2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ: ವಿಶೇಷತೆ ಏನ್ಗೊತ್ತಾ?
ಕೊಪ್ಪಳ ಜಿಲ್ಲೆಯ ವನಬಳ್ಳಾರಿ ಗ್ರಾಮದ 700 ವರ್ಷಗಳ ಇತಿಹಾಸವಿರುವ ದ್ಯಾಮವ್ವ ದೇವಿ ದೇವಸ್ಥಾನವನ್ನು ಗ್ರಾಮಸ್ಥರು ಸುಮಾರು 2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದಾರೆ. ಉಡುಪಿ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಈ ದೇಗುಲದಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲಾಯಿತು. ಇದು ಗ್ರಾಮಸ್ಥರ ಶ್ರದ್ಧೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ.
ಕೊಪ್ಪಳ, ಆಗಸ್ಟ್ 21: ಕೊಪ್ಪಳ ತಾಲೂಕಿನ ವನಬಳ್ಳಾರಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸುಮಾರು 700 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಪ್ರಸಿದ್ಧ ದ್ಯಾಮವ್ವ ದೇವಿ ದೇವಸ್ಥಾನವನ್ನು ಗ್ರಾಮಸ್ಥರೇ ಜೀರ್ಣೋದ್ಧಾರಗೊಳಿಸಿದ್ದಾರೆ. ಬರೋಬ್ಬರಿ 2 ಕೋಟಿ ರೂ ವೆಚ್ಚದಲ್ಲಿ ಕರಾವಳಿಯ ಉಡುಪಿ ಶೈಲಿಯಲ್ಲಿ ಜೀರ್ಣೋದ್ಧಾರಗೊಳಿಸಿದ್ದು, ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ಕಾರ್ಕಳ ಹಾಗೂ ಉಡುಪಿಯ ಯತಿಗಳ ಸಮ್ಮುಖದಲ್ಲಿ ದೇವಿಯ ಮೂರ್ತಿ ಪುನರ್ಪ್ರತಿಷ್ಠಾಪನೆ ಮಾಡಲಾಯಿತು. ಕಳೆದ ಜನವರಿಯಲ್ಲಿ ದೇವಿಯ ಅಪ್ಪಣೆ ಪಡೆದು ಹಳೆಯ ಕಟ್ಟಡವನ್ನು ತೆರವುಗೊಳಿಸಿದ ಬಳಿಕ, ಉಡುಪಿಯಿಂದಲೇ ತರಿಸಲಾದ ವಿಶೇಷ ಕಲ್ಲುಗಳು ಹಾಗೂ ಖ್ಯಾತ ಶಿಲ್ಪಿಗಳಾದ ಅಣ್ಣಪ್ಪ ಮತ್ತು ಸುರೇಶ್ ಅವರ ಮಾರ್ಗದರ್ಶನದಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ನಿರಂತರವಾಗಿ ಈ ಸುಂದರ ಕೆತ್ತನೆಯ ಮಠದ ಮಾದರಿಯ ದೇವಾಲಯವನ್ನು ನಿರ್ಮಿಸಲಾಗಿದ್ದು, ಗರ್ಭಗುಡಿಯಲ್ಲಿ ದ್ಯಾಮವ್ವ ದೇವಿಯ ಜೊತೆಗೆ ನಾಗದೇವತೆ ಹಾಗೂ ಪಾಂಡುರಂಗನ ಗದ್ದಿಗೆಗಳನ್ನೂ ಪ್ರತಿಷ್ಠಾಪಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
