಂಡ್​​ನ ರಾಜ್ಯ ಸಭೆ ಆಫರ್​​ ಬಗ್ಗೆಯೂ ತಿಳಿಸಿರುವ ಸಿಎಂ, ತಮಗೆ ರಾಜ್ಯ ರಾಜಕಾರಣದಲ್ಲಿಯೇ ಇರುವ ಇಚ್ಛೆ ಬಗ್ಗೆಯೂ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಮೇ 27: ನಾಯಕತ್ವ ಬದಲಾವಣೆ ರಾಜ್ಯದಲ್ಲಿ ನಿಶ್ಚಿತ, ಹಾಲಿ ಸಿಎಂ ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯ ನಡುವೆಯೂ ಈ ಕುರಿತ ಗೌಪ್ಯತೆಯನ್ನು ಸಿದ್ದರಾಮಯ್ಯ ಕಾಯ್ದುಕೊಂಡಿದ್ದಾರೆ. ಎಲ್ಲೂ ಈ ಬಗ್ಗೆ ಮೌನ ಮುರಿಯದ ಅವರು, ಕಾವೇರಿ ನಿವಾಸದಲ್ಲಿ 30ಕ್ಕೂ ಹೆಚ್ಚು ಶಾಸಕರ ಜೊತೆ ಸಭೆ ನಡೆಸಿರೋದು ಕುತೂಹಲ ಮೂಡಿಸಿದೆ. ಸಚಿವರು, ಶಾಸಕರೊಂದಿಗೆ ನವದೆಹಲಿಯಲ್ಲಿ ನಡೆದ ಸಭೆ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ತುರ್ತಾಗಿ ರಾಜೀನಾಮೆ ನೀಡದಂತೆ ಸಿದ್ದರಾಮಯ್ಯಗೆ ಶಾಸಕರು ಮನವಿ ಮಾಡಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಿ. ಶಾಸಕರ ಅಭಿಪ್ರಾಯದ ಬಳಿಕ ರಾಜೀನಾಮೆ ಬಗ್ಗೆ ನಿರ್ಧಾರ ಮಾಡಿ ಎಂದು ಆಗ್ರಹಿಸಿದ್ದಾರೆ. ಶಾಸಕರ ಸಹಿ ಸಂಗ್ರಹ ಬಗ್ಗೆಯೂ ಕೆಲವು ಸಚಿವರು ಸಲಹೆ ನೀಡಿದ್ದಾರೆ. ಆದರೆ ಸಹಿ ಸಂಗ್ರಹಕ್ಕೆ ಒಪ್ಪದ ಸಿಎಂ ಸಿದ್ದರಾಮಯ್ಯ, ಶಾಸಕರು ಎಷ್ಟೇ ಒತ್ತಡ ಹೇರಿದರೂ ಮೌನವಾಗಿ ಇದ್ದರು. ನಾಳೆ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಎಂದಷ್ಟೇ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Harish GR